ಬೆಂಗಳೂರು : ಮಹತ್ವದ ಹಲವಾರು ವಿಚಾರಗಳ ಬಗ್ಗೆ ಸಮಗ್ರ ಚರ್ಚೆ ನಡೆಯುವ ಅಗತ್ಯವಿದೆ. ಹಾಗಾಗಿ, ಸೆ. 21ರಿಂದ ನಡೆಸಲು ಉದ್ದೇಶಿಸಿರುವ ವಿಧಾನಸಭೆ ಕಲಾಪದ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಹಾಗೂ ಮುಖ್ಯಮಂತ್ರಿಯವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 21 ರಿಂದ 30ರವರೆಗೆ 15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯ ಕಲಾಪಗಳನ್ನು ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರಕಟಣೆಯಂತೆ 21, 22, 23, 24, 25, 28, 29 ಮತ್ತು 30ರವರೆಗೆ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಸದರಿ ಅಧಿವೇಶನದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಸುಗ್ರೀವಾಜ್ಞೆ ಒಳಗೊಂಡಂತೆ 35ಕ್ಕಿಂತ ಹೆಚ್ಚು ಮಸೂದೆ ಮಂಡಿಸಲಾಗುತ್ತಿದೆ ಎಂಬ ಮಾಹಿತಿ ಇದೆ.
ರಾಜ್ಯದ ಜನ ಹಿಂದೆಂದೂ ಕಂಡರಿಯದ ರೀತಿ ಸಂಕಷ್ಟಕ್ಕೊಳಗಾಗಿದ್ದಾರೆ. ಪದೇಪದೆ ಪ್ರವಾಹ ಬಂದೆರಗುತ್ತಿವೆ. ಕಳೆದ ಮಾರ್ಚ್ನಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಮಾರಣಾಂತಿಕವಾಗಿ ವ್ಯಾಪಿಸಿ ರಾಜ್ಯದ ಜನರ ಬದುಕನ್ನು ಹೈರಾಣಾಗಿಸಿದೆ. ಸುಮಾರು 6,500ಕ್ಕಿಂತ ಹೆಚ್ಚು ಜನ ಸೋಂಕಿನಿಂದಾಗಿ ಮೃತಪಡುವಂತಾಗಿದೆ. ಜತೆಗೆ ಡ್ರಗ್ಸ್ನಂತಹ ಅಪಾಯಕಾರಿ ಚಟುವಟಿಕೆಗಳು ರಾಜ್ಯವನ್ನು ಆವರಿಸಿವೆ. ಇಂತಹ ಸನ್ನಿವೇಶದಲ್ಲಿ ಅಧಿವೇಶನದ ಸಮಯ ಮಾತ್ರ ಯಾವುದ್ದಕ್ಕೂ ಸಾಕಾಗಲ್ಲ ಎಂದು ತಿಳಿಸಿದ್ದಾರೆ.
ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸಲು ಉದ್ದೇಶಿಸುವಂತೆ ಕಾಣಿಸುತ್ತಿದೆ. ಹಲವು ಜನ ವಿರೋಧಿ ಸುಗ್ರಿವಾಜ್ಞೆಗಳನ್ನು ಚರ್ಚೆ ನಡೆಸದೆ ಅಂಗೀಕಾರ ಪಡೆಯಲು ಯತ್ನಿಸುತ್ತಿರುವುದು ಅತ್ಯಂತ ಜನ ದ್ರೋಹಿ, ಬೇಜವಾಬ್ದಾರಿಯುತ ಮತ್ತು ದುಷ್ಟತನದ ಪರಮಾವಧಿಯಂತೆ ಕಾಣುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ.
ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್-3ರಂತೆ ಕಡ್ಡಾಯವಾಗಿ 60 ದಿನಗಳಿಗೆ ಕಡಿಮೆ ಇಲ್ಲದಂತೆ ಪ್ರತಿ ವರ್ಷ ಅಧಿವೇಶನಗಳನ್ನು ನಡೆಸಬೇಕು ಎಂದಿದೆ. ಸೆಕ್ಷನ್ 4ರ ಪ್ರಕಾರ ವರ್ಷದಲ್ಲಿ ಒಟ್ಟು 4 ಅಧಿವೇಶನ ನಡೆಸಬೇಕು. ಜನವರಿಯಲ್ಲಿ 15, ಮಾರ್ಚ್ನಲ್ಲಿ 20, ಜುಲೈನಲ್ಲಿ 15 ಮತ್ತು ನವೆಂಬರ್ನಲ್ಲಿ 10 ದಿನ ಸೇರಿ ಒಟ್ಟು ಕನಿಷ್ಠ 60 ದಿನ ಅಧಿವೇಶನ ನಡೆಸಬೇಕಾಗುತ್ತದೆ. ಆದರೆ, ಬಿಜೆಪಿ ಆಡಳಿತದ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ನಿರಂತರ ಹಾಳುಗೆಡವುತ್ತಿದೆ.
ಅಧಿವೇಶನಗಳನ್ನು ಕರೆದು ಚರ್ಚೆ ನಡೆಸುವುದನ್ನು ನಾಮಕಾವಸ್ಥೆ ಕೆಲಸವೆಂದು ಭಾವಿಸಿ ವರ್ತಿಸುತ್ತಿದೆ. ಕೇವಲ 8 ದಿನಗಳಲ್ಲಿ ಇಷ್ಟೊಂದು ಮಹತ್ವದ ವಿಚಾರಗಳನ್ನು ಚರ್ಚಿಸಲು ಸಾಧ್ಯವಿಲ್ಲ. ಹಾಗಾಗಿ, ಈ ಅಧಿವೇಶನವನ್ನು ಕನಿಷ್ಠ 3 ವಾರಗಳ ಕಾಲ ಅಂದರೆ ಅಕ್ಟೋಬರ್ 15ರವರೆಗೆ ವಿಸ್ತರಿಸಬೇಕೆಂದು ಸಿಎಂ ಹಾಗೂ ಸ್ಪೀಕರ್ಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.