ಬೆಂಗಳೂರು: ನಮ್ಮ ದೈನಂದಿನ ಜೀವನದಲ್ಲಿ ಸಂಗೀತ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅನಾದಿ ಕಾಲದಿಂದಲೂ ರಾಗ, ತಾಳ, ಲಯ ಬದ್ಧ ನಾದವು ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲಿ, ಸಂಗೀತ ಪ್ರಾಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತ ಬಂದಿದೆ. ಅಲ್ಲದೇ ಹಲವು ಕಾಯಿಲೆಗಳು ಶೀಘ್ರವಾಗಿ ಗುಣವಾಗಲು ಇದು ಸಹಕಾರಿಯಾಗಿದೆ ಎನ್ನುವುದು ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ.
ಸಂಗೀತವು ಪ್ರೀತಿ ಮತ್ತು ಸಂತೋಷದ ಸಾರ್ವತ್ರಿಕ ಭಾಷೆಯಾಗಿದ್ದು, ಇದಕ್ಕೆ ಅಪವಾದ ಎಂಬಂತೆ ವಾದ್ಯಗಳಿಗೆ ಪ್ರಾಣಿ ಚರ್ಮವನ್ನು ಬಳಸುತ್ತಿದ್ದಾರೆ. ಆದರೆ, ಸಿಲಿಕಾನ್ಸಿಟಿಯ ಕಾರುಣ್ಯ ಮ್ಯೂಸಿಕಲ್ ಸಂಸ್ಥೆಯಿಂದ ವಿಶ್ವದಲ್ಲೇ ಮೊದಲ ಬಾರಿಗೆ ತಯಾರಾಗುತ್ತಿರುವ ವಾದ್ಯಗಳು ಕ್ರೌರ್ಯ ದಿಂದ ತಯಾರಾಗಿಲ್ಲ ಎನ್ನುವುದು ವಿಶೇಷವಾಗಿದೆ.
ಪಿಟೀಲಿಗೆ ಬಳಸುವ ಕುದುರೆ ಕೂದಲಿನಿಂದ ಹಿಡಿದು ತಾಳವಾದ್ಯಗಳಲ್ಲಿ ಚರ್ಮದವರೆಗೆ, ಸಾಂಪ್ರದಾಯಿಕ ಭಾರತೀಯ ಮತ್ತು ಪಾಶ್ಚಿಮಾತ್ಯ ವಾದ್ಯಗಳಲ್ಲಿ ಅನೇಕ ಪ್ರಾಣಿ ಉತ್ಪನ್ನಗಳನ್ನು ಬಳಸುತ್ತಾರೆ. ಈ ರೀತಿಯ ಪ್ರಾಣಿಗಳಿಗೆ ಚರ್ಮವನ್ನು ಬಳಸುವುದು ತಪ್ಪಿಸಲು ಹಾಗೂ ಪ್ರಾಣಿಗಳ ರಕ್ಷಣೆ ಮಾಡಲು ಸಿಂಥೆಟಿಕ್ ರಬ್ಬರ್ ಅಂಟನ್ನು ಬಳಸಿ ವಾದ್ಯಗಳನ್ನು ಕಾರುಣ್ಯ ಮ್ಯೂಸಿಕಲ್ ಸಂಸ್ಥೆಯ ಸಂಸ್ಥಾಪಕ ಡಾ. ಕೆ. ವರದರಂಗನ್ ತಯಾರಿಸುತ್ತಿದ್ದಾರೆ.
ಸಿಂಥೆಟಿಕ್ ರಿದಮ್ ಇಂಡಿಯನ್ ಮೃದಂಗ ಮತ್ತು ತಬಲಾವನ್ನು ಸಿಂಥೆಟಿಕ್ ಡ್ರಮ್ ಹೆಡ್ಗಳನ್ನು ಬಳಸಿ ತಯಾರಿಸಲಾಗುತ್ತಿದೆ ಮತ್ತು ಫೈಬರ್ ಗ್ಲಾಸ್ ಶೆಲ್ಗಳ ಮೇಲೆ ಅಳವಡಿಸಲಾಗುತ್ತಿದೆ. ಗಟ್ಟಿಮುಟ್ಟಾದ ಫೈಬರ್ಗ್ಲಾಸ್ ಶೆಲ್ಗಳಿಂದ ಮರಗಳನ್ನು ಕತ್ತರಿಸುವುದನ್ನೂ ತಪ್ಪಿಸಲಾಗುತ್ತಿದೆ. ಹಾರ್ಮೋನಿಕ್ ಓವರ್ಟೋನ್ಗಳನ್ನು ಉಳಿಸಿಕೊಂಡು ಭಾರತೀಯ ತಾಳವಾದ್ಯಗಳಾದ ಮೃದಂಗ, ತಬಲಾ, ಖೋಲ್, ಗಿಟಾರ್ ಸೇರಿದಂತೆ ಇತ್ಯಾದಿ ನಾದ ಹೊರಡಿಸುವ ವಸ್ತುಗಳನ್ನು ಕಾರುಣ್ಯ ಮ್ಯುೂಸಿಕಲ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಅವುಗಳು ದೇಶ-ವಿದೇಶಗಳಲ್ಲಿ ಕೂಡ ಹೆಸರುವಾಸಿಯಾಗುತ್ತಿವೆ.
ಕರ್ನಾಟಕ ಗಾಯಕ, ಸಂಗೀತಶಾಸ್ತ್ರಜ್ಞ, ಭೌತತಶಾಸ್ತ್ರಜ್ಞ ಹಾಗೂ ವೃತ್ತಿಯಲ್ಲಿ ವೈರ್ಲೆಸ್ತಜ್ಞರಾಗಿರುವ ಕೆ. ವರದರಂಗನ್ 20 ವರ್ಷಗಳ ತಮ್ಮ ಅನುಭವದ ಜತೆಗೆ 5 ವರ್ಷಗಳ ಕಠಿಣ ಪರಿಶ್ರಮದ ಫಲಿತಾಂಶವಾಗಿ ಹೊರಬಂದಿರುವ ಈ ಹೊಸ ಮಾದರಿಯ ವಾದ್ಯಗಳು ಜನಮೆಚ್ಚುಗೆಗೆ ಪಾತ್ರವಾಗುತ್ತಿವೆ. 2016ರಿಂದ ತಯಾರಿಸಿದ ವಾದ್ಯಗಳನ್ನು ಮಾರುಕಟ್ಟೆಗೆ ತಂದಿದ್ದು, ಹೊರ ದೇಶಗಳಾದ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಐರೋಪ್ಯ ದೇಶಗಳು ಸೇರಿದಂತೆ ಇತರ ದೇಶಗಳಿಂದ ಭಾರಿ ಬೇಡಿಕೆ ಬಂದಿದೆ. ಅಲ್ಲದೇ, ಇದೊಂದು ಪ್ರಯಾಣ ಸ್ನೇಹಿಯಾಗಿರುವುದರಿಂದ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾಗಿರುವುದು ಈ ವಾದ್ಯಗಳ ಮತ್ತೊಂದು ವೈಶಿಷ್ಟವಾಗಿದೆ.
ಸಂಸ್ಥಾಪಕರ ಮಾತುಗಳು: ವಾದ್ಯಗಳಲ್ಲಿ ಕಪ್ಪಾದ ಭಾಗವಾದ ಕರಣೆಯಿಂದಲೇ ಸುನಾದ ಹೊರಡುತ್ತದೆ. ಕರಣೆಯಿಲ್ಲದ ವಾದ್ಯಗಳಲ್ಲಿ ಲಯಬದ್ಧವಾದ ನಾದ ಬರುವುದಿಲ್ಲ. ಚರ್ಮದ ಹೊರತಾಗಿ ವಿಶ್ವದಲ್ಲಿ ಮೊದಲು ಬೇರೆ ವಸ್ತುವನ್ನು ಕರಣೆಯಾಗಿ ಬಳಸಿ ಚರ್ಮ ವಾದ್ಯಗಳಲ್ಲಿ ಬರುವ ನಾದದಂತೆ ಇಂಪಾದ ನಾದವನ್ನು ತರಲು ಸಾಧ್ಯವಾಗಿದೆ ಎಂದು ಕಾರುಣ್ಯ ಮ್ಯೂಸಿಕಲ್ ಸಂಸ್ಥೆಯ ಸಂಸ್ಥಾಪಕ ಡಾ. ಕೆ. ವರದರಂಗನ್ ಹೇಳುತ್ತಾರೆ. ಈ ವಿದ್ಯಾಮಾನವನ್ನು ಮೊದಲು ನೋಬೆಲ್ ಪ್ರಶಸ್ತಿ ಪುಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ಗುರುತಿಸಿ ವಾದ್ಯಗಳ ಬಗ್ಗೆಯೂ ಸಾಕಷ್ಟು ವಿವರವಾಗಿ ತಿಳಿಸಿದ್ದರು. ಈ ಕುರಿತ ಪ್ರಬಂಧವನ್ನು ಪ್ರೊ. ಬಿ.ಎಸ್. ರಾಮಕೃಷ್ಣ ಮಂಡಿಸಿ ಸೂಕ್ತವಾಗಿ ಲೋಡ್ ಮಾಡಲಾದ ವೃತ್ತಾಕಾರದ ಪೊರೆಗಳು ಹಾರ್ಮೋನಿಕ್ ಓವರ್ಟೋನ್ಗಳನ್ನು ಉತ್ಪಾದಿಸುತ್ತವೆ ಎಂದು ಸಾಬೀತು ಪಡಿಸಿದ್ದರು. ಇವೆಲ್ಲವನ್ನು ಇಲ್ಲಿ ಪ್ರಯೋಗಕ್ಕೆ ತರಲಾಗಿದೆ ಎಂದು ಅಭಿಪ್ರಾಯಪಡುತ್ತಾರೆ.
ವಾದ್ಯದ ಕರಣೆ ಭಾಗಕ್ಕೆ ಐರನ್ ಆಕ್ಸೈಡ್ ಮತ್ತು ಅನ್ನವನ್ನು ಬಳಸಿ ಹದ ಮಾಡಲಾಗುತ್ತದೆ. ನಂತರ ಮಧ್ಯ ಭಾಗದಲ್ಲಿ ಬಳಸುವುದರಿಂದ ಲಯಬದ್ಧವಾಗಿ ನಾದ ಹೊರಡುತ್ತದೆ. ಅದಕ್ಕೆ ಸರಿಸಮಾನವಾದ ಕೃತಕ ಚರ್ಮವನ್ನು ಸಹ ಬಳಸಬಹುದಾಗಿದೆ. ಮೊದ ಮೊದಲು ಸುಮಾರು 100 ರಿಂದ 150 ಪ್ರಯೋಗಗಳು ವಿಫಲವಾಗಿತ್ತು, ಅದನ್ನು ಒಂದು ಹಂತಕ್ಕೆ ತರಲು 2 ವರ್ಷಗಳ ಕಾಲ ಹಿಡಿಯಿತು ಎನ್ನುತ್ತಾರೆ. ಹಲವು ಸಂಶೋಧನೆ ನಡೆಸಿ ಪ್ರಾಣಿಗಳ ಚರ್ಮ ಬಳಸದೆ ಮೃದಂಗ, ತಬಲಾ ಸೇರಿದಂತೆ ಇತರೆ ವಾದ್ಯಗಳ ವಸ್ತುಗಳನ್ನು ನಿರ್ಮಿಸಲು ಸಾಧ್ಯವಿದೆ ಎಂದು ಮನಗಂಡೆ. ಕಾರುಣ್ಯ ಮ್ಯೂಸಿಕಲ್ ಸಂಸ್ಥೆಯನ್ನು ಸ್ಥಾಪಿಸಿ 2010 ರಿಂದ ಸಂಶೋಧನೆ ನಡೆಸಲು ಪ್ರಾರಂಭಿಸಿದೆ. ಸತತ 5 ವರ್ಷಗಳ ಪ್ರಯತ್ನದಿಂದ 2016 ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದೀಗ ವಿದೇಶದಿಂದಲೂ ಹೆಚ್ಚಿನ ಬೇಡಿಕೆ ಬರುತ್ತಿದ್ದು ಒಂದು ವಾದ್ಯಕ್ಕೆ ಸರಿ ಸುಮಾರು 12.5 ಸಾವಿರ ರೂ. ಮೌಲ್ಯ ನಿಗದಿಪಡಿಸಲಾಗಿದೆ. ಈವರೆಗೆ ಸುಮಾರು ಮೂರು ಸಾವಿರ ಸಿಂಥೆಟಿಕ್ ತಬಲಾ ಮತ್ತು ಮೃದಂಗವನ್ನು ತಯಾರಿಸಿ ಮಾರಾಟ ಮಾಡಲಾಗಿದೆ ಎಂದು ಡಾ. ಕೆ. ವರದರಂಗನ್ ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ: ಮಂಗಳೂರಿನ ವೈದ್ಯರ ಟ್ವೀಟ್ ವೈರಲ್