ಬೆಂಗಳೂರು: ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುವುದರ ಜೊತೆಗೆ ಮಾನಸಿಕವಾಗಿಯೂ ಅವರನ್ನು ಸಿದ್ಧ ಮಾಡುವುದು ಅತ್ಯವಶ್ಯಕ ಎಂದು ನಗರದ ಫೋರ್ಟಿಸ್ ಆಸ್ಪತ್ರೆಯ ಖ್ಯಾತ ಮನೋವಿಜ್ಞಾನಿ ಕೌನ್ಸೆಲಿಂಗ್ ತಜ್ಞೆ ಕೆ. ಶಮಂತ ಹೇಳಿದರು.
ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ಅವರು, ಮಕ್ಕಳು ಶಾಲೆಗಳಿಗೆ ಹೋಗುವಂತೆ ಮಾಡಲು ಪೋಷಕರಿಗೆ ಕೆಲವು ಸಲಹೆಗಳನ್ನು ನೀಡಿದರು.
ಮಕ್ಕಳ ಆತಂಕ ನಿವಾರಿಸಿ:
ಪ್ರತಿನಿತ್ಯ ಸುದ್ದಿ ಮಾಧ್ಯಮಗಳನ್ನು ನೋಡಿ ಮಕ್ಕಳು ಕೋವಿಡ್ ಬಗ್ಗೆ ಆತಂಕಗೊಂಡಿರುತ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿ ಅವರ ಶಿಕ್ಷಣದ ಮೇಲೆ ಪ್ರಭಾವ ಬೀರುವುದರ ಜೊತೆಗೆ ಮಾನಸಿಕ ನೆಮ್ಮದಿ ಕಳೆದುಕೊಳ್ಳಬಹುದು. ಹೀಗಾಗಿ ಶಾಲೆಗೆ ಕಳುಹಿಸುವ ಮುನ್ನಾ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಅತ್ಯಂತ ಅವಶ್ಯಕ. ಮಕ್ಕಳಲ್ಲಿನ ಆತಂಕ ನಿವಾರಿಸಿ ಎಂದು ಹೇಳಿದರು.
ಮೂರನೇ ಅಲೆ ಬಗ್ಗೆ ಭಯ ಬೇಡ:
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ಜನರು ಸಾಕಷ್ಟು ಭಯಭೀತರಾಗಿದ್ದರು. ಮೂರನೇ ಅಲೆ ಮಕ್ಕಳನ್ನು ಕಾಡಬಹುದು ಎಂಬ ವರದಿ ಬಳಿಕ ಇನ್ನಷ್ಟು ಹೆದರಿದ್ದಾರೆ. ಆದರೆ ಕೆಲವು ಅಧ್ಯಯನಗಳು ಮಕ್ಕಳಿಗೆ ಹೆಚ್ಚಾಗಿ ಕೋವಿಡ್ ಬಾಧಿಸುವುದಿಲ್ಲ ಎಂದು ಹೇಳಿವೆ. ಜೊತೆಗೆ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದ ಪ್ರಕರಣಗಳು ತೀರಾ ಕಡಿಮೆ ಎಂದು ಅಮೆರಿಕ ನಡೆಸಿದ ಸಂಶೋಧನೆಯಲ್ಲಿ ಸಾಬೀತಾಗಿದೆ. ಹೀಗಾಗಿ 3ನೇ ಅಲೆಯೂ ಸಹ ಮಕ್ಕಳಿಗೆ ಬಾಧಿಸದೆ ಇರಬಹುದು. ಆದರೆ ಸುರಕ್ಷತೆಯಿಂದಿರುವುದು ನಮ್ಮೆಲ್ಲರ ಕರ್ತವ್ಯ ಎಂದು ವೈದ್ಯೆ ಶಮಂತ ತಿಳಿಸಿದರು.
ಮನೋವೈದ್ಯರು ನೀಡಿರುವ ಕೆಲವು ಸಲಹೆಗಳು :
1. ಕೋವಿಡ್ ಸೋಂಕಿನ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಿ, ಇದರ ಜೊತೆಗೆ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ ಸ್ಯಾನಿಟೈಸ್ ಮಾಡಿಕೊಳ್ಳುವುದರ ಬಗ್ಗೆ ಅರ್ಥವಾಗುವ ರೀತಿ ತಿಳಿ ಹೇಳಿ. ಸಣ್ಣ ಮಕ್ಕಳಾದರೆ ನೀವೇ ಹೆಚ್ಚು ಆರೈಕೆ ತೆಗೆದುಕೊಳ್ಳಬೇಕು.
2. ಮಕ್ಕಳಲ್ಲಿ ಕೋವಿಡ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇರುತ್ತವೆ. ಆ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಅವರಿಗೆ ಸರಿಯಾದ ಮಾಹಿತಿ ನೀಡಿ ಗೊಂದಲ ನಿವಾರಿಸಿ.
3. ಮಕ್ಕಳು ವರ್ಷಗಳ ಬಳಿಕ ಶಾಲೆಗೆ ತೆರಳುತ್ತಿರುವುದರಿಂದ ಸ್ನೇಹಿತರೊಂದಿಗೆ ಹರಟೆ ಹೊಡೆಯುವುದು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಇಚ್ಛಿಸಬಹುದು. ಇದನ್ನು ತಡೆಯುವುದು ತಪ್ಪು, ಮಕ್ಕಳ ಇಚ್ಛೆಯಂತೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ. ಆದರೆ ಸುರಕ್ಷತೆ ಬಗ್ಗೆ ಜಾಗರೂಕತೆಯಿಂದರಲು ಸಹ ಮನವರಿಕೆ ಮಾಡಿಕೊಡಿ.
4. ಮಕ್ಕಳು ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಬೇಕು ಎಂಬ ಒತ್ತಡ ಹಾಕುವುದನ್ನು ಕಡಿಮೆ ಮಾಡಿ. ಅವರು ಕೆಲ ಸಮಯದವರೆಗೆ ಶಾಲೆಯ ಆಫ್ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ನೀಡಿ.
5. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದರೆ, ಶಾಲಾ ಶಿಕ್ಷಕರೊಂದಿಗೆ ಮಾತನಾಡಿ. ಅವರಲ್ಲಿರುವ ಭಯವನ್ನು ಹೋಗಲಾಡಿಸಲು ಪ್ರಯತ್ನ ಪಡಿ. ಅವಶ್ಯಕತೆ ಇದ್ದರೆ ಮಕ್ಕಳಿಗೆ ಆಪ್ತಸಮಾಲೋಚನೆ ಮಾಡಿಸಿ.
6. ಇನ್ನೂ ಸಣ್ಣ ಮಕ್ಕಳಿಗೆ ಶಾಲೆ ತೆರೆದಿಲ್ಲ, ಮುಂದಿನ ದಿನಗಳಲ್ಲಿ ಶಾಲೆ ತೆರೆಯುವ ಬಗ್ಗೆ ಅವರಿಗೆ ಈಗಿನಿಂದಲೇ ಅರ್ಥೈಸುತ್ತಾ ಬನ್ನಿ. ಮಕ್ಕಳಿಗೆ ಶಾಲೆ ಬಗ್ಗೆ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ವಾತಾವರಣ ನಿರ್ಮಾಣ ಮಾಡಿ ಎಂಬುದು ಮನೋವೈದ್ಯೆ.