ಬೆಂಗಳೂರು: ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿ.ಯು.ಸಿ ಪರೀಕ್ಷಾ ವ್ಯವಸ್ಥೆಯನ್ನು ಶಿಕ್ಷಣ ಸಚಿವ.ಎಸ್.ಸುರೇಶ್ ಕುಮಾರ್ ಭೇಟಿ ನೀಡಿ ಪರಾಮರ್ಶಿಸಿದರು.
ನಗರದ ಮಲ್ಲೇಶ್ವರಂ 13ನೇ ಕ್ರಾಸ್, 18ನೇ ಕ್ರಾಸ್ ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಎಂ.ಇ.ಎಸ್ ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ ಅವರು ಪರಿಶೀಲಿಸಿದರು. ನಂತರ ಮಾತಾನಾಡಿ, 'ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ಎಲ್ಲೂ ಕೂಡಾ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಲ್ಲಾ ಕಡೆ ಸೂಕ್ತ ಭದ್ರತೆ ಒದಗಿಸಿದ್ದೇವೆ. ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು,' ಎಂದು ತಿಳಿಸಿದರು.
ಇತ್ತ ಉಪನ್ಯಾಸಕರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಉಪನ್ಯಾಸಕರ ಸಂಘದ, ಹಾಗೂ ಎಂಎಲ್ ಸಿ ಶ್ರೀಕಂಠೇಗೌಡರ ಜೊತೆ ಮಾತಾಡಿದ್ದೇನೆ. 15 ಬೇಡಿಕೆಗಳ ಬಗ್ಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಮೌಲ್ಯಮಾಪನಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ. ಉಪನ್ಯಾಸಕರಿಗೂ ಬಹಿಷ್ಕಾರ ಮಾಡೋ ಆಸೆಯಿಲ್ಲ. ಮತ್ತೊಮ್ಮೆ ಅವರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಕೊರೋನಾ ಭೀತಿ: ಇನ್ನು ಎಲ್ಲೆಡೆ ಕೊರೋನಾ ಭೀತಿ ಹೆಚ್ಚಾಗಿದ್ದು, ಶಾಲಾ ವಿದ್ಯಾರ್ಥಿಗಳಲ್ಲಿ ಜ್ವರ, ಶೀತ ಕಂಡು ಬಂದರೆ ವಿದ್ಯಾರ್ಥಿಗೆ ರಜೆ ಕೊಡಲು ಸೂಚನೆ ನೀಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸಲು ಶಾಲೆಗಳಿಗೆ ಸೂಚನೆ ಕೊಟ್ಟಿದ್ದೇವೆ. ಪರೀಕ್ಷೆ ಬರೆಯಲಿರುವ ಮಕ್ಕಳಲ್ಲಿ ಹೀಗೆ ಇದ್ದರೆ, ಔಷಧಗಳನ್ನ ಕೊಂಡಯ್ಯಲು ಅವಕಾಶ ಮಾಡಿಕೊಡಲಾಗುವುದು ಎಂದರು.