ಅಥಣಿ(ಬೆಳಗಾವಿ): ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಾಳೆ ಸುಪ್ರಿಂಕೋರ್ಟ್ನಲ್ಲಿ ಅಂತಿಮ ತೀರ್ಪು ಹೊರಬರುವ ಹಿನ್ನೆಲೆ ನಿಪ್ಪಾಣಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪ್ರವಾಸಿ ಮಂದಿರದಲ್ಲಿ ಮಹಾರಾಷ್ಟ್ರ ಕೊಲ್ಲಾಪುರ IGP, ಸಾಂಗ್ಲಿ ಎಸ್ಪಿ ಅವರ ನೇತೃತ್ವದಲ್ಲಿ ಕರ್ನಾಟಕ ಬೆಳಗಾವಿ IG, ಬೆಳಗಾವಿ ಕಮೀಷನರ್, ಬೆಳಗಾವಿ SP ಹಾಗೂ ಗಡಿಭಾಗದ ಎಲ್ಲಾ DYSP ಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆ ನಂತರ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮದ ಜೊತೆ ಮಾತನಾಡಿ, ಕಳೆದ ವಾರ ಕರ್ನಾಟಕದ ಬಸ್ಗಳ ಮೇಲೆ ಮಹಾರಾಷ್ಟ್ರ ರಾಜ್ಯದಲ್ಲಿ ಕೆಲವರು ಕಲ್ಲು ತೂರಿ ಮಸಿ ಬಳೆದಿದ್ದರು. ಇದಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದವು. ಮುಂದೆ ಈ ರೀತಿ ಆಗಬಾರದು ಮತ್ತು ನಾಳೆ ಗಡಿ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ಗೆ ಬರಲಿದೆ. ಈ ಕಾರಣಕ್ಕೆ ಸಭೆ ನಡೆಸಲಾಗಿದೆ ಎಂದರು.
ನಾಳೆ ತೀರ್ಪು ಬಂದರೆ ಮತ್ತೆ ಏನೂ ಗಲಾಟೆ ಆಗಬಾರದು ಅನ್ನೋ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮೂರು ಕಡೆಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ ಜಂಟಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಬೆಳಗಾವಿ ಗಡಿಯಲ್ಲಿ ಒಟ್ಟು 21 ಚೆಕ್ ಪೋಸ್ಟ್ಗಳ ನಿರ್ಮಾಣ ಮಾಡಿ ಭದ್ರತೆ ಒದಗಿಸಲಾಗಿದೆ.
ಗಡಿ ಭಾಗದ ಎಲ್ಲ ಎಸ್ಪಿಗಳಿಗೆ ನಿರ್ದೇಶನ: ದಿನನಿತ್ಯ ನಾಲ್ಕು ನೂರಕ್ಕೂ ಅಧಿಕ ಕರ್ನಾಟಕ ಬಸ್ಗಳು ಮಹಾರಾಷ್ಟ್ರ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಮಹಾರಾಷ್ಟ್ರದಿಂದ 176 ಬಸ್ಗಳು ರಾಜ್ಯಕ್ಕೆ ಆಗಮಿಸುತ್ತವೆ. ಅಲ್ಲಿ ನಮ್ಮ ವಾಹನಗಳಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಚರ್ಚೆ ಮಾಡಲಾಯಿತು.
ಸದ್ಯ ಜಿಲ್ಲೆಯಲ್ಲಿ 21 ಚೆಕ್ಪೋಸ್ಟ್ ಬೆಳಗಾವಿಯಲ್ಲಿದೆ. ಗಡಿ ಭಾಗದ ಎಲ್ಲ ಎಸ್ಪಿಗಳಿಗೆ ನಿರ್ದೇಶನ ನೀಡಿದ್ದೇವೆ. ನಮ್ಮ ಭಾಗದಲ್ಲಿ ಇಂದು ಸಂಜೆಯಿಂದ ಗಸ್ತು ನಡೆಯಲಿದೆ. ಸುಪ್ರೀಂ ತೀರ್ಪಿನ ಬಳಿಕ ಅವಶ್ಯಕತೆ ಬಿದ್ದರೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುವುದೆಂದು ಮಾಹಿತಿ ನೀಡಿದರು.
ಅಧಿವೇಶನ ಸುಸೂತ್ರವಾಗಿ ನಡೆಯಬೇಕು. ಚುನಾವಣೆ ವರ್ಷ ಇದೆ. ಕಿಡಿಗೇಡಿಗಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು. ಡಿಸೆಂಬರ್ ವೇಳೆಗೆ ಎರಡು ಮಹಾರಾಷ್ಟ್ರ ಸಚಿವರು ಬೆಳಗಾವಿ ನಗರಕ್ಕೆ ಬಂದು ಸಭೆ ನಡೆಸಲಿದ್ದಾರೆ ಎಂಬ ಮಾಹಿತಿಯಿದೆ. ಇದು ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಬಂದ್ರೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ: ಇದೇ ವೇಳೆ ನಿಪ್ಪಾಣಿ ಮಹಾರಾಷ್ಟ್ರ ಗಡಿ ಚೆಕ್ ಪೋಸ್ಟ್ಗೆ ಭೇಟಿ ನೀಡಿ, ಅಲ್ಲಿನ ಪ್ರಯಾಣಿಕರ ಜೊತೆ ಸಮಾಲೋಚನೆ ನಡೆಸಿದರು. ಮಹಾರಾಷ್ಟ್ರ ಸಾರಿಗೆ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಎರಡು ರಾಜ್ಯಗಳಲ್ಲಿ ಶಾಂತಿ ಕಾಪಾಡುವಂತೆ ಮನವಿ ಸಲ್ಲಿಸಿದರು.
ಓದಿ: ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ.. ರಾಜ್ಯದ ಪರ ಸಮರ್ಥ ವಾದ ಮಂಡನೆ: ಸಿಎಂ ಬೊಮ್ಮಾಯಿ