ಬೆಂಗಳೂರು : ರಾಜ್ಯಸಭೆಗೆ ನಾಲ್ಕು ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಂತೆ ರಾಜ್ಯ ವಿಧಾನ ಪರಿಷತ್ತಿಗೂ ಈ ಬಾರಿ 7 ಸ್ಥಾನಗಳಿಗೆ ಯಾವುದೇ ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ 7 ಸ್ಥಾನಗಳಿಗೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರ ಸಂಖ್ಯಾವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪಕ್ಷದಿಂದ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ರಾಜ್ಯ ವಿಧಾನಸಭೆಯಲ್ಲಿನ ಶಾಸಕರ ಸಂಖ್ಯಾವಾರು ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಮತ್ತು ಜೆಡಿಎಸ್ ಒಬ್ಬರು ಸದಸ್ಯರನ್ನು ಮೇಲ್ಮನೆಗೆ ಆಯ್ಕೆ ಮಾಡಬಹುದಾಗಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು 28 ಮತಗಳ ಅಗತ್ಯವಿದೆ. ಈ ಬಾರಿ ಮೂರೂ ಪಕ್ಷಗಳಲ್ಲಿ ಹೆಚ್ಚುವರಿ ಮತಗಳು ಇದ್ದರೂ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ವಿನ ಅಭ್ಯರ್ಥಿ ಕಣಕ್ಕಿಳಿಸಲು ಯಾವ ಪಕ್ಷವೂ ಆಸಕ್ತಿ ತೋರುತ್ತಿಲ್ಲ. ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಈ ಸಾರಿ ಅವಿರೋಧ ಆಯ್ಕೆ ನಡೆಯಲಿ ಎನ್ನುವ ಭಾವನೆಯನ್ನು ಆಡಳಿತ ಮತ್ತು ಪ್ರತಿಪಕ್ಷಗಳು ತಾಳಿದಂತಿದೆ.
ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಪಾಲಿನ ಇಬ್ಬರು ಅಭ್ಯರ್ಥಿಗಳನ್ನು (ಬಿಕೆ ಹರಿಪ್ರಸಾದ್, ನಜೀರ್ ಅಹ್ಮದ್ ) ಅಧಿಕೃತವಾಗಿ ಘೋಷಣೆ ಮಾಡಿದೆ. ಜೆಡಿಎಸ್ ಸಹ ಒಬ್ಬ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆ. ಅದರಂತೆ ಬಿಜೆಪಿ ಸಹ ತನ್ನ ಶಾಸಕರ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಅಭ್ಯರ್ಥಿಗಳ ಸ್ಪರ್ಧೆ ಪ್ರಕಟಿಸಿದರೆ ಮೇಲ್ಮನೆಗೆ ಚುನಾವಣೆ ಇಲ್ಲದೇ ಸರ್ವಾನುಮತದ ಆಯ್ಕೆಯಾಗುತ್ತದೆ.