ಬೆಂಗಳೂರು: ಈ ಬಾರಿ ಬೆಂಗಳೂರು ಕೇಂದ್ರೀಕೃತ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಪ್ರಕಟಿಸಲಿದೆ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಿಷನ್-2023 ವೆಬ್ ಸೈಟ್ ಲಾಂಚ್ ಮಾಡಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬೆಂಗಳೂರು ನಗರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಇಲ್ಲಿನ ಮೂಲಸೌಕರ್ಯ ಕೊರತೆ, ನೀರಿನ ಕೊರತೆ, ವಿದ್ಯುತ್ ಕೊರತೆ, ಟ್ರಾಫಿಕ್ ಸಮಸ್ಯೆ ಗಳ ಬಗ್ಗೆ ಅರ್ಥ ಮಾಡಿ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ರೂಪಿಸಲಿದ್ದೇವೆ. ಬೆಂಗಳೂರು ಪ್ರಣಾಳಿಕೆಯನ್ನು ಪ್ರಕಟಿಸಲಿದ್ದೇವೆ. ಬೆಂಗಳೂರಿನ ನೆರೆ ಸಮಸ್ಯೆ, ಅಭಿವೃದ್ಧಿ ರೀತಿ, 110 ಹಳ್ಳಿಗಳಿಗೆ ಕೊಟ್ಟಿರುವ ಮೂಲಸೌಕರ್ಯಗಳನ್ನು ಪ್ರಣಾಳಿಕೆಯಲ್ಲಿ ಪರಿಗಣಿಸಲಿದ್ದೇವೆ. ಪರಿಣಾಮಕಾರಿಯಾಗಿ ಜನರಿಗೆ ಭರವಸೆ ನೀಡುವಂಥ ಕೆಲಸ ನಮ್ಮ ಪಕ್ಷ ಮಾಡಲಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಕ್ಕೆ ದೂರದೃಷ್ಟಿ ಅಗತ್ಯ: ನಾವು ಆಡಳಿತಕ್ಕೆ ಬಂದರೆ ನಾವು ಏನು ಕೊಡುತ್ತೇನೆ ಎಂಬ ಭರವಸೆ ನೀಡುವುದು ಬಹಳ ಅಗತ್ಯ. ವಿಭಿನ್ನವಾಗಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತದೆ. ನಾವು ಕೊಟ್ಟ ಭರವಸೆ ಈಡೇರಿಸುವಂತಹ ಭರವಸೆ ಆಗಿರಬೇಕು. ಅದು ಸಂಪೂರ್ಣವಾಗಿ ಕಾರ್ಯಗತವಾಗಿಸಬೇಕು. 2013ರಲ್ಲಿ ಚುನಾವಣೆ ಹೋಗುವ ವೇಳೆ ನಾವು 160 ಭರವಸೆ ಕೊಟ್ಟೆವು. ಆ 106 ಭರವಸೆಗಳನ್ನೂ ಈಡೇರಿಸಿದ್ದೆವು ಎಂದರು.
ಎಲ್ಲರನ್ನೊಳಗೊಂಡ ಪ್ರಣಾಳಿಕೆ: ಯುವಕರು ಕೂಡ ಹೆಚ್ಚಿನ ಆಶೋತ್ತರಗಳನ್ನು ಇಟ್ಟಿದ್ದಾರೆ. ಅದು ಪ್ರಣಾಳಿಕೆಯಲ್ಲಿ ಪ್ರತಿಬಿಂಬಿಸಬೇಕು. ಜನಸಮುದಾಯದ ಭಾವನೆ, ಸಮಸ್ಯೆಗಳನ್ನು ಅವರಿಂದಲೇ ತಿಳಿದುಕೊಳ್ಳಬೇಕು. ಅದಕ್ಕಾಗಿ ನಾವು ಸಾರ್ವಜನಿಕರ ಸಮೀಪ ಹೋಗುತ್ತಿದ್ದೇವೆ. ಸಾರ್ವಜನಿಕರ ಮನಸ್ಸಿನಲ್ಲಿ ಏನಿದೆ ಅದನ್ನು ಅರ್ಥ ಮಾಡಿ ಅದರ ಆಧಾರದಲ್ಲಿ ಪ್ರಣಾಳಿಕೆ ತಯಾರು ಮಾಡುತ್ತೇವೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ 10 ವಿಷಯಗಳನ್ನು ಗುರುತಿಸಿ, ಅದಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ 10 ಅಂಶಗಳನ್ನು ಪ್ರಕಟಿಸಿದ್ದೇವೆ ಎಂದು ವಿವರಿಸಿದರು.
ಎಲ್ಲ ಭಾಗಕ್ಕೂ ಆದ್ಯತೆ: ಕಿತ್ತೂರು ಕರ್ನಾಟಕದ ಭಾಗದ ಮುಖಂಡರು, ಜನರ ಜೊತೆ ಚರ್ಚೆ ಮಾಡುತ್ತೇವೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಪ್ರಣಾಳಿಕೆಯನ್ನು ಸಿದ್ಧಪಡಿಸಲಿದ್ದೇವೆ. ಮಧ್ಯ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಬಗ್ಗೆನೂ ಫೀಡ್ ಬ್ಯಾಕ್ ತೆಗೋತೀವಿ. ಕರಾವಳಿ ಕರ್ನಾಟಕದ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚಿಸಿ ಪ್ರಣಾಳಿಕೆಯಲ್ಲಿ ಹಾಕುತ್ತೇವೆ. ಈ ಬಾರಿ ಐದು ಪ್ರಮುಖ ಅಂಶಗಳ ಬಗ್ಗೆ ಆದ್ಯತೆ ಕೊಡಲಿದ್ದೇವೆ.
ಯುವಕರ ಸಮಸ್ಯೆಗಳು, ಮಹಿಳೆಯರ ಸಮಸ್ಯೆಗಳು, ಶಿಕ್ಷಣ, ಆರೋಗ್ಯ, ಕೃಷಿ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಿದ್ದೇವೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ಗ್ರಾಮೀಣಾಭಿವೃದ್ಧಿ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ. ಯೋಜನೆ ರೂಪಿಸುವಾಗ ಅದನ್ನು ಹೇಗೆ ಅನುಷ್ಠಾನ ತರಬೇಕು. ಅದಕ್ಕೆ ಬೇಕಾಗುವ ಅನುದಾನ ಈ ಎಲ್ಲ ವಿಚಾರವಾಗಿ ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸಲಿದ್ದೇವೆ ಎಂದರು.
ಭ್ರಷ್ಟಾಚಾರದ ಬಗ್ಗೆ ನಮ್ಮ ಸರ್ಕಾರ ಏನು ಮಾಡಬಹುದು?: ನಮ್ಮ ಸರ್ಕಾರ ಬಂದರೆ ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತ ಏನು ಮಾಡಬಹುದು? ಎಂಬ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಮೀಸಲಾತಿ ಗೊಂದಲ ರಾಜ್ಯದಲ್ಲಿ ಕಾಡುತ್ತಿದೆ. ಕಾಂಗ್ರೆಸ್ ನಿಲುವು ಏನು ಎಂಬ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸುತ್ತೇವೆ. ಒಳ ಮೀಸಲಾತಿ, ವಿವಿಧ ಸಮುದಾಯಗಳ ಮೀಸಲಾತಿ ಬಗ್ಗೆ ಈ ಬಾರಿ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಲಿದ್ದೇವೆ.
ನಾವು ಜನರ ಭಾವನೆಗಳಿಗೆ ಪ್ರಾಮುಖ್ಯತೆ ಕೊಡುವುದಿಲ್ಲ. ನಮಗೆ ಜನರ ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮಗಳಿಗೆ ಮುಖ್ಯ. ಅದರ ಆಧಾರದಲ್ಲಿ ಪ್ರಣಾಳಿಕೆ ಮಾಡುತ್ತೇವೆ. ಈ ಸಾರಿ ಅಭ್ಯರ್ಥಿಗಳ ಪಟ್ಟಿ ಬೇಗ ಬರಲಿದೆ. ಈಗ ಪ್ರಕ್ರಿಯೆ ಆರಂಭವಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ದು, ಎರಡು ಮೂರು ಸಭೆ ನಡೆಸಿದ ಬಳಿಕ ಅಂತಿಮಗೊಳಿಸುತ್ತೇವೆ ಎಂದರು.
ಅಮಿತ್ ಶಾ ಮಂಡ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದರಿಂದ ನಮಗೇನು ಸಮಸ್ಯೆ ಇಲ್ಲ. ನಮ್ಮ ಕಾರ್ಯತಂತ್ರವೇ ಬೇರೆ ಇರಲಿದೆ. ಬಿಜೆಪಿ ಪಕ್ಷ ಭಾವನಾತ್ಮಕ ವಿಚಾರಗಳನ್ನು ತೆಗದುಕೊಂಡು ಹೋಗುತ್ತದೆ. ಆ ಮೂಲಕ ಜನರನ್ನು ಕೆರಳಿಸುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಯುಪಿ ಸಿಎಂ ಕರೆ ತಂದು ರಾಮಮಂದಿರ ನಿರ್ಮಾಣ ಮಾಡುವ ಅಗತ್ಯವಿಲ್ಲ, ನಾನೇ ನಿರ್ಮಾಣ ಮಾಡುತ್ತೇನೆ : ಹೆಚ್ಡಿಕೆ