ಬೆಂಗಳೂರು: 2013ರಿಂದ 2019ರವರೆಗೆ ಮೇಕೆದಾಟು ಯೋಜನೆ ಸಂಬಂಧ ಡಿಪಿಆರ್ ತಯಾರಿಸಿ ಸಲ್ಲಿಕೆ ಮಾಡಲು ಕಾಂಗ್ರೆಸ್ ಸರ್ಕಾರ ವಿಳಂಬ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ನ ಹೊಣೆಗೇಡಿತನದ ಸ್ಫೋಟಕ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದಿದ್ದ ಕಾರಜೋಳ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮೇಕೆದಾಟು ಯೋಜನೆ ಅನುಷ್ಠಾನ ಸಂಬಂಧ ಕಾಂಗ್ರೆಸ್ನ ವಿಳಂಬ ನೀತಿಯ ಕೆಲ ದಾಖಲಾತಿಗಳನ್ನು ಬಿಡುಗಡೆ ಮಾಡಿದರು. ಆದರೆ, ಅವರು ನೀಡಿದ ದಾಖಲಾತಿಗಳಲ್ಲಿ ಸ್ಫೋಟಕ ಎನಿಸುವ ಯಾವುದೇ ಮಹತ್ವದ ಅಂಶಗಳು ಇರಲಿಲ್ಲ.
5-11-2013 ರಂದು 4ಜಿ ವಿನಾಯಿತಿ ಕೊಡಬೇಕೆಂದು ಕಾವೇರಿ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. 7-4-2014 ಕ್ಕೆ ಸರ್ಕಾರ ಆ ಪ್ರಸ್ತಾವನೆ ತಿರಸ್ಕರಿಸಿ ಟೆಂಡರ್ ಕರೆಯಬೇಕು ಅಂತ ಸರ್ಕಾರ ಹೇಳುತ್ತದೆ. 2018ರ ಡಿಸೆಂಬರ್ನಲ್ಲಿ 4ಜಿ ವಿನಾಯಿತಿ ಕೊಡಿ ಅಂತ ಮತ್ತೆ ಕೇಳಲಾಗುತ್ತದೆ. 2019 ಜನವರಿಯಲ್ಲಿ 4ಜಿ ವಿನಾಯಿತಿಗೆ ಅನುಮತಿ ಕೊಡಲಾಗುತ್ತದೆ. ಇದು ಸಮ್ಮಿಶ್ರ ಸರ್ಕಾರದಲ್ಲಿ ಆಗಿದ್ದು, ಆಗ ಕುಮಾರಸ್ವಾಮಿ ಸಿಎಂ, ಡಿ. ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರು. 2013ರಿಂದ 2014ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡಲಿಲ್ಲ. 2012 ರಿಂದ 18 ರವರೆಗೆ ಕಾಂಗ್ರೆಸ್ ಸರ್ಕಾರ ಇತ್ತು, ಅವರೇ ವಿಳಂಬದ ಜವಾಬ್ದಾರಿ ಹೊರಬೇಕು ಎಂದು ವಾಗ್ದಾಳಿ ನಡೆಸಿದರು.