ಬೆಂಗಳೂರು: ಕ್ಯಾಬ್ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಗ್ರಾಹಕನಿಗೆ ಹಸ್ತಾಂತರಿಸುವ ಮೂಲಕ ಓಲಾ ಕ್ಯಾಬ್ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆ.ಆರ್.ಪುರಂ ರೈಲ್ವೇ ಸ್ಟೇಷನ್ ನಿಂದ ಮನೆಗೆ ಹೋಗಲು ರವಿಂದ್ರನ್ ಎಂಬುವರು ಕ್ಯಾಬ್ ಬುಕ್ ಮಾಡಿದ್ದರು. ಓಲಾ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಕಾರಿನ ಟಯರ್ ಪಂಚರ್ ಆಗಿದೆ. ಈ ವೇಳೆ ಚಾಲಕ ರೆಹಮಾನ್, ಕಾರ್ ಪಂಚರ್ ಆಗಿದೆ. ನೀವೂ ಮತ್ತೊಂದು ಕ್ಯಾಬ್ ಬುಕ್ ಮಾಡಿ ಹೊರಡಿ ಎಂದು ರವಿಂದ್ರನ್ ಗೆ ಚಾಲಕ ಮನವಿ ಮಾಡಿಕೊಂಡಿದ್ದರು.
ಬೇರೆ ಕ್ಯಾಬ್ ಬುಕ್ ಮಾಡಿಕೊಂಡು ಗಡಿಬಿಡಿಯಲ್ಲೇ ಜೊತೆಗಿದ್ದ ಬ್ಯಾಗ್ನ್ನು ಕ್ಯಾಬ್ನಲ್ಲೇ ಬಿಟ್ಟು ಹೋಗಿದ್ದರು. ಕೆಲ ಗಂಟೆಗಳ ಬಳಿಕ ಹಿಂಬದಿ ಸೀಟಿನಲ್ಲಿ ಬ್ಯಾಗ್ ಇರುವುದನ್ನು ಚಾಲಕ ಗಮನಿಸಿದ್ದಾರೆ. ಬ್ಯಾಗ್ ತೆಗೆದು ನೋಡಿದಾಗ 2.5 ಲಕ್ಷ ರೂ.ಮೌಲ್ಯದ ಲ್ಯಾಪ್ ಟಾಪ್, ಹಾಗೂ ಚಿನ್ನಾಭರಣ ಇರುವುದನ್ನು ಕಂಡ ಕೂಡಲೇ ರವೀಂದ್ರನ್ ಗೆ ಕರೆ ಮಾಡಿದ್ದಾರೆ. ಮಾರತಹಳ್ಳಿಗೆ ರವೀಂದ್ರನ್ ಅವರನ್ನು ಕರೆಸಿಕೊಂಡು ಬ್ಯಾಗ್ ಪ್ರಾಮಾಣಿಕವಾಗಿ ಒಪ್ಪಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಸಿಟಿ ಫೇಸ್ಬುಕ್ ಪೇಜಿನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೆ ಪ್ರಾಮಾಣಿಕತೆ ಮರೆದಿರುವ ಚಾಲಕನಿಗೆ ಬೆಂಗಳೂರು ಪೊಲೀಸರು ಗೌರವಿಸಬೇಕೆಂದು ಮನವಿ ಸಹ ಮಾಡಿಕೊಂಡಿದ್ದಾರೆ. ಇದೀಗ ಚಾಲಕನ ಪ್ರಾಮಾಣಿಕತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆ ವ್ಯಕ್ತವಾಗುತ್ತಿದೆ.