ಬೆಂಗಳೂರು : ಸದನದಲ್ಲಿ ಉಪಸಭಾಪತಿ ಧರ್ಮೇಗೌಡರ ಮೇಲೆ ದೈಹಿಕ ಹಲ್ಲೆ ನಡೆದಿದ್ದು, ಅವರನ್ನು ರಕ್ಷಣೆ ಮಾಡುವಲ್ಲಿ ಮಾರ್ಷಲ್ಗಳು ವಿಫಲರಾಗಿದ್ದಾರೆ. ಈ ಕುರಿತು ತನಿಖೆ ಆಗಬೇಕು ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವವರಲ್ಲಿ ನಾನು ಮೊದಲಿಗಳಾಗಿದ್ದೇನೆ. ನಿಯಮದ ಪ್ರಕಾರ ಹಾವು-ಏಣಿ ಆಟ ನಡೆಯುತ್ತಲೇ ಇತ್ತು. ನಾವು ನಿಯಮದ ಪುಸ್ತಕವನ್ನು ಅಧ್ಯಯನ ಮಾಡಿ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ. ನಿಯಮಾವಳಿ ಪ್ರಕಾರ ಉಪಸಭಾಪತಿಗಳು ಸಭಾಪತಿ ಸ್ಥಾನದ ಮೇಲೆ ಕುಳಿತುಕೊಳ್ಳಬೇಕು. ಅದರ ಪ್ರಕಾರ ಇಂದು ಉಪಸಭಾಪತಿಗಳು ಪೀಠದ ಮೇಲೆ ಕುಳಿತಿದ್ದು ಸಿಂಧುವಾಗಿದೆ ಎಂದರು.
ಇದನ್ನೂ ಓದಿ : ವಿಧಾನ ಪರಿಷತ್ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ
ಉಪಸಭಾಪತಿಗಳು ಸದನವನ್ನು ಆರಂಭಿಸಿದ್ದರು. ಆದರೆ, ಕಾಂಗ್ರೆಸ್ ಸದಸ್ಯ ನಜೀರ್ ಬಂದು ಸದನದ ಬಾಗಿಲನ್ನು ಒದ್ದರು, ನಮಗೆ ಇದು ಮಾನಸಿಕವಾಗಿ ಘಾಸಿಯಾಗಿದೆ. ಕೆಂಪೇಗೌಡರು ಇಂತಹ ಭವ್ಯ ನಗರ ಕೊಟ್ಟರು, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದರೂ, ಒಂದು ದಿನವೂ ಇಲ್ಲಿ ಕುಳಿತುಕೊಳ್ಳಲಿಲ್ಲ. ಆದರೆ ಕೆಟ್ಟ ಘಟನೆಗೆ ಇಂದು ವಿಧಾನಪರಿಚತ್ ಸಾಕ್ಷಿಯಾಯಿತು ಎಂದು ತೇಜಸ್ವಿನಿ ಗೌಡ ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮೇಲ್ಮನೆ ಘಟನೆ ಪ್ರಜಾಪ್ರಭುತ್ವದಲ್ಲಿ ಒಂದು ಕಳಂಕ : ಸಚಿವ ಆರ್.ಅಶೋಕ್
ವಿಧಾನಸೌಧದ ಆಸ್ತಿ-ಪಾಸ್ತಿ ಹಾನಿಗೊಳಿಸಲು ಯತ್ನ ನಡೆಸಲಾಯಿತು. ಉಪ ಸಭಾಪತಿಗಳಿಗೆ ರಕ್ಷಣೆ ಕೊಡಲಿಲ್ಲ, ರಾಜ್ಯಪಾಲರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಾರ್ಷಲ್ಗಳ ಕರ್ತವ್ಯವೇನು..? ಸಭಾಪತಿ ಮತ್ತು ಉಪಸಭಾಪತಿಗಳಿಗೆ ರಕ್ಷಣೆ ನೀಡಬೇಕು, ಪೀಠದ ರಕ್ಷಣೆ ಮಾಡಬೇಕು. ಆದರೆ, ಅದ್ಯಾವುದೂ ಆಗಲಿಲ್ಲ, ಇದರ ಬಗ್ಗೆ ತನಿಖೆಯಾಗಬೇಕು. ಖಾಲಿ ಪೀಠದಲ್ಲಿ ಸಭಾಪತಿ-ಉಪಸಭಾಪತಿ ಇಲ್ಲದ ವೇಳೆ ಪ್ಯಾನಲ್ನಲ್ಲಿರುವ ಇತರರು ಹಿರಿತನದ ಆಧಾರದಲ್ಲಿ ನೇಮಕಗೊಂಡಿರುವವರು ಮಾತ್ರ ಆಸೀನರಾಬೇಕು. ಆದರೆ, ಬೇರೆಯವರನ್ನು ಕೂರಿಸಲಾಯಿತು. ಉಪಸಭಾಪತಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಎಳೆದು ಹಾಕಿದ್ದಾರೆ. ಅವರು ವೈದ್ಯಕೀಯ ತಪಾಸಣೆಗೆ ಒಳಪಡಬೇಕಿದೆ ಎಂದರು.
ಇದನ್ನೂ ಓದಿ : ಇದನ್ನೂ ಓದಿ : ಪರಿಷತ್ ಗದ್ದಲಕ್ಕೆ ಮೂರು ಪಕ್ಷದ ಸದಸ್ಯರು ಜವಾಬ್ದಾರಿ: ಶ್ರೀಕಂಠೇಗೌಡ
ಪೀಠದಲ್ಲಿ ಕುಳಿತುಕೊಳ್ಳುವ ನಿಮ್ಮ ಮೇಲೆ ವಿಶ್ವಾಸ ಇಲ್ಲ ಎಂದ ಮೇಲೆ ಕಲಾಪವನ್ನು ಯಾರು ನಡೆಸಬೇಕು, ಉಪಸಭಾಪತಿಗಳು ನಡೆಸಬೇಕು. ಆದರೆ ಅಲ್ಲಿ ಬೇರೆಯವರು ಬಂದು ಕುಳಿತರೂ, ಪೀಠಕ್ಕೆ ರಕ್ಷಣೆ ಕೊಡಲು ಮಾರ್ಷಲ್ಗಳು ವಿಫಲರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಇದನ್ನೆಲ್ಲ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯೆ ಕಿಡಿಕಾರಿದರು.