ಬೆಂಗಳೂರು: ರಾಜ್ಯಾದ್ಯಂತ ಸಂವಿಧಾನದ ಧ್ಯೇಯೋದ್ದೇಶಗಳ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.26 ರಂದು ‘ಸಂವಿಧಾನ ದಿನ’ವನ್ನಾಗಿ ಆಚರಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂವಿಧಾನ ಶ್ರೇಷ್ಠವಾದದ್ದು, ಸಂವಿಧಾನದ ವಿಚಾರಗಳು ನಮಗೆ ಈಗಲೂ ಪ್ರೇರಣೆಯಾಗಿವೆ. 1949 ರ ನ. 26 ರಂದು ಸಂವಿಧಾನವನ್ನು ಸ್ವೀಕರಿಸಿದ ದಿನ. 2015 ರಿಂದ ಈ ದಿನವನ್ನು ಸಂವಿಧಾನದ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ದಿನವನ್ನು ಕೇವಲ ಸರ್ಕಾರಿ ಕಚೇರಿಗಳು, ವಿಶ್ವವಿದ್ಯಾನಿಲಯಗಳು, ಶಾಲಾ-ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಮಾತ್ರ ಆಚರಣೆ ಮಾಡದೆ ರಾಜ್ಯಾದ್ಯಂತ ಆಚರಿಸುವಂತಾಗಬೇಕು. ಯುವ ಪೀಳಿಗೆಗೆ ಸಂವಿಧಾನದ ಬಗ್ಗೆ ಬದ್ಧತೆ ಹೆಚ್ಚಿಸುವ ಸಲುವಾಗಿ ಪರಿಣಾಮಕಾರಿಯಾಗಿ ಅರಿವು ಮೂಡಿಸಲು 'ಸಂವಿಧಾನ ದಿನ' ಆಚರಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದಾಗಿ ಸ್ಪೀಕರ್ ಮಾಹಿತಿ ನೀಡಿದರು.
ಸಂವಿಧಾನ ದಿನಾಚರಣೆ ಕೇವಲ ಸ್ಪೀಕರ್, ಸಿಎಂ ಕಚೇರಿ ಅಥವಾ ಪ್ರತಿಪಕ್ಷದ ನಾಯಕರ ಕಚೇರಿಗೆ ಸೀಮಿತಗೊಳ್ಳಬಾರದು. ಸಾರ್ವಜನಿಕರು ಇದರಲ್ಲಿ ಭಾಗವಹಿಸಿ ಆಚರಿಸುವಂತಾಗಬೇಕು. ಇಂದು ವಿಧಾನಸೌಧದ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿಸಿದ ಅವರು, ಸಂವಿಧಾನ ದಿನಾಚರಣೆಯ ಕಾರ್ಯಕ್ರಮದ ಸ್ವರೂಪ ಹೇಗಿರಬೇಕೆಂದು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು. ಸಂವಿಧಾನ ಪ್ರತಿ ಕಡಿಮೆ ದರದಲ್ಲಿ ಜನರಿಗೆ ವಿತರಿಸುವ ಬಗ್ಗೆ ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.