ಬೆಂಗಳೂರು: ಸಂವಿಧಾನದ ಮೇಲಿನ ವಿಶೇಷ ಚರ್ಚೆಯ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಎಎ ವಿರುದ್ಧದ ಪ್ರತಿಭಟನೆ ಹಾಗೂ ಗಲಭೆಯ ಕುರಿತು ಪರೋಕ್ಷವಾಗಿ ಕಾಂಗ್ರೆಸ್ಗೆ ಟಾಂಗ್ ನೀಡಿದರು.
ಪ್ರತಿಭಟನೆಯ ಪ್ರತಿರೋಧ ಪ್ರಜಾಪ್ರಭುತ್ವದ ಸಂವಿಧಾನದ ಮೂಲ ಹಕ್ಕಾಗಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಸಂಸತ್ತಿನಲ್ಲಿ ಕಾನೂನು ರಚನೆಯಾದ ಮೇಲೆ ಅದಕ್ಕೂ ಕೂಡ ಒಂದು ಗೌರವವಿದೆ. ಅದನ್ನು ಕಾಂಗ್ರೆಸ್ ಹಾಗೂ ನಾವೆಲ್ಲರೂ ಮರೆತಿದ್ದೇವೆ ಎಂದು ಹೇಳಿದರು.
ಸಂಸತ್ ತೀರ್ಮಾನಗಳಿಗೆ ಬೆಲೆ ಕೊಡಬೇಕು. ಅದರ ಅರಿವಿದ್ದರೂ ಸಹ ಈಗ ದೇಶದಲ್ಲಿ ನಡೆಯುತ್ತಿರುವ ಸಿಎಎ ಮತ್ತು ಎನ್ಆರ್ಸಿ ಗಲಭೆಗಳು ಅನಗತ್ಯವಾಗಿದೆ. ಈ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರೆ ಈ ಸಂವಿಧಾನ ಚರ್ಚೆಗೆ ವಿಶೇಷ ಅರ್ಥ ಬರುತ್ತದೆ ಎಂದು ಕಿವಿ ಮಾತು ಹೇಳಿದರು.
ಸಂವಿಧಾನದ ಮೇಲಿನ ಚರ್ಚೆ ಸಮಂಜಸವಾಗಿದೆ. ಇದಕ್ಕೆ ಸ್ಪೀಕರ್ ಕಾಗೇರಿ ಅವರನ್ನು ಅಭಿನಂದಿಸುತ್ತೇನೆ. ದೇಶದ ಯಾವುದೇ ರಾಜ್ಯದ ವಿಧಾನಮಂಡಲದಲ್ಲಿ ಈ ತರದ ಸಂವಿಧಾನದ ಮೇಲೆ ವಿಶೇಷ ಚರ್ಚೆ ಆಗಿಲ್ಲ. ಬಜೆಟ್ ಆದ ಬಳಿಕ ಆರನೇ ತಾರೀಕಿನ ಬಳಿಕ ವಿಶೇಷ ಚರ್ಚೆ ಮುಂದುವರಿಸಲು ನನ್ನ ಅಭಿಮತವಿದೆ ಎಂದರು. ಇದು ಮಾದರಿ ಸಂವಿಧಾನವಾಗಿದೆ. ಮುಕ್ತವಾಗಿ ಬದುಕಲು ಸಾಧ್ಯವಾಗಲು ನಮ್ಮ ಸಂವಿಧಾನಕರ್ತರ ದೂರದೃಷ್ಟಿಯ ಫಲವಾಗಿದೆ ಎಂದರು.
ಈ ದೇಶದ ರಾಷ್ಟ್ರಪತಿಗೂ ಒಂದೇ ಓಟು, ಈ ದೇಶದ ಪ್ರಧಾನಿಗೂ ಒಂದೇ ಓಟು. ಡಾ. ಬಿ.ಆರ್. ಅಂಬೇಡ್ಕರ್ ಇಷ್ಟು ಕಷ್ಟಪಡದೇ ಇದ್ದರೆ ನಮಗೆ ಶೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ ಎಂದರು. ಹಲವಾರು ಅಭಿವೃದ್ಧಿ ದೇಶಗಳಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ನಡೆದಿದೆ. ಆದರೆ ಅಂಬೇಡ್ಕರ್ ಉತ್ಕೃಷ್ಟ ಸಂವಿಧಾನವನ್ನು ರಚಿಸಿದ್ದಾರೆ. ನಮ್ಮ ಸಂವಿಧಾನ ಇತರ ದೇಶಗಳ ಸಂವಿಧಾನಕ್ಕಿಂತ ಬಹಳ ಎತ್ತರಕ್ಕೆ ಇರುವಂತದ್ದು ಎಂದು ವಿವರಿಸಿದರು.
ಸಂವಿಧಾನವನ್ನು ತಿರುಚಲು ಸಾಧ್ಯವಿಲ್ಲ. 1975ರಲ್ಲಿ ಅಂಥ ಯತ್ನ ನಡೆಯಿತಾದರೂ ಅದು ಸಫಲವಾಗಿಲ್ಲ. ಸಂವಿಧಾನ ಬದಲಾವಣೆ ಆಗುತ್ತದೆ ಎಂಬ ಕೂಗು ಆಗಾಗ ಕೇಳಿ ಬರುತ್ತಿದೆ. ಆದರೆ ಇದೆಲ್ಲಾ ಪೊಳ್ಳು ಹಾಗೂ ಸುಳ್ಳು ವಾದವಾಗಿದೆ. ನಮ್ಮ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಮಹಿಳೆಯರು ನಿರ್ಭೀತಿಯಲ್ಲಿ ಓಡಾಡದ ಪರಿಸ್ಥಿತಿ ಇದೆ. ಕೊಲೆ, ದರೋಡೆ ಹೆಚ್ಚಾಗುತ್ತಿದೆ. ಇದನ್ನು ನೋಡಿದರೆ ನಮ್ಮ ಕಣ್ಣಲ್ಲಿ ನೀರು ಬರುತ್ತದೆ ಎಂದರು. ಲಂಚ ಕೊಟ್ಟು ಕೆಲಸ ಮಾಡುವ ಸ್ಥಿತಿಯಿದೆ. ಇದನ್ನು ಕೊನೆ ಮಾಡುವುದು ಹೇಗೆ.? ವರ್ಗಾವಣೆ ಯಲ್ಲಿ ಭ್ರಷ್ಟಾಚಾರವಿದೆ. ಇದನ್ನು ಕೊನೆಗಾಣಿಸಲು ಎಲ್ಲಾ ಶಾಸಕರ ಸಹಕಾರ ಬೇಕು ಎಂದರು. ಸಂವಿಧಾನ ತನ್ನದೇ ಆದ ರಕ್ಷಣಾ ಕವಚ ಹೊಂದಿದೆ. ಒಂದು ಕಡೆ ಸಂವಿಧಾನ ಕಠಿಣವಾಗಿದೆ, ಇನ್ನೊಂದು ಕಡೆ ಅದು ಫ್ಲೆಕ್ಸಿಬಲ್ ಆಗಿದೆ ಎಂದು ತಿಳಿಸಿದರು.