ಬೆಳಗಾವಿ: ಮಹಾಮಾರಿ ಕೊರೊನಾ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ 20 ಸಾವಿರ ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ರೈಲ್ವೆ ಬೋರ್ಡ್ಗೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯಲ್ ನಿರ್ದೇಶನ ಕೊಟ್ಟಿದ್ದಾರೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿ ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಹುಬ್ಬಳ್ಳಿಯ ಡಿವಿಜನ್ಗೆ 312 ಕೋಚ್ಗಳನ್ನು ವಾರ್ಡ್ಗಳಾಗಿ ಮಾಡಲು ಒಪ್ಪಿಗೆ ನೀಡಿದ್ದಾರೆ.
ಈಗಾಗಲೇ 15 ಬೆಡ್ಗಳನ್ನು ಮಾಡಿ ರೆಡಿ ಇಟ್ಟಿದ್ದಾರೆ. ಮುಂದೆ ಏನಾದರೂ ಅನಾಹುತ ಆದರೆ ಬೇಕಾದ ವ್ಯವಸ್ಥೆ ಇರಬೇಕು. ಚೀನಾದವರು 10 ದಿನಗಳಲ್ಲಿ ಸಾವಿರ ಬೆಡ್ಗಳ ಆಸ್ಪತ್ರೆ ನಿರ್ಮಿಸಿದ್ರು. ಒಂದೇ ದಿನದಲ್ಲಿ ಬೋಗಿಗಳಲ್ಲಿ 6,700 ಬೆಡ್ಗಳ ವ್ಯವಸ್ಥೆ ಮಾಡಿದ್ದೇವೆ. ಪ್ರಧಾನಿಯವರ ಆದೇಶ ಮೇರೆಗೆ ಜನರಿಗಾಗಿ ಈ ವ್ಯವಸ್ಥೆ ಮಾಡಿದ್ದೇವೆ ಎಂದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ರೈಲ್ವೆ ಇಲಾಖೆಯಿಂದ ಸಕಲ ವ್ಯವಸ್ಥೆ ಮಾಡಲಾಗಿದೆ. ಸೊಲ್ಲಾಪುರ-ಬೆಂಗಳೂರು ಮಾರ್ಗದಲ್ಲಿ ರೋಲ್ ಆನ್ ರೋಲ್ ಆಫ್ ಯೋಜನೆ ಜಾರಿಗೆ ತರಲಾಗಿದೆ. ಗೂಡ್ಸ್ ರೈಲಿನಲ್ಲಿ ಅಗತ್ಯ ವಸ್ತು ಪೂರೈಸುವ ಲಾರಿಗಳ ಸಾಗಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಭಯ ರಾಜ್ಯಗಳ ಮಧ್ಯೆ ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆದಿರುವುದು ದುರ್ದೈವದ ಸಂಗತಿ. ಭಗವಂತನ ದಯೆಯಿಂದ ಎಲ್ಲಾ ಸುಸೂತ್ರವಾಗಿ ಬಗೆಹರಿದರೆ ಏಪ್ರಿಲ್ 15ರಿಂದ ರೈಲು ಸಂಚಾರ ಆರಂಭವಾಗಲಿದೆ. ದುಷ್ಟ ಶಕ್ತಿಗಳು ಇದನ್ನು ಮುಂದುವರಿಸಲು ಬಯಸುತ್ತಿವೆ. ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರೋಣ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಆರೋಗ್ಯಕ್ಕಾಗಿ ತಮ್ಮ ಜೀವನ ಬದಿಗಿಟ್ಟು ನಮ್ಮನ್ನು ರಕ್ಷಿಸುತ್ತಿದ್ದಾರೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡ್ತೇನೆ ಎಂದರು.