ಬೆಂಗಳೂರು: ಮೃತರ ಅಸ್ತಿ, ಚಿತಾಭಸ್ಮವನ್ನು ಅವರವರ ಧಾರ್ಮಿಕ ವಿಧಿ-ವಿಧಾನಗಳನುಸಾರವಾಗಿ ಅವರಿಗೆ ಸೂಕ್ತವೆನಿಸುವ ಸ್ಥಳಗಳಲ್ಲಿ ವಿಸರ್ಜಿಸಲು ರಾಜ್ಯ ಸರ್ಕಾರ ಅನುಮತಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಕೋವಿಡ್ ಹಾಗೂ ಇತರ ಕಾರಣಗಳಿಂದ ಮೃತಪಟ್ಟ ವ್ಯಕ್ತಿಗಳ ಅಸ್ತಿ/ಚಿತಾಭಸ್ಮವನ್ನು ಅವರರವರ ಧಾರ್ಮಿಕ ವಿಧಿ ವಿಧಾನಗಳನ್ವಯ ಅವರಿಗೆ ಸೂಕ್ತವೆನಿಸುವ ಸ್ಥಳಗಳಲ್ಲಿ ವಿಸರ್ಜಿಸಲು ಹಾಗೂ ಗರಿಷ್ಠ 4 ಜನರು ತೆರಳಲು ಅವಕಾಶ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ.
ಮೃತರ ಅಸ್ತಿ/ಚಿತಾಭಸ್ಮದ ವಿಸರ್ಜನೆಗೆ ಸಾರ್ವಜನಿಕರಾಗಲಿ ಅಥವಾ ಸಂಬಂಧಿಸಿದ ಪ್ರಾಧಿಕಾರಗಳಾಗಲಿ ಅಡ್ಡಿ ಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಅಸ್ತಿ ಬಿಡುವ ಕ್ರಿಯೆಗೆ ತೆರಳುವ ಮೃತರ ಸಂಬಂಧಿಕರು/ವಾರಸುದಾರರ ಸಂಚಾರಕ್ಕೆ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಅವಕಾಶ ಮಾಡಿಕೊಡದಿರುವ ಪ್ರಕರಣಗಳು ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅದಕ್ಕೆ ಅನುಮತಿ ನೀಡಿದೆ.
ಇದನ್ನೂ ಓದಿ: ಮೊದಲ ಡೋಸ್ ಪಡೆದವರ ದತ್ತಾಂಶ ಅಪ್ಲೋಡ್ ಸಕ್ಸಸ್... ಕೋವಿನ್ ವೆಬ್ ಸೇರಿದ 95 ಲಕ್ಷ ಜನರ ದಾಖಲೆ
ಮೃತರಾದ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಮೃತರ ಅಂತ್ಯಕ್ರಿಯೆ/ಶವ ಸಂಸ್ಕಾರ ನಡೆಸಬಹುದಾಗಿದೆ. ಶವ ಸಂಸ್ಕಾರದ ತರುವಾಯ ಮೃತರ ಅಸ್ತಿ/ಚಿತಾಭಸ್ಮವನ್ನು ಅವರವರ ಧರ್ಮಾನುಸಾರ ವಿಸರ್ಜಿಸುವ ಪದ್ಧತಿ ರೂಢಿಯಲ್ಲಿರುತ್ತದೆ. ಇದಕ್ಕೆ ಯಾವುದೇ ಅಡಚಣೆ ಮಾಡದಂತೆ ಹೊರಡಿಸಿರುವ ಆದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರುಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು, ಸ್ಥಳೀಯ ಪ್ರಾಧಿಕಾರಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.