ಬೆಂಗಳೂರು: ರಾಜ್ಯದಲ್ಲಿ ವಸತಿ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಈ ವಾಸ್ತವತೆಯನ್ನು ಸ್ವತಃ ಸಿಎಂ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ. ವಸತಿ ಯೋಜನೆಗಳ ಪ್ರಗತಿ ಹೇಗಿದೆ ಎಂಬುದರ ಸಂಪೂರ್ಣ ವರದಿ ಇಲ್ಲಿದೆ.
ರಾಜ್ಯ ಸರ್ಕಾರ ಬಡವರಿಗೆ ಸೂರು ಒದಗಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅನುದಾನದೊಂದಿಗೆ ಹಲವು ವಸತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಸವ ವಸತಿ, ಪ್ರಧಾನ ಮಂತ್ರಿ ಆವಾಸ್, ಡಾ.ಬಿ.ಆರ್.ಅಂಬೇಡ್ಕರ್, ದೇವರಾಜು ಅರಸು ಯೋಜನೆಗಳ ಮೂಲಕ ಬಡವರಿಗೆ ಸೂರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಆದರೆ 2020-2021ಸಾಲಿನಲ್ಲಿ ವಸತಿ ಯೋಜನೆಗಳ ಪ್ರಗತಿ ಕಳಪೆಯಾಗಿದೆ.
ಜಂಟಿ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಸತಿ ಯೋಜನೆ ಅನುಷ್ಠಾನದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿಎಂ ತಮ್ಮ ಉತ್ತರದಲ್ಲೂ ರಾಜ್ಯದಲ್ಲಿ ವಸತಿ ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದು ಒಪ್ಪಿಕೊಂಡಿದ್ದರು. ಅಷ್ಟಕ್ಕೂ ರಾಜ್ಯದಲ್ಲಿ ಮನೆಗಳ ನಿರ್ಮಾಣ ಪ್ರಗತಿ ನಿರೀಕ್ಷಿತ ಗುರಿ ಮುಟ್ಟುವಲ್ಲಿ ವಿಫಲವಾಗಿದೆ.
ಗ್ರಾಮೀಣ ಪ್ರದೇಶಲ್ಲಿ ವಸತಿ ಯೋಜನೆ ಪ್ರಗತಿ: ಗ್ರಾಮೀಣ ಪ್ರದೇಶಗಳಲ್ಲಿ ಬಸವ ವಸತಿ, ಪ್ರಧಾನ ಮಂತ್ರಿ ಆವಾಸ್, ಡಾ.ಬಿ.ಆರ್.ಅಂಬೇಡ್ಕರ್, ದೇವರಾಜು ಅರಸು ಯೋಜನೆ ಮೂಲಕ 2020-21 ಸಾಲಿನಲ್ಲಿ ವಾರ್ಷಿಕ 1,33,500 ಮನೆ ಕಟ್ಟುವ ಗುರಿ ಹೊಂದಲಾಗಿತ್ತು. ಆದರೆ ಜನವರಿ ವರೆಗೆ ಕೇವಲ 70,442 ಮನೆಗಳನ್ನು ಪೂರ್ಣಗೊಳಿಸಲಾಗಿದೆ.
ವಸತಿ ಇಲಾಖೆ ನೀಡಿರುವ ಅಂಕಿ ಅಂಶದ ಪ್ರಕಾರ 52.77% ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಬೆಂಗಳೂರು ನಗರದಲ್ಲಿ 1,938 ಮನೆ ನಿರ್ಮಾಣದ ವಾರ್ಷಿಕ ಗುರಿ ಹೊಂದಲಾಗಿತ್ತು. ಆದರೆ ಕೇವಲ 10.47% ಮಾತ್ರ ಮನೆ ನಿರ್ಮಾಣ ಪೂರ್ಣಗೊಂಡಿದೆ. ಕೊಡಗಿನಲ್ಲಿ 840 ಮನೆ ನಿರ್ಮಾಣದ ವಾರ್ಷಿಕ ಗುರಿ ಹೊಂದಲಾಗಿತ್ತು, ಆದರೆ ಇಲ್ಲಿವರೆಗೆ 227 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಧಾರವಾಡದಲ್ಲಿ ಕೇವಲ 78.86% ಮನೆಗಳು ಪೂರ್ಣಗೊಂಡು ಉತ್ತಮ ಪ್ರದರ್ಶನ ಮಾಡಿದೆ.
ಓದಿ : ಇಂದು ಸಭಾಪತಿ ಸ್ಥಾನಕ್ಕೆ ಚುನಾವಣೆ... ಹೊರಟ್ಟಿ ಬೆಂಬಲಿಸಲು ಬಿಜೆಪಿ ಸದಸ್ಯರಿಗೆ ಸಿಎಂ ಸೂಚನೆ
ರಾಮನಗರ, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ಮೈಸೂರು, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಹಾಸನ, ಬೀದರ್, ಗದಗ, ಕಲಬುರಗಿ, ಶಿವಮೊಗ್ಗ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ 50%ಗೂ ಕಡಿಮೆ ಮನೆ ನಿರ್ಮಾಣ ಪ್ರಗತಿಯಾಗಿದೆ.
ನಗರ ಪ್ರದೇಶದಲ್ಲಿ ಕಳಪೆ ವಸತಿ ಯೋಜನೆ ಪ್ರಗತಿ: ನಗರ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಪ್ರಗತಿ ನೀರಸವಾಗಿದೆ. ವಸತಿ ಇಲಾಖೆ ನೀಡಿರುವ ಅಂಕಿ ಅಂಶದ ಪ್ರಕಾರ ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳ ಅನುಷ್ಠಾನ ಭಾರೀ ಕುಂಠಿತವಾಗಿದೆ. ಅದರಂತೆ ಈ ವರ್ಷ ಒಟ್ಟು 22,500 ಮನೆಗಳ ನಿರ್ಮಾಣದ ವಾರ್ಷಿಕ ಗುರಿ ಹೊಂದಲಾಗಿತ್ತು. ಆದರೆ ಜನವರಿವರೆಗೆ ಕೇವಲ 3,918 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಅಂದರೆ ಕೇವಲ 17.41% ಮನೆ ನಿರ್ಮಾಣ ಪೂರ್ಣಗೊಂಡಿದೆ.
ರಾಯಚೂರು, ಕೊಡಗು, ಹಾಸನ, ಕಲಬುರಗಿ, ಬೀದರ್, ತುಮಕೂರು, ಮಂಡ್ಯ, ಚಿತ್ರದುರ್ಗ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ವಾರ್ಷಿಕ ಗುರಿ ಎದುರು 10% ಗಿಂತಲೂ ಕಡಿಮೆ ಪ್ರಗತಿ ಸಾಧಿಸಲಾಗಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ವಸತಿ ಯೋಜನೆ ಪ್ರಗತಿ 35%ಗಿಂತಲೂ ಕಡಿಮೆ ಇರುವುದು ವಸತಿ ಇಲಾಖೆ ನೀಡಿರುವ ಅಂಕಿಅಂಶದಲ್ಲಿ ಬಯಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಗತಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದ ನಗರ ಪ್ರದೇಶಗಳಲ್ಲಿ ಜನವರಿವರೆಗೆ ಒಟ್ಟು 5,80,179 ಅನುಮೋದನೆ ನೀಡಲಾಗಿದೆ. ಈ ಪೈಕಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವುದು 91,565. ಒಟ್ಟು ಬಾಕಿ ಉಳಿದುಕೊಂಡಿರುವುದು ಬರೋಬ್ಬರಿ 4,88,614 ಮನೆಗಳ ನಿರ್ಮಾಣ ಕಾರ್ಯ ಬಾಕಿ ಉಳಿದುಕೊಂಡಿದೆ.