ಬೆಂಗಳೂರು: 2019 - 2024ನೇ ಸಾಲಿಗೆ ಕೈಗಾರಿಕಾ ಪಾಲಿಸಿ ಶೀಘ್ರವೇ ಜಾರಿಗೆ ತರಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್ಕೆಸಿಸಿಐ) 102ನೇ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕೆ, ಶಿಕ್ಷಣ ಸೇರಿದಂತೆ ಇತರೆ ಕ್ಷೇತ್ರದಲ್ಲಿ 4ನೇ ಸ್ಥಾನದಲ್ಲಿ ಇದೆ. ಅದರಲ್ಲೂ ಕೈಗಾರಿಕಾ ಕ್ಷೇತ್ರ ಅತಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕಾಗಿ ಕೈಗಾರಿಕಾ ಪಾಲಿಸಿಯನ್ನು ತರಲಾಗುತ್ತಿದೆ.

ಅಲ್ಲದೆ ತುಮಕೂರು, ಬೀದರ್ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕೆ ಬಹಳ ವೇಗವಾಗಿ ಬೆಳೆಯುತ್ತಿದೆ. ತುಮಕೂರು ಜಿಲ್ಲೆಯು ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್ ಆಗಿ ಹೊರಹೊಮ್ಮಲಿದೆ. ಈಗಾಗಲೇ 18 ಸಾವಿರ ಎಕರೆ ಭೂ ಪ್ರದೇಶ ವಶಪಡಿಸಿಕೊಂಡಿದ್ದು, 105 ಕಂಪನಿಗಳು ಹೂಡಿಕೆಗೆ ಮುಂದಾಗಿವೆ ಎಂದರು.

ಬೆಂಗಳೂರಿನಿಂದ ತುಮಕೂರಿಗೆ ಸಬ್ ಅರ್ಬನ್ ರೈಲು ತರಲು ಚಿಂತಿಸಲಾಗಿದೆ. ಅಂತೆಯೇ ಮೆಟ್ರೋ ರೈಲು ಸಹ ತುಮಕೂರು ಸಮೀಪಕ್ಕೆ ಕೊಂಡೊಯ್ಯಲಾಗುವುದು ಎಂದು ಪರಮೇಶ್ವರ್ ಮಾಹಿತಿ ನೀಡಿದರು.
