ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಎರಡು ದಿನಗಳಿಗೆ ಸೀಮಿತವಾಗಿ ಯಾವುದೇ ನೈಟ್ ಕರ್ಫ್ಯೂ ಹೇರುವುದಿಲ್ಲ. ಆದರೆ ಬಹಿರಂಗ ಆಚರಣೆ ನಿಷೇಧಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಹೊಸ ವರ್ಷಾಚರಣೆ ಸಂಬಂಧ ಆರೋಗ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಡಿ.17 ರಂದು ಹೊರಡಿಸಿರುವ ಮಾರ್ಗಸೂಚಿಗೆ ಕೆಲ ಮಾರ್ಪಾಡು ಮಾಡಿ ಅಂತಿಮ ಮಾರ್ಗಸೂಚಿ ಹೊರಡಿಸುತ್ತೇವೆ. ನಗರ ಪೊಲೀಸ್ ಆಯುಕ್ತರು ಬೆಂಗಳೂರಿಗೆ ಸೀಮಿತವಾಗಿ ಮಾರ್ಗಸೂಚಿ ಹೊರಡಿಸಲಿದ್ದಾರೆ. ಡಿಜಿಯವರು ಇತರ ಜಿಲ್ಲೆಯ ನಗರಗಳಿಗೆ ಅನ್ವಯವಾಗುವ ಮಾರ್ಗಸೂಚಿ ಹೊರಡಿಸುತ್ತಾರೆ ಎಂದರು.
ರೆಸಾರ್ಟ್ಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಇರಲಿದೆ. ಮ್ಯೂಸಿಕ್, ಬ್ಯಾಂಡ್ ಬಳಕೆ ನಿಷೇಧಿಸಲಾಗಿದೆ. ಸಾರ್ವಜನಿಕ ಬಹಿರಂಗ ಆಚರಣೆಯನ್ನು ನಿಷೇಧಿಸಲಾಗುತ್ತದೆ. ಆಂತರಿಕವಾಗಿ ಆಚರಣೆಗೆ ನಿರ್ಬಂಧ ಇಲ್ಲ. ಪ್ರಮುಖ ರಸ್ತೆ, ಪ್ರದೇಶವಾರು ನಿರ್ಬಂಧ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಓದಿ : ಗೋ ಹತ್ಯೆ ನಿಷೇಧ ಮಸೂದೆ ಸುಗ್ರೀವಾಜ್ಞೆಗೆ ಸಚಿವ ಸಂಪುಟ ತೀರ್ಮಾನ; ಪ್ರಭು ಚವ್ಹಾಣ್
ರೂಪಾಂತರಿತ ವೈರಸ್ ಹರಡದಂತೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ. 27 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಯುಕೆಯಿಂದ ಬಂದವರು ಕಡ್ಡಾಯ ಟೆಸ್ಟ್ ಮಾಡಿಸಬೇಕು. ತಪ್ಪು ವಿಳಾಸ ಕೊಟ್ಟವರನ್ನು ಟ್ರ್ಯಾಕ್ ಮಾಡಿ ಟ್ರೇಸ್ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಅವರನ್ನು ಆದಷ್ಟು ಬೇಗ ಟ್ರೇಸ್ ಮಾಡುತ್ತೇವೆ ಎಂದರು.