ಬೆಳಗಾವಿ: ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಅಶೋಕ ಪೂಜಾರಿ ಮನವೊಲಿಸಲು ಸ್ಥಳೀಯ ಬಿಜೆಪಿ ಮುಖಂಡರು ಕಸರತ್ತು ನಡೆಸಿದ್ದಾರೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪ್ರತಿನಿಧಿಯಾಗಿ ಸ್ಥಳೀಯ ಬಿಜೆಪಿ ಮುಖಂಡರು ಪೂಜಾರಿಯವರಿಗೆ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸಲು ಯತ್ನಿಸುತ್ತಿದ್ದಾರೆಂದು ಹೇಳಲಾಗ್ತಿದೆ.
ಬಿಜೆಪಿ ನಾಯಕರಾದ ಆನಂದ ಗೊಟಡಕಿ ಹಾಗೂ ಪರಶುರಾಮ್ ಭಗತ್, ಗೋಕಾಕ ನಗರದ ಅಂಬಿಗೇರ ಗಲ್ಲಿಯರುವ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅರ್ಧಗಂಟೆ ಪೂಜಾರಿಯ ಜೊತೆ ಗೌಪ್ಯ ಸಭೆ ನಡೆಸಿ, ಮನವೊಲಿಕೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ. ಆದರೆ ಬಿಜೆಪಿ ನಾಯಕರ ಮನವೊಲಿಕೆಗೆ ಜಗ್ಗದ ಅಶೋಕ್ ಪೂಜಾರಿ, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದಿದ್ದಾರೆ ಎಂದು ತಿಳಿದು ಬಂದಿದೆ.