ಬೆಂಗಳೂರು: ಪ್ರತಿಪಕ್ಷದವರು ಎಷ್ಟೇ ಒತ್ತಾಯ ಮಾಡಿದ್ರೂ ಸಹ ಮೂರು ದಿನಗಳಿಗಿಂತ ಹೆಚ್ಚು ಕಾಲ ಸದನ ಕಲಾಪ ವಿಸ್ತರಣೆ ಮಾಡುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿ ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸಕ್ತ ಎಲ್ಲ ಶಾಸಕರು ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಬೇಕೆ ಹೊರತು ವಿಧಾನಸಭಾ ಅಧಿವೇಶನದಲ್ಲಿ ಕೂರುವುದಲ್ಲ. ಮೂರು ದಿನಗಳಲ್ಲಿ ನೆರೆ ವಿಷಯಕ್ಕೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆಗೆ ನಾವು ಸಿದ್ಧ. ನಾಳೆ ಸಂತಾಪ ನಿರ್ಣಯದ ಬಳಿಕ ಬಜೆಟ್ ಲೇಖಾನುದಾನ ಮಂಡಿಸುತ್ತೇವೆ ಎಂದು ತಿಳಿಸಿದರು.
ಬಜೆಟ್ ಮೇಲಿನ ಚರ್ಚೆ ಮತ್ತು ಅನುಮೋದನೆಗೆ ಪ್ರತಿಪಕ್ಷಗಳ ಸಹಕಾರವನ್ನೂ ಕೋರುತ್ತೇವೆ. ಸದನ ಕಲಾಪದಲ್ಲಿ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರು ಇರಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಸಕಾಂಗ ಸಭೆಯಲ್ಲಿ ಪ್ರತಿಪಕ್ಷಗಳ ತಂತ್ರಕ್ಕೆ ಆಡಳಿತ ಪಕ್ಷದ ಪ್ರತಿತಂತ್ರ ರೂಪಿಸಿದರು. ಪ್ರತಿಪಕ್ಷಗಳ ವಾಗ್ದಾಳಿಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿದೆ. ನೆರೆ ಪರಿಹಾರ ಕಾಮಗಾರಿ ಸಂಬಂಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮರ್ಥವಾಗಿ ಸದನದಲ್ಲಿ ದ್ವನಿ ಎತ್ತಬೇಕು ಎಂದು ಸಿಎಂ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿವೇಶನಕ್ಕೆ ಖಾಸಗಿ ಮಾಧ್ಯಮ ಕ್ಯಾಮರಾ ನಿರ್ಬಂಧ ವಿಚಾರವೂ ಪ್ರಸ್ತಾಪವಾಗಿದೆ. ಶಾಸಕರು ಈ ಬಗ್ಗೆ ಪ್ರಸ್ತಾಪಿಸಿದಾಗ ಸಿಎಂ, ಅದು ಸ್ಪೀಕರ್ ನಿರ್ಧಾರ, ನಾನೇನು ಮಾಡೋಕಾಗುತ್ತದೆ ಎಂದು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು. ಸ್ಪೀಕರ್ ನಮ್ಮ ಜೊತೆ ಚರ್ಚೆ ಮಾಡಿ ಏನೂ ನಿರ್ಬಂಧ ಹಾಕಿಲ್ಲ ಎಂದು ಸಮಜಾಯಿಷಿ ನೀಡಿದರು ಎನ್ನಲಾಗಿದೆ.
ಇನ್ನು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಉತ್ತರ ಕರ್ನಾಟಕದ ಶಾಸಕರಿಂದ ಕ್ಷೇತ್ರಗಳಿಗೆ ನೆರೆ ಹಾನಿ ಅನುದಾನ ಕೊಡಲು ಬೇಡಿಕೆ ಇಟ್ಟಿದ್ದಾರೆ. ನಮ್ಮ ಕ್ಷೇತ್ರಗಳಲ್ಲೂ ಹಾನಿಯಾಗಿದೆ ನಮಗೂ ಅನುದಾನ ಕೊಡಿ ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಬನ್ನಿ ಹಂಚುವ ಕಾರ್ಯಕ್ರಮ ಇದ್ದ ಕಾರಣ ಯತ್ನಾಳ್, ಉಮೇಶ್ ಕತ್ತಿ, ರಾಜೀವ್ ಮೊದಲಾದವರು ಪೂರ್ವಾನುಮತಿ ಪಡೆದು ಇಂದಿನ ಸಭೆಗೆ ಗೈರು ಹಾಜರಾಗಿದ್ದರು. ನಾಳೆ ಕಲಾಪದಲ್ಲಿ ಅವರೆಲ್ಲ ಪಾಲ್ಗೊಳ್ಳುತ್ತಾರೆ ಎಂದು ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದರು.