ಬೆಂಗಳೂರು: ಮಸ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ವತಿಯಿಂದ ಮತದಾರರಿಗೆ ಹಣ ಹಂಚಲಾಗುತ್ತಿದೆ, ಎರಡು ಗೋಣಿಚೀಲಗಳಲ್ಲಿ ಹಣ ಲಭಿಸಿದೆ ಎಂದು ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡಲೇ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿಯವರು ಎರಡು ಚೀಲಗಳಲ್ಲಿ ಹಣ ಇಟ್ಟಿದ್ದರು ಎನ್ನಲಾದ ನಿಗದಿತ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಅಲ್ಲಿದ್ದ ಚೀಲಗಳಲ್ಲಿ ಮಂಡಕ್ಕಿ ಸಿಕ್ಕಿದೆಯೇ ಹೊರತು ಒಂದು ನಾಣ್ಯವೂ ಸಿಕ್ಕಿಲ್ಲ ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಈ ಕುರಿತ ವಿಡಿಯೋವನ್ನು ಅವರು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.
ಡಿ ಕೆ ಶಿವಕುಮಾರ್ ಅವರು ಸುಳ್ಳು ಹೇಳಿರುವುದು ಇದರಿಂದ ಸಾಬೀತಾಗಿದೆ. ಈ ವಿಚಾರ ನಾಡಿನ ಜನತೆಗೂ ತಿಳಿಯಬೇಕಾಗಿದೆ. ಆದ್ದರಿಂದ ತಾವು ಈ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸುತ್ತಿರುವುದಾಗಿ ಅವರು ತಿಳಿಸಿದ್ದು, ಸುಳ್ಳು ಆರೋಪ ಹೊರಿಸಿದ ಡಿ ಕೆ ಶಿವಕುಮಾರ್ ಅವರ ವಿರುದ್ಧ ಚುನಾವಣಾ ಅಧಿಕಾರಿಗಳಿಗೆ ಪಕ್ಷದ ವತಿಯಿಂದ ದೂರು ನೀಡಿ ಕ್ರಮಕ್ಕೆ ಆಗ್ರಹಿಸುವುದಾಗಿ ರವಿಕುಮಾರ್ ತಿಳಿಸಿದ್ದಾರೆ.