ಚಿಕ್ಕೋಡಿ: ಚುನಾವಣೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಹಾಯಕ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕಣವಿನಟ್ಟಿ ಗ್ರಾಮದಲ್ಲಿ ನಡೆದಿದೆ.
ಸುರೇಶ ಭೀಮಪ್ಪಾ ಸನದಿ ಮೃತಪಟ್ಟ ಸಹಾಯಕ ಅಧಿಕಾರಿ. ಹುಕ್ಕೇರಿ ತಾಲೂಕಿನ ಕಣವಿನಟ್ಟಿ ಗ್ರಾಮದ ಭೂತ್ ನಂ. 99ರಲ್ಲಿ ಚುನಾವಣೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸುರೇಶ ಅದೇ ಗ್ರಾಮದವನಾಗಿದ್ದು, ತನ್ನ ಮತ ಚಲಾಯಿಸಿ ಹೊರಗೆ ಬಂದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ತನ್ನ ಕೊನೆಗಳಿಗೆಯಲ್ಲಿ ಮತ ಚಲಾಯಿಸಿ ಇಹಲೋಕ ತ್ಯಜಿಸಿದ್ದಾನೆ. ಅಷ್ಟೇ ಅಲ್ಲದೆ ಇದೇ ತಿಂಗಳ 26 ರಂದು ಸುರೇಶನ ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.
ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವು
ಲೋಕಸಭೆ ಮೀಸಲು ಕ್ಷೇತ್ರಕ್ಕೆ ಇಂದು ನಡೆದ ಮತದಾನ ವೇಳೆ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಐರಸಂಗ ಗ್ರಾಮದ ಮತಗಟ್ಟೆ 32 ರಲ್ಲಿ ನಡೆದಿದೆ.
ಐರಸಂಗ ಗ್ರಾಮದ ಮಹಾದೇವಿ ಮಹಾದೇವಪ್ಪ ಸಿಂದಖೇಡ್ (55 )ಮೃತಪಟ್ಟ ಮಹಿಳೆ. ಐರಸಂಗ ಗ್ರಾಮದ ಮತಗಟ್ಟೆಗೆ ಮಧ್ನಾಹ್ನ ಆಗಮಿಸಿದ್ದ ಮಹಾದೇವಿ ಮತದಾನ ಮಾಡಿ ಹೊರಬರುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ