ಬೆಂಗಳೂರು : ಪ್ರಧಾನಿಯಾಗಿ ನರೇಂದ್ರ ಮೋದಿ ನಾಳೆ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಮೋದಿ ಜೊತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯದ ಸಚಿವ ಸ್ಥಾನದ ಆಕಾಂಕ್ಷಿ ಸಂಸದರುಗಳು ಬಿಜೆಪಿ ವರಿಷ್ಠರ ಫೋನ್ಕಾಲ್ಗಳಿಗಾಗಿ ಕಾಯುತ್ತಿದ್ದಾರೆ.
ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಣಿಸಿದ ಡಾ. ಉಮೇಶ್ ಜಾಧವ್, ಶೋಭಾ ಕರಂದ್ಲಾಜೆ, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಬೆಂಗಳೂರು ಉತ್ತರದ ಸಂಸದ ಡಿ.ವಿ ಸದಾನಂದಗೌಡ , ರಾಜ್ಯದಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿರುವ ಅನಂತ್ ಕುಮಾರ್ ಹೆಗಡೆ , ಮಾಜಿ ಪ್ರಧಾನಿ ದೇವೇಗೌಡರನ್ನು ಮಣಿಸಿದ ತುಮಕೂರು ಸಂಸದ ಜಿ.ಎಸ್ ಬಸವರಾಜು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದು, ಮೋದಿ ಸಂಪುಟ ಸೇರುವ ಕಾತರದಲ್ಲಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. 25 ಅಭ್ಯರ್ಥಿಗಳು ಚುನಾಯಿತರಾಗಿದ್ದು, ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಹೆಚ್ಚಿನ ಸಚಿವ ಸ್ಥಾನದ ಕೋಟಾ ಸಿಗಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲೂ ಮೂಡಿದೆ.
ಚುನಾವಣೆಯಲ್ಲಿ ಗೆದ್ದಿರುವ 25 ಸಂಸದರಲ್ಲಿ ಸುಮಾರು 18 ಸಂಸದರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿದ್ದಾರೆ. ಪ್ರಾದೇಶಿಕವಾರು, ಜಾತಿವಾರು, ಸಂಘ ಪರಿವಾರದ ಕೋಟಾ ಹೀಗೆ ಹಲವು ದೃಷ್ಟಿಕೋನಗಳಲ್ಲಿ ತಮಗೆ ಸಚಿವ ಸ್ಥಾನ ಸಿಗಬಹುದೆನ್ನುವ ನಂಬಿಕೆಯನ್ನು ಬಿಜೆಪಿ ಸಂಸದರು ಹೊಂದಿದ್ದಾರೆ.
ಹೇಗಿದೆ ಲೆಕ್ಕಾಚಾರ:
ಬ್ರಾಹ್ಮಣ ಸಮಯದಾಯದಿಂದ ಪ್ರಹ್ಲಾದ್ ಜೋಶಿ, ಅನಂತ್ ಕುಮಾರ್ ಹೆಗಡೆ, ಸಚಿವ ಪದವಿಗೆ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಕ್ಕಲಿಗರ ವಲಯದಿಂದ ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಕಸರತ್ತು ನಡೆಸುತ್ತಿದ್ದಾರೆ.
ಲಿಂಗಾಯತ ಸಮುದಾಯದಿಂದ ಬೆಳಗಾವಿ ಸಂಸದ ಸುರೇಶ್ ಅಂಗಡಿ, ಹಾವೇರಿ ಸಂಸದ ಶಿವಕುಮಾರ ಉದಾಸಿ, ತುಮಕೂರು ಸಂಸದ ಬಸವರಾಜ್, ಬಾಗಲಕೋಟೆ ಸಂಸದ ಗದ್ದೀಗೌಡರ್, ಮಾಜಿ ಕೇಂದ್ರ ಸಚಿವರಾದ ದಾವಣಗೆರೆ ಸಂಸದ ಸಿದ್ದೇಶ್ವರ್ ಅವರು ತಮಗೆ ಅವಕಾಶ ಸಿಗಬಹುದೆನ್ನುವ ನಿರೀಕ್ಷೆ ಹೊಂದಿದ್ದಾರೆ.
ಪರಿಶಿಷ್ಟ ಜಾತಿ, ವರ್ಗದಿಂದ ಕಲಬುರಗಿ ಸಂಸದ ಹಾಗೂ ಘಟಾನುಘಟಿ ನಾಯಕರೆಂದು ಹೆಸರಾದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿರುವ ಕೀರ್ತಿ ಪಡೆದಿರುವ ಡಾ. ಉಮೇಶ್ ಜಾಧವ್ , ಬಿಜಾಪುರದ ಸಂಸದ ರಮೇಶ್ ಜಿಗಜಿಣಗಿ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಸಚಿವ ಪದವಿ ಆಕಾಂಕ್ಷಿಗಳಾಗಿದ್ದಾರೆ.
ಅಮಿತ್ ಶಾ - ಮೋದಿ ಮನಸಲ್ಲೇನಿದೆ?
ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಹಳ ಲೆಕ್ಕಾಚಾರ ಹಾಕಿ ಅಳೆದು ತೂಗಿ ಸಂಸದರನ್ನು ಸಚಿವ ಹುದ್ದೆಗೆ ಆಯ್ಕೆ ಮಾಡಲಿದ್ದಾರೆ. ನಾಳೆ ಮೋದಿ ಸಂಪುಟಕ್ಕೆ ಸೇರಲಿರುವ ಅದೃಷ್ಟ ಯಾವ ಸಂಸದರಿಗಿದೆ ಎನ್ನುವ ಗುಟ್ಟನ್ನು ಮೋದಿ- ಶಾ ಜೋಡಿ ಇನ್ನೂ ಬಿಟ್ಟಕೊಡದಿರುವುದರಿಂದ ಕುತೂಹಲ ಹೆಚ್ಚಾಗಿದೆ.