ಬೆಂಗಳೂರು: ಕರ್ನಾಟಕದ ಹೆಮ್ಮೆಯ ಮೈಸೂರು ದಸರಾಗೆ ಸಿದ್ದತೆ ಜೋರಾಗಿದೆ. ವೈಭವಯುತ ಮೈಸೂರು ದಸರಾದಲ್ಲಿ ಈ ಭಾರಿ ರಾಮನಗರದಲ್ಲಿ ಸ್ಥಳೀಯ ಆಹಾರಗಳನ್ನು ದಸರೆಯ ಪ್ರವಾಸಿಗರಿಗೆ ಪರಿಚಯಿಸಲಾಗುತ್ತಿದೆ ಎಂದು ಸಿ ಟಿ ರವಿ ಹೇಳಿದರು.
ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಅವರು, ಈ ಬಾರಿ ಹಲವು ವಿಭಿನ್ನ ವಿಶೇಷವಾದ ಕಾರ್ಯಕ್ರಮಗಳನ್ನ ಪರಿಚಯಿಸುತ್ತಿದ್ದೇವೆ ಈ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ಹೆದ್ದಾರಿ ಅಕ್ಕ ಪಕ್ಕದಲ್ಲಿ ನೇಟಿವ್ ಫುಡ್, ನೇಟಿವ್ ಪ್ರಾಡಕ್ಟ್ಸ್ ಹೆಸರಿನಲ್ಲಿ ತಟ್ಟೆ ಇಡ್ಲಿಯಿಂದ ಹಿಡಿದು ಮಾಂಸಾಹಾರದವರೆಗೆ ಪರಿಚಯ ಜೊತೆಗೆ ಸ್ಥಳೀಯ ಉತ್ಪನ್ನಗಳ ಮಾರಾಟ ಮಾಡಲಾಗುತ್ತದೆ ಎಂದರು.
ಇದರ ಜೊತೆಗೆ ಮಂಡ್ಯದ ಗ್ರಾಮವೊಂದರಲ್ಲಿ ಕೃಷಿ ಸಂಸ್ಕೃತಿಗಳನ್ನು ಪರಿಚಯಿಸಲು ಹಲವು ವ್ಯವಸ್ಥೆ ಮಾಡಲಾಗಿದೆ. ಕಬ್ಬು ಜಗಿದು ತಿನ್ನುವ ಸ್ಪರ್ಧೆ, ಬೇಸಾಯದ ಅನುಭವ ಮಾಡಿಸುವುದು, ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟದಂತಹ ವಿನೂತನ ಸ್ಪರ್ಧೆಗಳನ್ನು ಆಯೋಜಿಸಿದೆ. ಇದಕ್ಕಾಗಿ ಮಂಡ್ಯ- ರಾಮನಗರ ಜಿಲ್ಲೆಗಳಿಗೆ ತಲಾ 15 ಲಕ್ಷ ಬಿಡುಗಡೆ ಮಾಡಲಾಗಿದೆ.
ಅಷ್ಟೇ ಅಲ್ಲದೆ, ಮೈಸೂರಿನಲ್ಲಿ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ, ಹಸಿರು ಸಂತೆ, ಪಾರಂಪರಿಕ ಕ್ರೀಡೆಗಳು, ಮಕ್ಕಳ ಸಾಹಸ ಕೇಂದ್ರ , ಲೇಸರ್ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಸಚಿವ ಸಿ.ಟಿ ರವಿ ತಿಳಿಸಿದರು.