ETV Bharat / state

ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತ ಚರ್ಚೆ ಆರಂಭ: ಮುಂಚೂಣಿಯಲ್ಲಿ ಬೊಮ್ಮಾಯಿ‌ ಹೆಸರು

author img

By

Published : May 17, 2023, 3:31 PM IST

ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಆಯ್ಕೆ ಕಸರತ್ತು ಮುಂದುವರೆದಿದ್ದರೆ, ಇತ್ತ ಬಿಜೆಪಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಚರ್ಚೆ ಶುರುವಾಗಿದೆ.

Basavaraja Bommai
ಬಸವರಾಜ ಬೊಮ್ಮಾಯಿ‌

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತ ಚರ್ಚೆಗಳು ಕೇಸರಿ ಪಾಳಯದಲ್ಲಿ ಆರಂಭಗೊಂಡಿವೆ. ಪ್ರಮುಖ ನಾಯಕರ ಸೋಲು, ಕೆಲವರ ಚುನಾವಣಾ ರಾಜಕೀಯ ನಿವೃತ್ತಿ ಕಾರಣದಿಂದ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದು, ಸದ್ಯ ಹಂಗಾಮಿ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ‌ ಅವರನ್ನೇ ಕೆಲ ಸಮಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಚರ್ಚೆಗಳು ಆರಂಭಗೊಂಡಿವೆ. ಪಕ್ಷದ ಹಂತದಲ್ಲಿ ಆರಂಭಿಕ ಚರ್ಚೆ ನಡೆದಿದ್ದು, ಯಾರನ್ನೆಲ್ಲಾ ಪರಿಗಣಿಸಬಹುದು ಎನ್ನುವ ಪ್ರಾಥಮಿಕ ಸಮಾಲೋಚನೆ ನಡೆಸಲಾಗಿದೆ. 2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿ ಅಂದು ಸೋತಾಗಲೂ ಜಗದೀಶ್ ಶೆಟ್ಟರ್ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರೆಸಿತ್ತು. ಈಗಲೂ ಅದೇ ಸೂತ್ರವನ್ನು ಅನುಸರಿಸಲು ನಾಯಕರು ಚಿಂತನೆ ನಡೆಸಿದ್ದಾರೆ. ಬೊಮ್ಮಾಯಿ‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದು, ತಾತ್ಕಾಲಿಕವಾಗಿ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರೆಸಬೇಕು ಎನ್ನುವ ಅಭಿಪ್ರಾಯವನ್ನು ಕೆಲ ನಾಯಕರು ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ಕಾಡುತ್ತಿದೆ ಹಿರಿಯರ ಕೊರತೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾದರೆ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಸರಿಸಮಕ್ಕೆ ಇರುವ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು. ಅದಕ್ಕೆ ಬಸವರಾಜ ಬೊಮ್ಮಾಯಿ‌ ಹೊರತುಪಡಿಸಿದರೆ ಇತರ ಹೆಸರುಗಳು ಕಾಣುತ್ತಿಲ್ಲ. ಯಡಿಯೂರಪ್ಪ ಸರ್ಕಾರ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಕಾನೂನಾತ್ಮಕವಾಗಿ ಪ್ರತಿಪಕ್ಷಗಳನ್ನು ಕಟ್ಟಿಹಾಕುತ್ತಿದ್ದ ಜೆಸಿ ಮಾಧುಸ್ವಾಮಿ ಸೋತಿದ್ದಾರೆ. ಒಂದು ವೇಳೆ ಮಾಧುಸ್ವಾಮಿ ಗೆದ್ದಿದ್ದರೆ ಅವರನ್ನೇ ಪ್ರತಿಪಕ್ಷ ನಾಯಕರನ್ನಾಗಿ ಮಾಡಲಾಗುತ್ತಿತ್ತು. ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವ ಇದ್ದ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಜಗದೀಶ್ ಶೆಟ್ಟರ್ ಪಕ್ಷದಲ್ಲಿ ಇಲ್ಲ, ಉಮೇಶ್ ಕತ್ತಿ ಇಹಲೋಕ ತ್ಯಜಿಸಿದ್ದಾರೆ. ನಿರಾಣಿಯೂ ಸೋತಿದ್ದಾರೆ. ಹಿರಿಯ ನಾಯಕ ಕಾರಜೋಳ ಪರಾಜಿತರಾಗಿದ್ದಾರೆ. ಹೀಗಾಗಿ ಹಿರಿಯರ ಕೊರತೆ ಬಿಜೆಪಿಯಲ್ಲಿ ಕಾಡುತ್ತಿದೆ.

ಬೊಮ್ಮಾಯಿ‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ: ಸದ್ಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿ ಸಂಖ್ಯೆಯೂ ಕಡಿಮೆಯೇನಿಲ್ಲ, ಈಗಾಗಲೇ ಹಿರಿಯ ನಾಯಕ ಸುರೇಶ್ ಕುಮಾರ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಅವಕಾಶದ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಮುಂಜೂಣಿಯಲ್ಲಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಹೆಸರುಗಳೂ ಚಾಲ್ತಿಯಲ್ಲಿವೆ. ಆದರೆ, ಹಿರಿತನ ಹಾಗೂ ಸಂಸದೀಯ ವ್ಯವಹಾರಗಳ ನಿರ್ವಹಣೆಯ ಪರಿಣಿತಿ ಆಧರಿಸಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಬೇಕಾಗಿದೆ. ಹೀಗಾಗಿ ಸದ್ಯ ಬಸವರಾಜ ಬೊಮ್ಮಾಯಿ‌ ಮತ್ತು ಸುರೇಶ್ ಕುಮಾರ್ ಹೆಸರುಗಳು ಮಾತ್ರ ಬಿಜೆಪಿ ನಾಯಕರ ಮುಂದೆ ಕಾಣುತ್ತಿವೆ. ಆದರೆ ಸದ್ಯದ ಮಟ್ಟಿಗೆ ಬಸವರಾಜ ಬೊಮ್ಮಾಯಿ‌ ಅವರನ್ನೇ ಕೆಲ ಸಮಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದು ಸೂಕ್ತ ಎನ್ನುವುದು ಹಲವು ನಾಯಕರ ಅಭಿಪ್ರಾಯವಾಗಿದೆ.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಎನ್. ರವಿಕುಮಾರ್ ಹೇಳಿದ್ದೇನು?: ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು, ನಮ್ಮ ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ಮಾಡಲು ಸಿದ್ಧವಾಗಿದ್ದೇವೆ. ಕಾಂಗ್ರೆಸ್​ನವರು ಮೊದಲು ಮುಖ್ಯಮಂತ್ರಿ ಯಾರು ಎಂದು ಆಯ್ಕೆ ಮಾಡಲಿ ನಂತರ, ನಾವು ನಮ್ಮ ಪ್ರತಿಪಕ್ಷ ನಾಯಕ ಯಾರು ಎಂದು ಆಯ್ಕೆ ಮಾಡುತ್ತೇವೆ. ಇನ್ನೂ ಎರಡು ಮೂರು ದಿನ ಸಮಯ ಇದೆ. ಮುಖ್ಯಮಂತ್ರಿ ಆಯ್ಕೆ ಮುಗಿಯುತ್ತಿದ್ದಂತೆ ನಾವು ಸಭೆ ನಡೆಸುತ್ತೇವೆ ಎಂದರು.

ಸದ್ಯ ಬೊಮ್ಮಾಯಿ‌ ಹೆಸರಿನ ಜೊತೆ ಮತ್ತಷ್ಟು ಹೆಸರು ಸೇರಿಸಿಕೊಂಡು ಪಟ್ಟಿ ಸಿದ್ದಪಡಿಸಿದ್ದು, ಸದ್ಯದಲ್ಲೇ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಹೆಸರು ಅಂತಿಮಗೊಳಿಸಲಾಗುತ್ತದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರಾಜ್ಯಕ್ಕೆ ಬರುತ್ತಿದ್ದಂತೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಸದ್ಯದಲ್ಲಿ ಕೋರ್ ಕಮಿಟಿ ಸಭೆ: ಈಗಾಗಲೇ ಬಸವರಾಜ ಬೊಮ್ಮಾಯಿ‌ ಕೂಡ ಎರಡು ದಿನದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಸೂಚನೆ ನೀಡಿದ್ದಾರೆ. ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕೂಡ ನಡೆಯಬೇಕಿದೆ. ಹಾಗಾಗಿ ಎರಡೂ ಹುದ್ದೆಗಳ ಆಯ್ಕೆಗೆ ಸದ್ಯದಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗುತ್ತದೆ. ಅಲ್ಲಿ ಎರಡೂ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಇದನ್ನೂ ಓದಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ ಬಹುತೇಕ ಖಚಿತ: ಹುಟ್ಟೂರಿನಲ್ಲಿ ಸಂಭ್ರಮ

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತ ಚರ್ಚೆಗಳು ಕೇಸರಿ ಪಾಳಯದಲ್ಲಿ ಆರಂಭಗೊಂಡಿವೆ. ಪ್ರಮುಖ ನಾಯಕರ ಸೋಲು, ಕೆಲವರ ಚುನಾವಣಾ ರಾಜಕೀಯ ನಿವೃತ್ತಿ ಕಾರಣದಿಂದ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದು, ಸದ್ಯ ಹಂಗಾಮಿ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ‌ ಅವರನ್ನೇ ಕೆಲ ಸಮಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಚರ್ಚೆಗಳು ಆರಂಭಗೊಂಡಿವೆ. ಪಕ್ಷದ ಹಂತದಲ್ಲಿ ಆರಂಭಿಕ ಚರ್ಚೆ ನಡೆದಿದ್ದು, ಯಾರನ್ನೆಲ್ಲಾ ಪರಿಗಣಿಸಬಹುದು ಎನ್ನುವ ಪ್ರಾಥಮಿಕ ಸಮಾಲೋಚನೆ ನಡೆಸಲಾಗಿದೆ. 2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿ ಅಂದು ಸೋತಾಗಲೂ ಜಗದೀಶ್ ಶೆಟ್ಟರ್ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರೆಸಿತ್ತು. ಈಗಲೂ ಅದೇ ಸೂತ್ರವನ್ನು ಅನುಸರಿಸಲು ನಾಯಕರು ಚಿಂತನೆ ನಡೆಸಿದ್ದಾರೆ. ಬೊಮ್ಮಾಯಿ‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದು, ತಾತ್ಕಾಲಿಕವಾಗಿ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರೆಸಬೇಕು ಎನ್ನುವ ಅಭಿಪ್ರಾಯವನ್ನು ಕೆಲ ನಾಯಕರು ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ಕಾಡುತ್ತಿದೆ ಹಿರಿಯರ ಕೊರತೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾದರೆ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಸರಿಸಮಕ್ಕೆ ಇರುವ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು. ಅದಕ್ಕೆ ಬಸವರಾಜ ಬೊಮ್ಮಾಯಿ‌ ಹೊರತುಪಡಿಸಿದರೆ ಇತರ ಹೆಸರುಗಳು ಕಾಣುತ್ತಿಲ್ಲ. ಯಡಿಯೂರಪ್ಪ ಸರ್ಕಾರ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಕಾನೂನಾತ್ಮಕವಾಗಿ ಪ್ರತಿಪಕ್ಷಗಳನ್ನು ಕಟ್ಟಿಹಾಕುತ್ತಿದ್ದ ಜೆಸಿ ಮಾಧುಸ್ವಾಮಿ ಸೋತಿದ್ದಾರೆ. ಒಂದು ವೇಳೆ ಮಾಧುಸ್ವಾಮಿ ಗೆದ್ದಿದ್ದರೆ ಅವರನ್ನೇ ಪ್ರತಿಪಕ್ಷ ನಾಯಕರನ್ನಾಗಿ ಮಾಡಲಾಗುತ್ತಿತ್ತು. ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವ ಇದ್ದ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಜಗದೀಶ್ ಶೆಟ್ಟರ್ ಪಕ್ಷದಲ್ಲಿ ಇಲ್ಲ, ಉಮೇಶ್ ಕತ್ತಿ ಇಹಲೋಕ ತ್ಯಜಿಸಿದ್ದಾರೆ. ನಿರಾಣಿಯೂ ಸೋತಿದ್ದಾರೆ. ಹಿರಿಯ ನಾಯಕ ಕಾರಜೋಳ ಪರಾಜಿತರಾಗಿದ್ದಾರೆ. ಹೀಗಾಗಿ ಹಿರಿಯರ ಕೊರತೆ ಬಿಜೆಪಿಯಲ್ಲಿ ಕಾಡುತ್ತಿದೆ.

ಬೊಮ್ಮಾಯಿ‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ: ಸದ್ಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿ ಸಂಖ್ಯೆಯೂ ಕಡಿಮೆಯೇನಿಲ್ಲ, ಈಗಾಗಲೇ ಹಿರಿಯ ನಾಯಕ ಸುರೇಶ್ ಕುಮಾರ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಅವಕಾಶದ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಮುಂಜೂಣಿಯಲ್ಲಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಹೆಸರುಗಳೂ ಚಾಲ್ತಿಯಲ್ಲಿವೆ. ಆದರೆ, ಹಿರಿತನ ಹಾಗೂ ಸಂಸದೀಯ ವ್ಯವಹಾರಗಳ ನಿರ್ವಹಣೆಯ ಪರಿಣಿತಿ ಆಧರಿಸಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಬೇಕಾಗಿದೆ. ಹೀಗಾಗಿ ಸದ್ಯ ಬಸವರಾಜ ಬೊಮ್ಮಾಯಿ‌ ಮತ್ತು ಸುರೇಶ್ ಕುಮಾರ್ ಹೆಸರುಗಳು ಮಾತ್ರ ಬಿಜೆಪಿ ನಾಯಕರ ಮುಂದೆ ಕಾಣುತ್ತಿವೆ. ಆದರೆ ಸದ್ಯದ ಮಟ್ಟಿಗೆ ಬಸವರಾಜ ಬೊಮ್ಮಾಯಿ‌ ಅವರನ್ನೇ ಕೆಲ ಸಮಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದು ಸೂಕ್ತ ಎನ್ನುವುದು ಹಲವು ನಾಯಕರ ಅಭಿಪ್ರಾಯವಾಗಿದೆ.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಎನ್. ರವಿಕುಮಾರ್ ಹೇಳಿದ್ದೇನು?: ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು, ನಮ್ಮ ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ಮಾಡಲು ಸಿದ್ಧವಾಗಿದ್ದೇವೆ. ಕಾಂಗ್ರೆಸ್​ನವರು ಮೊದಲು ಮುಖ್ಯಮಂತ್ರಿ ಯಾರು ಎಂದು ಆಯ್ಕೆ ಮಾಡಲಿ ನಂತರ, ನಾವು ನಮ್ಮ ಪ್ರತಿಪಕ್ಷ ನಾಯಕ ಯಾರು ಎಂದು ಆಯ್ಕೆ ಮಾಡುತ್ತೇವೆ. ಇನ್ನೂ ಎರಡು ಮೂರು ದಿನ ಸಮಯ ಇದೆ. ಮುಖ್ಯಮಂತ್ರಿ ಆಯ್ಕೆ ಮುಗಿಯುತ್ತಿದ್ದಂತೆ ನಾವು ಸಭೆ ನಡೆಸುತ್ತೇವೆ ಎಂದರು.

ಸದ್ಯ ಬೊಮ್ಮಾಯಿ‌ ಹೆಸರಿನ ಜೊತೆ ಮತ್ತಷ್ಟು ಹೆಸರು ಸೇರಿಸಿಕೊಂಡು ಪಟ್ಟಿ ಸಿದ್ದಪಡಿಸಿದ್ದು, ಸದ್ಯದಲ್ಲೇ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಹೆಸರು ಅಂತಿಮಗೊಳಿಸಲಾಗುತ್ತದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರಾಜ್ಯಕ್ಕೆ ಬರುತ್ತಿದ್ದಂತೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಸದ್ಯದಲ್ಲಿ ಕೋರ್ ಕಮಿಟಿ ಸಭೆ: ಈಗಾಗಲೇ ಬಸವರಾಜ ಬೊಮ್ಮಾಯಿ‌ ಕೂಡ ಎರಡು ದಿನದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಸೂಚನೆ ನೀಡಿದ್ದಾರೆ. ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕೂಡ ನಡೆಯಬೇಕಿದೆ. ಹಾಗಾಗಿ ಎರಡೂ ಹುದ್ದೆಗಳ ಆಯ್ಕೆಗೆ ಸದ್ಯದಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗುತ್ತದೆ. ಅಲ್ಲಿ ಎರಡೂ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಇದನ್ನೂ ಓದಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ ಬಹುತೇಕ ಖಚಿತ: ಹುಟ್ಟೂರಿನಲ್ಲಿ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.