ಬೆಂಗಳೂರು: ಮಾದಾರ ಚೆನ್ನಯ್ಯ, ಡೊಹಾರ ಕಕ್ಕಯ್ಯ, ಹರಳ್ಯ ಸೇರಿದಂತೆ ಅನೇಕ ಕಾಯಕ ಶರಣರು ತಮ್ಮ ಕಾಯಕದ ಜೊತೆಜೊತೆಗೆ ಸಾಮಾಜಿಕ ಸಮಾನತೆಗಾಗಿ ಅಪರಿಮಿತವಾಗಿ ಶ್ರಮಿಸಿದ್ದಾರೆ. ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿ ಸಾಮಾಜಿಕ ಸಮಾನತೆಗೆ ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಕವೇ ಶ್ರೇಷ್ಠ ಎಂದು ವಿಶ್ವಗುರು ಬಸವಣ್ಣ ಅವರು ಬಣ್ಣಿಸಿ ಕಾಯಕ ಶರಣರಿಗೆ ಹಾಗೂ ಅವರ ವೃತ್ತಿಗೆ ಗೌರವ ನೀಡಿದ್ದಾರೆ. ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿರುವುದರ ಜೊತೆಗೆ ಅಪಾರವಾದ ಸಾಮಾಜಿಕ ಕಳಕಳಿ ಹೊಂದಿದ್ದರು. ಅಪ್ಪನು ಮಾದರ ಚೆನ್ನಯ್ಯ, ಬೊಪ್ಪನು ದೊಹಾರ ಕಕ್ಕಯ್ಯ, ಚೆನ್ನಯ್ಯನ ದಾಸನ ಮಗನು ಕಕ್ಕಯ್ಯನ ದಾಸಿಯ ಮಗಳು ಸಂಗವ ಮಾಡಿ ಇವರಿಬ್ಬರಿಗೆ ಹುಟ್ಟಿದ ಮಗ ನಾನು ಎಂದು ತಮ್ಮ ವಚನಗಳಲ್ಲಿ ಹೇಳುವ ಮೂಲಕ ಸಾಮಾಜಿಕ ಸಮಾನತೆಗೆ , ತಳ ಸಮುದಾಯಕ್ಕೆ ಪ್ರಾಶ್ಯಶ್ಯ ನೀಡುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.
ಕಾಯಕ ಶರಣರ ಜನ್ಮ ದಿನಾಂಕ ಗೊತ್ತಿರಲಿಲ್ಲ, ಅವರ ಜನ್ಮ ದಿನಾಚರಣೆಗಳನ್ನು ಮಾಡುತ್ತಿರಲಿಲ್ಲ. ತಾವು ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಅವಧಿಯಲ್ಲಿ ಈ ಕಾಯಕ ಶರಣರ ಜನ್ಮ ದಿನಾಚರಣೆ ಮಾಡುವ ಮೂಲಕ ಸಮುದಾಯವು ಒಗ್ಗೂಡಿ ಕಲ್ಯಾಣದತ್ತ ಸಾಗಲು ಎನ್ನುವ ಆಶಯದೊಂದಿಗೆ ಈ ದಿನಾಚರಣೆ ಮಾಡಲು ನಿರ್ಧರಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಸ್ತಾವನೆಗೆ ಅನುಮೋದಿಸಿದರು. ಅಲ್ಲದೇ 23 ಸಾವಿರ ವಚನಗಳುಳ್ಳ 15 ಸಂಪುಟಗಳನ್ನು ಪ್ರಕಟಿಸಲಾಗಿದೆ. ಬಸವಣ್ಣ ಅವರ ವಚನಗಳು ವಿಶ್ವದಾದ್ಯಂತ ಪಸರಿಸಬೇಕು. ಸರ್ವಜ್ಞ ಅವರು ಬಸವ ರಾಜ್ಯ ಉದಯವಾಗಲಿ ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಸರ್ವಜ್ಞ ಈ ವಚನ ಸುಳ್ಳಾಗದೇ, ಅಂತಹ ದಿನಗಳು ಬಹುಬೇಗ ಬರಲಿ ಎಂದು ತಿಳಿಸಿದರು.