ಚಿಕ್ಕೋಡಿ(ಬೆಳಗಾವಿ): ಆರ್ಎಸ್ಎಸ್ ಕಚೇರಿಯಲ್ಲಿ ಬಸವೇಶ್ವರ, ಅಂಬೇಡ್ಕರ್ ಅವರ ಭಾವಚಿತ್ರ ಹಾಕುವುದಿಲ್ಲ. ಆ ಮಹಾನ್ ವ್ಯಕ್ತಿಗಳ ಜಯಂತಿ ಕೂಡ ಆಚರಿಸುವುದಿಲ್ಲ. ಬಿಜೆಪಿ ಆರ್ಎಸ್ಎಸ್ ಮನುವಾದಿಗಳು ಎಂದು ಮತ್ತೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಆರ್ಎಸ್ಎಸ್ ವಿರುದ್ಧ ಹರಿಹಾಯ್ದರು. ಅವರು ಬೆಳಗಾವಿ ಜಿಲ್ಲೆಯ ಯಮಕರಮಡಿ ತಾಲೂಕಿನ ಶಹಬಂದರ್ ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ಬಿಜೆಪಿ ಆಫೀಸಿನಲ್ಲಿ ಬಸವೇಶ್ವರ ಹಾಗೂ ಅಂಬೇಡ್ಕರ ಜಯಂತಿ ಮಾಡುವದಿಲ್ಲ, ಬಸವೇಶ್ವರ ಹಾಗೂ ಅಂಬೇಡ್ಕರ ವಿಚಾರಗಳ ವಿರುದ್ಧ ಬಿಜೆಪಿ ಅವರು ಹೋರಾಟ ಮಾಡಿದ್ದಾರೆ.
ಆರ್ಎಸ್ಎಸ್ ಕಚೇರಿಯಲ್ಲಿ ಬಸವೇಶ್ವರರ ಫೋಟೋ ಹಾಕುವದಿಲ್ಲ ಇನ್ನೂ ಅಂಬೇಡ್ಕರ ಭಾವಚಿತ್ರ ಅಳವಡಿಸುವದು ದೂರದ ಮಾತು. ಬಿಜೆಪಿ ಆರ್ಎಸ್ಎಸ್ ಮನುವಾದಿಗಳೇ ಬಸವೇಶ್ವರನ್ನು ಖುರ್ಚಿ ಬಿಟ್ಟು ಇಳಿಸಿದ್ದಾರೆ ಎಂದು ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಬಾಗಿಲಿನಿಂದ ಗೆಲ್ಲುವ ಬಿಜೆಪಿ: ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಯಾವತ್ತು ಮಾತನಾಡುವುದಿಲ್ಲ. ಅದಕ್ಕಾಗಿ ಜಾತಿ, ಧರ್ಮದ ವಿಚಾರವಾಗಿ ಮಾತನಾಡಿ ಹಿಂದಿನ ಬಾಗಿಲಿನಿಂದ ಚುನಾನವಣೆ ಗೆದ್ದವರು ಬಿಜೆಪಿಯವರು. ಅದು ಬಿಟ್ಟರೆ ಮೋದಿ ಗಾಳಿಯಲ್ಲಿ ತೇಲಿ ಗೆದ್ದವರೇ ಹೆಚ್ಚಿನವರು ಸ್ವಂತ ಶಕ್ತಿಯಿಂದ ಯಾರೂ ಗೆದ್ದಿಲ್ಲ. ಹೊರಗಡೆಯಿಂದ ಧರ್ಮದ ಬಗ್ಗೆ ಮಾತನಾಡುವವರನ್ನು ಕರೆಸಿ ಚುನಾವಣೆ ಪ್ರಚಾರ ಮಾಡಿವವರು ಇವರು. ಏಸಿ ಕಾರಿನಲ್ಲಿ ಬಂದು ಭಾಷಣ ಮಾಡಿ ಹೋಗುತ್ತಾರೆ. ನಿಜವಾದ ಜನರ ಸಮಸ್ಯೆ ಅವರೊಂದಿಗೆ ಬೆರೆತಾಗ ಮಾತ್ರ ಗೊತ್ತಾಗುತ್ತದೆ ಎಂದು ಹೇಳಿದರು.
ಚಕ್ರವರ್ತಿ ಸೂಲಿಬೆಲೆ ವಿರುದ್ಧ ಹರಿಹಾಯ್ದ ಸತೀಶ ಜಾರಕಿಹೊಳಿ: ಸೂಲಿಬೆಲೆ ಅಂಥ ಸುಳ್ಳುಗಾರರನನ್ನು ಕರೆಸಿಕೊಂಡು ಭಾಷಣ ಮಾಡಿಸಿದರೇ ಅದು ನಮ್ಮ ಜನರ ತಲೆಯಲ್ಲಿ ಹೋಗುವದಿಲ್ಲ. ಸೂಲಿಬೆಲೆ ಹಾಗೆ ಚೀರಾಡಿ ಭಾಷಣ ಮಾಡುವರು ನಮ್ಮ ಬಳಿಯೂ ಇದ್ದಾರೆ. ನಮಗೂ ಲಕ್ಸ್ ಸಾಬೂನು ಹಚ್ಚಿ ತೊಳೆಯಲು ಬರುತ್ತೆ. ಧರ್ಮ ಜಾತಿ ಬಿಟ್ಟು ಅಭಿವೃದ್ದಿ ವಿಚಾರದಿಂದ ಚುನಾವಣೆಗೆ ಬನ್ನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ವಿರುದ್ಧ ಆಕ್ರೋಶ: ಮೋದಿ ಗಾಳಿಯಲ್ಲಿ ನೀವು ಸಂಸದರಾಗಿ ಆಯ್ಕೆಯಾಗಿದ್ದೀರಿ, ನಿಮ್ಮದು ಸ್ವಂತ ಏನೂ ಇಲ್ಲ ಎಸಿ ಬಿಟ್ಟು ನಮ್ಮ ಹಾಗೆ ಬಿಸಿಲಿನಲ್ಲಿ ಬನ್ನಿ ಅಂದಾಗ ಜನ ಒಲಿಯುತ್ತಾರೆ. ನಾನು ಕ್ಷೇತ್ರಕ್ಕೆ ಬರದೇ ಹೋದರೂ ನನ್ನ ಜನ ಕಳೆದ ಬಾರಿ ಆಯ್ಕೆ ಮಾಡಿದ್ದಾರೆ. ಈ ಸಲ ದೆಹಲಿ, ಬೆಂಗಳೂರಿನಿಂದ ನಿಪ್ಪಾಣಿಯಿಂದ ಯಾರೇ ಬರಲಿ ನಮ್ಮವರು ಚುನಾವಣೆಗೆ ತಯಾರಿಸಿದ್ದಾರೆ ಎಂದೂ ಹೇಳಿದರು.
ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಯುದ್ಧಕ್ಕೆ ಸಜ್ಜಾಗಿರಿ: ಕಳೆದ ಬಾರಿ ಕೈಯಲ್ಲಿ ಶಸ್ತ್ರ ಇಲ್ಲದೇ ಗೆದ್ದಿದ್ದೇವೆ. ಕೈಯಲ್ಲಿ ಬಿಲ್ಲು ಬಾಣ ಇಲ್ಲದೇ ಕೈಯಿಂದ ಅಂಜಿಸಿ ಓಡಿಸಿದ್ದೇವೆ. ಈ ಸಲ ಎಲ್ಲಾ ತಯಾರಿಯಲ್ಲಿದ್ದೇವೆ ಕೋರೆಗಾಂವ ವಿಜಯೋತ್ಸವದ ರೀತಿಯಲ್ಲಿ ಶಸ್ತ್ರ ಇಲ್ಲದೇ 20 ಸಾವಿರ ಪೇಶ್ವೆಗಳನ್ನ ಸೋಲಿಸಿದಂತೆ ಈ ಬಾರಿ ವಿರೋಧಿಗಳನ್ನು ಸೋಲಿಸಬೇಕು. ಕಾರ್ಯಕರ್ತರು ಸೈನಿಕರ ಹಾಗೆ ಯುದ್ಧಕ್ಕೆ ತಯಾರಗಬೇಕು, ಯಮಕನಮರಡಿ ಅಷ್ಟೇ ಅಲ್ಲ ರಾಜ್ಯಕ್ಕೆ ನ್ಯಾಯ ಕೊಡಿಸಬೇಕಿದೆ ಎಂದು ಸತೀಶ ಜಾರಕಿಹೊಳಿ ಅವರು ಯುದ್ಧಕ್ಕೆ ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಸಂದೇಶ ನೀಡಿದರು.
ಇದನ್ನೂ ಓದಿ: ಕೈ ವಿರುದ್ಧ ಕಮಲ ಕಿಡಿ: ಬೆಳಗಾವಿಯಲ್ಲಿ ಹೊಡೆಯುತ್ತಿರುವ ಸೀಟಿ ಬಂದ್ ಮಾಡಿಸುವುದಾಗಿ ವಾಗ್ದಾನ