ಬೆಳಗಾವಿ: ಉಪಕುಲಪತಿ ಹುದ್ದೆಗೆ 5 ಕೋಟಿ ರೂಪಾಯಿಗೆ ಮಾರಾಟ ಆಗುತ್ತಿದೆ ಎಂಬ ಬಿಜೆಪಿ ಸಂಸದರ ಹೇಳಿಕೆ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು ಇದರ ತನಿಖೆ ಆಗಲಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಉಪಕುಲಪತಿ ಹುದ್ದೆಗೆ ಲಂಚ ನೀಡಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರು ಬಹಳ ಅನುಭವ ಹೊಂದಿರುವ ವಿದ್ಯಾವಂತರು. ಉಪಕುಲಪತಿಗಳ ಹುದ್ದೆಗೆ 5 ಕೋಟಿ ರೂ. ನೀಡಬೇಕು ಎಂದು ಸಂಸದರು ಹೇಳಿದ್ದಾರೆ ಎಂದರು.
ಇಡಿ, ಐಟಿ, ಸಿಬಿಐ, ಲೋಕಾಯುಕ್ತ ಸಂಸ್ಥೆಗಳು ಏನು ಮಾಡುತ್ತಿವೆ. ಈ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ಅವರ ಕಚೇರಿ ಮೇಲೆ ಆರೋಪ ಮಾಡಲು ಆಗುವುದಿಲ್ಲ. ಅದು ಸರಿಯಲ್ಲ. ಉಪಕುಲಪತಿಗಳ ಹೆಸರನ್ನು ಸರ್ಕಾರ ಶಿಫಾರಸು ಮಾಡಿದರೆ ರಾಜ್ಯಪಾಲರು ನೇಮಕ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಸರ್ಕಾರದಲ್ಲಿ ಯಾರಿಗೆ ಈ ಹಣ ತಲುಪಿದೆ? ಮಂತ್ರಿಗಳಿಗೆ ತಲುಪಿದೆಯೋ? ಅಧಿಕಾರಿಗಳಿಗೆ ತಲುಪಿದೆಯೋ? ಎಂಬುದು ಚರ್ಚೆ ಆಗಬೇಕು. ಅದಕ್ಕಾಗಿ ವಿಧಾನ ಪರಿಷತ್ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಾಗಿದೆ. ಕೂಡಲೇ ಲೋಕಾಯುಕ್ತ, ಇಡಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ನಮ್ಮ ಮೇಲೆ ದಾಳಿ ಮಾಡಿ ತನಿಖೆ ಮಾಡುವವರು ಇವರ ಹೇಳಿಕೆ ವಿಚಾರದಲ್ಲೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿಬಿಐನವರು ನನ್ನ ಜತೆ ವ್ಯವಹಾರ ಇಟ್ಟುಕೊಂಡವರಿಗೆಲ್ಲ ನೋಟಿಸ್ ನೀಡಿ ವಿಚಾರಣೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಗುರುವಾರ ಚರ್ಚೆ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ. ಶಿಕ್ಷಣ ವ್ಯವಸ್ಥೆಯ ಹುದ್ದೆ ಮಾರಾಟ ಭ್ರಷ್ಟಾಚಾರದ ವಿಚಾರವಾಗಿದ್ದು, ಬಿಜೆಪಿ ಸಂಸದರು ಹೇಳಿರುವ ವಿಚಾರವನ್ನು ನಾವು ಚರ್ಚೆ ಮಾಡದಿದ್ದರೆ ನಮ್ಮ ಕರ್ತವ್ಯದಲ್ಲಿ ಲೋಪ ಆಗಲಿದೆ. ಹೀಗಾಗಿ ಈ ವಿಚಾರ ತನಿಖೆ ಆಗಬೇಕು, ಜನರಿಗೆ ವಿಚಾರ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅವರು ಚೀನಾದಂತೆ ಆಕ್ರಮಣ ಮಾಡಿದ್ರೆ ನಾವು ಭಾರತೀಯ ಸೇನೆಯಂತೆ ಹಿಮ್ಮೆಟ್ಟಿಸುತ್ತೇವೆ: ಮಹಾ ನಾಯಕರಿಗೆ ಸಿಎಂ ಟಾಂಗ್