ಮಾತಲ್ಲಿ ಹೇಳಿ ಸುಸ್ತಾದ ಬಿಬಿಎಂಪಿ ಅಧಿಕಾರಿಗಳು ಈಗ ಸಾವಿರಾರು ರುಪಾಯಿ ದಂಡ ಹಾಕುವ ಮೂಲಕ ಜಾಗೃತಿಯ ಬರೆ ಹಾಕಲು ಮುಂದಾಗಿದ್ದಾರೆ. ಐದು ಸಾವಿರದಿಂದ ಐವತ್ತು ಸಾವಿರದವರೆಗೆ ದಂಡ ಹಾಕಿ, ನಿಯಮ ಪಾಲಿಸುವಂತೆ ಪಾಲಿಕೆ ಒತ್ತಡ ಹೇರಿದೆ.
ಮಹಾಲಕ್ಷ್ಮಿ ಪುರ ವ್ಯಾಪ್ತಿಯ, ರಾಜಾಜಿನಗರದ ಎಂಪಾಯರ್ ಹೊಟೇಲ್ಗೆ 25,000 ರೂಪಾಯಿ ದಂಡ ವಿಧಿಸಿದಲ್ಲದೆ, ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ಲಾಸ್ಟಿಕ್ ಬಳಸುತ್ತಿದ್ದ ಮಹದೇವಪುರ ಝೋನ್ ಹೋಟೆಲ್ಗಳಿಗೆ 50 ಸಾವಿರ, ಚಿಕ್ಕಪೇಟೆ ವ್ಯಾಪ್ತಿಯ ಹೋಟೆಲ್ಗಳಿಗೆ 20500 ರೂಪಾಯಿ ದಂಡ ವಿಧಿಸಲಾಗಿದೆ. ಚರ್ಚ್ ಸ್ಟ್ರೀಟ್ ಭೀಮಾಸ್ ಹೋಟೆಲ್ ರಸ್ತೆಗೆ ನೀರು ಬಿಟ್ಟಿರುವುದರಿಂದ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಯಶವಂತಪುರದ ಕೆಲ ಹೋಟೆಲ್ಗಳಿಗೆ 25 ಸಾವಿರ ರೂಪಾಯಿ ದಂಡ ಹಾಗೂ ಕಸವನ್ನು ರಸ್ತೆಗೆ ಎಸೆದು ಬೆಂಕಿ ಹಾಕಿರುವುದಕ್ಕೆನಂದಿನಿ ಲೇಔಟ್ನ ನಿರುಪಮ್ ಲೀತು ಫ್ಯಾಕ್ಟರಿಗೆ 50 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಹೋಟೆಲ್ ಹಾಗೂ ವಾಣಿಜ್ಯ ಕಟ್ಟಡಗಳಂತಹ ಬಲ್ಕ್ ಕಸ ಉತ್ಪತ್ತಿ ಮಾಡುವವರು, ಸರಿಯಾದ ಕ್ರಮದಲ್ಲಿ ಕಸವನ್ನು ನಿರ್ವಹಣೆ ಮಾಡಬೇಕಾಗಿರುತ್ತದೆ. ಹಸಿ ಕಸ ಒಣ ಕಸ ವಿಂಗಡಿಸಿ, ನೀಡಬೇಕಾಗುತ್ತದೆ. ಅದರ ಬದಲು ರಸ್ತೆಗೆ ಎಸೆಯೋದು ಅಥವಾ ರಾಜಕಾಲುವೆಗಳಿಗೆ ಎಸೆಯೋದು, ಅಥವಾ ಸುಟ್ಟು ಹಾಕುವುದು ಮಾಡಿದರೆ ಪಾಲಿಕೆ ಅಧಿಕಾರಿಗಳು ತಕ್ಕ ಪಾಠ ಕಲಿಸಲಿದ್ದಾರೆ.
ಇದೀಗ ಸ್ಲಿಪ್ ಹರಿದು ದಂಡ ಹಾಕುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಇನ್ನು ಕೆಲವೇ ದಿನಗಳಲ್ಲಿ ದಂಡ ವಿಧಿಸುವುದಕ್ಕಾಗಿಯೇ ಅಭಿವೃದ್ಧಿಪಡಿಸಿದ ಆಪ್ ಮೂಲಕ ದಂಡ ವಿಧಿಸಲಿದ್ದಾರೆ. ಹೀಗಾಗಿ ಪಾಲಿಕೆಯ ಕಣ್ತಪ್ಪಿಸುತ್ತಿರುವ ಪ್ಲಾಸ್ಟಿಕ್ ಬಳಕೆದಾರರು, ಇನ್ಮುಂದೆಯಾದ್ರು ಎಚ್ಚೆತ್ತುಕೊಳ್ಳೋದು ಒಳಿತು. ಇಲ್ಲದಿದ್ರೆ ದಂಡ ಪಾವತಿಸಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳೋದು ಗ್ಯಾರಂಟಿ.