ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಬೆಂಗಳೂರು ಸಂಚಾರ ಸುಗಮವಾಗಿರುತ್ತದೆ. ಜಾಮ್ ಅನ್ನುವ ಪದಕ್ಕೆ ಅರ್ಥವೇ ಇರಲ್ಲ ಅಂದುಕೊಳ್ಳುವುದು ನಿಜಕ್ಕೂ ತಪ್ಪು. ಇಂದು ನಗರದ ಮೇಖ್ರಿ ವೃತ್ತದ ಸಮೀಪ ಸಂಚಾರ ದಟ್ಟಣೆ ಹಲವು ಸವಾರರನ್ನು ಕಾಡಿತು. ಬೆಳಗ್ಗೆ ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರ ಜಂಕ್ಷನ್ವರೆಗಿನ ಮಾರ್ಗದಲ್ಲಿ ಅದರಲ್ಲೂ ಅರಮನೆ ಮೈದಾನ ಭಾಗದಲ್ಲಿ ವಿಪರೀತ ಸಂಚಾರ ದಟ್ಟಣೆ ಕಾಣಿಸಿಕೊಂಡಿತು. ಏಕಕಾಲಕ್ಕೆ ಒಂದಿಷ್ಟು ವಾಹನಗಳು ದಟ್ಟಣೆಯಲ್ಲಿ ಸಿಲುಕಿ ಪರದಾಡಬೇಕಾಯಿತು.
ಬೆಂಗಳೂರಿನ ನಿವಾಸಿ ಶ್ರೀಧರ್ ಎಂಬುವರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಗರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರ್ಯ ಆಗುತ್ತಿಲ್ಲ. ಸಾಮಾಜಿಕ ಅಂತರ ಮನಸ್ಸಿದ್ದರೆ ಮಾಡಬಹುದು. ಆದರೆ ನಗರದಲ್ಲಿ ಇಂದು ಕಂಡ ಜನಸಂದಣಿ ನಿಜಕ್ಕೂ ಅಚ್ಚರಿ ಮೂಡಿಸಿತು ಎಂದಿದ್ದಾರೆ. ಕಾವೇರಿ ಜಂಕ್ಷನ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದದ್ದು ಕೂಡ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಸೃಷ್ಟಿಸಿದೆ ಎಂದು ಕೆಲವರು ಹೇಳಿದ್ದಾರೆ. ಒಂದೊಂದೇ ವಾಹನ ತಪಾಸಣೆ ಮಾಡಿ ಬಿಡುತ್ತಿರುವ ಹಿನ್ನೆಲೆ ಸಮಸ್ಯೆಯಾಗುತ್ತಿದೆ. ಹೆಚ್ಚು ಸಿಬ್ಬಂದಿ ನೇಮಿಸಿ, ವೇಗವಾಗಿ ತಪಾಸಣೆ ನಡೆಸಿದರೆ ಉತ್ತಮ ಎನ್ನುವ ಅಭಿಪ್ರಾಯ ಕೂಡ ಕೆಲವರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕಳೆದ ಮೂರು ದಿನದಿಂದ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹಾಗಂದ ಮಾತ್ರಕ್ಕೆ ನಿಯಮಗಳು ಸಡಿಲವಾಗಿವೆ ಎಂಬ ಮಟ್ಟಕ್ಕೆ ವಾಹನಗಳು ರಸ್ತೆಗಿಳಿದಿವೆ. ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಪತ್ರ ಬರೆದಿದ್ದು, ನಗರದಲ್ಲಿ ಇಷ್ಟೊಂದು ವಾಹನಗಳು ಏಕೆ ಸಂಚರಿಸುತ್ತಿವೆ ಎಂದು ಕೇಳಿದ್ದಾರೆ.
ನಗರದಲ್ಲಿ ಪೊಲೀಸರ ಕೈ ಕಟ್ಟಿಹಾಕಿರುವ ಸರ್ಕಾರ, ಲಾಠಿ ಎತ್ತಲು ಅವಕಾಶ ನೀಡುತ್ತಿಲ್ಲ. ಯಾಕೆ ಎನ್ನುವುದು ನಿಗೂಢವಾಗಿದ್ದು, ಎಷ್ಟೇ ಬಿಗಿಯಾದ ತಪಾಸಣೆ ಕೈಗೊಂಡರೂ ಜನ ಮಾತ್ರ ರಸ್ತೆಗಿಳಿಯುವುದನ್ನು ನಿಲ್ಲಿಸಿಲ್ಲ. ಇದನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳಲೇಬೇಕಾಗಿದೆ. ಇಲ್ಲವಾದರೆ ಬೆಂಗಳೂರು ಕೊರೊನಾ ಹಬ್ ಆಗುವಲ್ಲಿ ಸಂಶಯವಿಲ್ಲ. ಮುಂಬೈ ಮಾದರಿಯಲ್ಲಿ ಬೆಂಗಳೂರು ಆದರೂ ಅಚ್ಚರಿ ಇಲ್ಲ ಎನ್ನಬಹುದು.