ಬೆಳಗಾವಿ : ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಅಧ್ಯಕ್ಷರಾಗಿ ಕಾಂಗ್ರೆಸ್ನ ಹಿರಿಯ ಮುಖಂಡ ಯುವರಾಜ ಕದಂ ಹಾಗೂ ಕಾಂಗ್ರೆಸ್ ಬೆಂಬಲಿತ ಮಹಾದೇವಿ ಖಾನಗೌಡರ(ಹುದಲಿ) ಅವಿರೋಧ ಆಯ್ಕೆ ಆಗಿದ್ದಾರೆ.
ನಗರದ ಎಪಿಎಂಸಿ ಸಭಾ ಭವನದಲ್ಲಿ ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಯುವರಾಜ ಕದಂ, ಸುಧೀರ ಗಡ್ಡೆ, ಸಂಜು ಮಾದರ್ ಹಾಗೂ ಬಿಜೆಪಿಯ ರೇಣುಕಾ ಪಾಟೀಲ ನಾಮಪ ಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ನ ಇಬ್ಬರು ಹಾಗೂ ಬಿಜೆಪಿ ಸದಸ್ಯರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಣದಲ್ಲಿ ಯುವರಾಜ ಕದಂ ಒಬ್ಬರೇ ಉಳಿದುಕೊಂಡಿದ್ದರು. ಹೀಗಾಗಿ ಎಪಿಎಂಸಿ ಅಧ್ಯಕ್ಷರಾಗಿ ಯುವರಾಜ ಕದಂ, ಉಪಾಧ್ಯಕ್ಷರಾಗಿ ಮಹಾದೇವಿ ಖಾನಗೌಡರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಈ ಆಯ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೂಚನೆ ಮೇರೆಗೆ ಎಪಿಎಂಸಿಯ 11ಜನ ಚುನಾಯಿತ ಸದಸ್ಯರು ಒಮ್ಮತಕ್ಕೆ ಬಂದಿರುವ ಹಿನ್ನೆಲೆ ಅಧ್ಯಕ್ಷ-ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಪ್ರದಿನಿಧಿಸುವ ಗ್ರಾಮೀಣ ಕ್ಷೇತ್ರಕ್ಕೆ ಎಪಿಎಂಸಿ ಅಧ್ಯಕ್ಷ ಸ್ಥಾನ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ. 17 ಸದಸ್ಯರ ಬಲ ಹೊಂದಿರುವ ಎಪಿಎಂಸಿಯಲ್ಲಿ ಅಧ್ಯಕ್ಷ ಗಾದಿಗೆ ಬಿಜೆಪಿ ಯತ್ನಿಸದೇ ಮೌನವಾಗಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದಲ್ಲಿ ಘಟಾನುಗಟಿ ನಾಯಕರಿದ್ದರೂ ಎಪಿಎಂಸಿ ಸ್ಥಾನಕ್ಕೆ ಪ್ರಯತ್ನಿಸದೇ ಸೋಲುಂಡಿರೋದು ಬಿಜೆಪಿ ಮುಜುಗರ ಅನುಭವಿಸಿದೆ. ಇದಲ್ಲದೇ ಬಿಜೆಪಿಯ ಯಾವೊಬ್ಬ ನಾಯಕರು ಎಪಿಎಂಸಿಯತ್ತ ಸುಳಿಯದೇ ಇರುವುದುರಿಂದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.