ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರ ವ್ಯಕ್ತಿಗತ ಹೆಸರಿನೊಂದಿಗೆ ಕರೆಯುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿರುವ ಹೈಕೋರ್ಟ್, ಈ ಸಂಬಂಧ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ)ಗೆ ಮನವಿ ಸಲ್ಲಿಸುವಂತೆ ಸೂಚಿಸಿದೆ.
ಈ ಕುರಿತು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಸರ್ಕಾರಗಳನ್ನು ಅದರ ಮುಖ್ಯಸ್ಥರ ವ್ಯಕ್ತಿಗತ ಹೆಸರಿನೊಂದಿಗೆ ಕರೆಯುವುದನ್ನು ತಡೆಯಲು ಸುಗ್ರಿವಾಜ್ಞೆ ತರುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ಆದರೆ, ಇಂತಹದ್ದೇ ರೀತಿಯಲ್ಲಿ ಶಾಸನ ರೂಪಿಸುವಂತೆ ಶಾಸಕಾಂಗಕ್ಕೆ ನಿರ್ದೇಶನ ನೀಡಲು ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಈ ಸುದ್ದಿಯನ್ನೂ ಓದಿ: ರೈತರ ಪರೇಡ್ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಕೂಡದು; ಪೊಲೀಸರಿಗೆ ಹೈಕೋರ್ಟ್ ಸೂಚನೆ
ಅಲ್ಲದೇ, ಮಾಧ್ಯಮಗಳು ಬಿಎಸ್ ವೈ ಸರ್ಕಾರ, ಮೋದಿ ಸರ್ಕಾರ ಎಂದು ವರದಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರಗಳನ್ನು ಹೀಗೆಯೇ ಕರೆಯಬೇಕು ಎಂದು ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿದಾರರು ಪಿಐಬಿಗೆ ಮನವಿ ಸಲ್ಲಿಸಲಿ, ಅದನ್ನು ಪಿಐಬಿ ಕಾನೂನು ರೀತಿ ಪರಿಗಣಿಸಿ ಕ್ರಮ ಕೈಗೊಳ್ಳಲಿ ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿದಾರರ ಆಕ್ಷೇಪ :
ಕೇಂದ್ರ ಸರ್ಕಾರವನ್ನು ‘ಮೋದಿ ಸರ್ಕಾರ’ ಎಂದು ರಾಜ್ಯ ಸರ್ಕಾರವನ್ನು ‘ಬಿಎಸ್ವೈ’ ಸರ್ಕಾರ ಎಂದು ಕರೆಯಲಾಗುತ್ತದೆ. ಜನರಿಂದ ಚುನಾಯಿತಗೊಂಡ ಸರ್ಕಾರಗಳನ್ನು ಪ್ರಧಾನಿ ಅಥವಾ ಮುಖ್ಯಮಂತ್ರಿಯವರ ವ್ಯಕ್ತಿಗತ ಹೆಸರುಗಳಿಂದ ಕರೆಯುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದ ಪ್ರಧಾನಿ, ಮುಖ್ಯಮಂತ್ರಿಗಳ ಹೆಸರಲ್ಲಿ ಸರ್ಕಾರಗಳನ್ನು ಕರೆಯುವುದನ್ನು ತಡೆಯಲು ಸುಗ್ರಿವಾಜ್ಞೆ ತರುವಂತೆ ನಿರ್ದೇಶಿಸಬೇಕು. ಸರ್ಕಾರವನ್ನು ಪ್ರಧಾನಿ, ಸಿಎಂ ಹೆಸರಿನಿಂದ ಕರೆಯುವುದು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸರ್ಕಾರಿ ಪತ್ರಿಕಾ ಪ್ರಕಟಣೆಗಳಲ್ಲಿ ಪ್ರಧಾನಿ, ಸಿಎಂ ಹೆಸರಿನಿಂದ ಕರೆದಿರುವ ದಾಖಲೆಗಳನ್ನು ಸರಿಪಡಿಸಲು ಸೂಚಿಸಬೇಕು. ಈ ಸಂಬಂಧ ಮಾಧ್ಯಮಗಳಿಗೂ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.