ಬೆಂಗಳೂರು : ರಾಜಧಾನಿಯ ಪೌರಕಾರ್ಮಿಕರು ಒಂದೆಡೆ ನೆಮ್ಮದಿಯಿಂದ ಕುಳಿತು ಊಟ, ತಿಂಡಿ ಮಾಡಲು ಮತ್ತು ಬ್ರೇಕ್ ಅವಧಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹಾಗೂ ಬಟ್ಟೆ ಬದಲಾಯಿಸಿಕೊಳ್ಳಲು ‘ಸುವಿಧಾ ಕ್ಯಾಬಿನ್’ ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ವಾರ್ಡ್ಗಳ ವ್ಯಾಪ್ತಿಯಲ್ಲಿ 25,000 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಶೇ.75ರಷ್ಟು ಮಹಿಳೆಯರು ರಸ್ತೆಗಳ ಸ್ವಚ್ಛತೆ ಹಾಗೂ ತ್ಯಾಜ್ಯವಿಲೇವಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಪೌರಕಾರ್ಮಿಕರಿಗೆ ತಿಂಡಿ ತಿನ್ನಲು, ವಿಶ್ರಾಂತಿ ಪಡೆಯಲು ಹಾಗೂ ಕೆಲಸ ಮುಗಿದ ಬಳಿಕ ಸಮವಸ್ತ್ರವನ್ನು ಬದಲಾಯಿಸಲು ಸರಿಯಾದ ವ್ಯವಸ್ಥೆಯಿಲ್ಲದಂತಾಗಿತ್ತು. ಪುರುಷ ಹಾಗೂ ಮಹಿಳಾ ಪೌರಕಾರ್ಮಿಕರು ಪರದಾಡುತ್ತಿದ್ದರು. ನೆರಳು ಸಿಗುವ ಜಾಗದಲ್ಲಿ ಎಲ್ಲೆಂದರಲ್ಲಿ ಕುಳಿತು ಊಟ ಹಾಗೂ ವಿಶ್ರಾಂತಿ ಪಡೆಯಬೇಕಾದ ಪರಿಸ್ಥಿತಿ ನಗರದಲ್ಲಿತ್ತು.
ಮಹಿಳಾ ಪೌರಕಾರ್ಮಿಕರು ತಿಂಗಳ ಅವಧಿಯ ತುರ್ತು ಅಗತ್ಯಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೆ ರಜೆ ಹಾಕುತ್ತಿದ್ದರು. ಈ ಸಮಸ್ಯೆ ಅರಿತ ಬಿಬಿಎಂಪಿ 'ಸುವಿಧಾ ಕ್ಯಾಬಿನ್' ಮೂಲಕ ಪರಿಹಾರ ನೀಡಲು ಸಿದ್ಧತೆ ನಡೆಸಿದೆ. ಬಟ್ಟೆ ಬದಲಾವಣೆಗೆ ರೂಮ್, ಶೌಚಾಲಯ, ಮಗುವಿಗೆ ಹಾಲುಣಿಸಲು ಜಾಗ, ಕುಡಿಯುವ ನೀರು, ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್ಗಳನ್ನು ಹೊಂದಿರುವ ಕೊಠಡಿಗಳನ್ನು ಸುವಿಧಾ ಕ್ಯಾಬಿನ್ ಒಳಗೊಂಡಿದೆ.
12.15 ಕೋಟಿ ರೂ. ವೆಚ್ಚ : ಸುವಿಧಾ ಕ್ಯಾಬಿನ್ ಮೊದಲ ಹಂತದಲ್ಲಿ 221 ಕಡೆಯಲ್ಲಿ ಅಳವಡಿಸಲಾಗುತ್ತದೆ. ಶುಭ್ರ ಬೆಂಗಳೂರು ಯೋಜನೆಯಡಿಯಲ್ಲಿ 5.5 ಕೋಟಿ ರೂ. ನಂತೆ ಒಟ್ಟು 12.15 ಕೋಟಿ ವೆಚ್ಚದಲ್ಲಿ ಕ್ಯಾಬಿನ್ ಆಳವಡಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಪ್ರಾರಂಭಗೊಂಡಿದೆ. ಮುಂದಿನ ಆರು ತಿಂಗಳೊಳಗಾಗಿ ಕ್ಯಾಬಿನ್ ಅಳವಡಿಕೆ ಕೆಲಸ ಪೂರ್ಣಗೊಳ್ಳಲಿದೆ. ಈ ಕ್ಯಾಬಿನ್ ಎಲ್ಲಿ, ಯಾವಾಗ ಬೇಕಾದ್ರೂ ಅತ್ಯಂತ ಸುಲಭವಾಗಿ ಅಳವಡಿಸಲು ಸಾಧ್ಯ ಎಂದು ಬಿಬಿಎಂಪಿ ಘನತಾಜ್ಯ ವಿಭಾಗದ ಅಭಿಯಂತರ ಬಸವರಾಜ್ ತಿಳಿಸಿದ್ದಾರೆ.
ಪರಿಸರ ಸ್ನೇಹಿ : ಸುವಿಧಾ ಸ್ಟೀಲ್ ಕಂಟೇನರ್ ಮರು ಬಳಕೆ ಮಾಡುವುದರ ಜತೆಗೆ ಪರಿಸರ ಸ್ನೇಹಿಯಾಗಿದೆ. ಇಂಗಾಲದ ಡೈ ಆಕ್ಸೈಡ್ನ ಪ್ರಮುಖ ಮೂಲವಾದ ಇಟ್ಟಿಗೆ ಹಾಗೂ ಸಿಮೆಂಟ್ ಬಳಕೆ ನಿಷೇಧಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ತಾತನ ಪಿಂಡ ಪ್ರದಾನ ಮಾಡಲು ಬಂದ ಯುವತಿಯರು ಸಮುದ್ರ ಪಾಲು
ಮುಂದಿನ ಆರು ತಿಂಗಳೊಳಗಾಗಿ ಎಲ್ಲ ವಾರ್ಡ್ಗಳಲ್ಲಿ ಸುವಿಧಾ ಕ್ಯಾಬಿನ್ : ಪ್ರಾರಂಭಿಕ ಹಂತದಲ್ಲಿ 221 ಕಡೆಯಲ್ಲಿ ಸುವಿಧಾ ಕ್ಯಾಬಿನ್ ಅಳವಡಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಈಗಾಗಲೇ ಯಲಹಂಕ ಹಾಗೂ ಮಲೇಶ್ವರಂನಲ್ಲಿ ಅಳವಡಿಸಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ಆರು ತಿಂಗಳೊಳಗಾಗಿ ಎಲ್ಲ ಕಡೆಯಲ್ಲಿ ಸುವಿಧಾ ಕ್ಯಾಬಿನ್ ಅಳವಡಿಸಲಾಗುತ್ತದೆ ಎಂದು ಬಸವರಾಜ್ ತಿಳಿಸಿದ್ದಾರೆ.