ಬೆಂಗಳೂರು: "ಆಪರೇಷನ್ ಕಮಲ ಪ್ರಯತ್ನ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಮಾಡ್ತಿದ್ದಾರೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, "ವಾಮಮಾರ್ಗದ ಮೂಲಕ ಹೇಗಾದ್ರೂ ಮಾಡಿ ಸರ್ಕಾರದಲ್ಲಿ ಇರಬೇಕು ಅನ್ನೋದು ಅವರ ಉದ್ದೇಶ. ಬಿಜೆಪಿಯವರು ಈ ದೇಶದ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ. ಜನ ಅವರನ್ನು ತಿರಸ್ಕಾರ ಮಾಡಿ ಸೋಲಿಸಿ ಮನೆಗೆ ಕಳಿಸಿದ್ದಾರೆ. ಅವರು ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಬಿಜೆಪಿಯವರು ವಿರೋಧ ಪಕ್ಷಕ್ಕೆ ಕಳಂಕ. ಇದು ನಾಚಿಕೆಗೇಡಿನ ಸಂಗತಿ. ವಿರೋಧ ಪಕ್ಷಕ್ಕೆ ನಾಯಕ ಇಲ್ಲ. ಮೇಲ್ಮನೆ ನಾಯಕನೂ ಇಲ್ಲ. 4 ವರ್ಷ ಸರ್ಕಾರ ಮಾಡಿದ್ದರೂ ಜನ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ" ಎಂದು ಕಿಡಿಕಾರಿದರು.
"ಇದನ್ನು ಅರಿತುಕೊಂಡು ಈಗಲಾದರೂ ಸರಿಯಾಗಿ ಕೆಲಸ ಮಾಡೋದು ಬಿಟ್ಟು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ಏನೇ ಪ್ರಯತ್ನ ಮಾಡಲಿ. ಸರ್ಕಾರ ಸುಭದ್ರವಾಗಿರಲಿದೆ. ಬಿಜೆಪಿ ಅವರ ಬಳಿ ಬೇಕಾದಷ್ಟು ಹಣ ಇದೆ. ಎಷ್ಟು ಕೋಟಿ ಬೇಕಾದರೂ ಅವರಿಗೆ ಕೊಡೋಕೆ ಹಣ ಇದೆ. 100 ಕೋಟಿ, 1,000 ಕೋಟಿ ಬೇಕಾದರೂ ಖರ್ಚು ಮಾಡ್ತಾರೆ. ದುಡ್ಡಿನ ಅಹಂ, ಅಧಿಕಾರದ ಅಹಂ ಇದೆ" ಎಂದು ವಾಗ್ದಾಳಿ ನಡೆಸಿದರು.
"ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ನಮ್ಮ ಜೇಬಿನಲ್ಲಿ ಇದೆ. ಎಲ್ಲರನ್ನೂ ಏನ್ ಬೇಕಾದರೂ ಮಾಡಬಹುದು ಅಂತ ತಿಳಿದುಕೊಂಡಿದ್ದಾರೆ. ಪಂಚರಾಜ್ಯ ಚುನಾವಣೆ ಆಗಲಿ. ಆಗ ಇನ್ನೂ ಹೆಚ್ಚು ಮಾತಾಡೋಣ. ಜನ ಬಿಜೆಪಿ, ಮೋದಿ ಆಡಳಿತ ನೋಡಿ ಆಯ್ತು. ಜನರ ಬದುಕಲ್ಲಿ ಏನು ಬದಲಾವಣೆ ಆಗಿದೆ ಅಂತ ಜನರಿಗೆ ಗೊತ್ತಾಗಿದೆ. ಜನರೇ ಸರಿಯಾದ ಪಾಠ ಕಲಿಸುತ್ತಾರೆ" ಎಂದರು.
"ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಜೋಶಿ ಅವರು ಮೊದಲು ಅವರ ಮನೆ ಸರಿ ಮಾಡಿಕೊಳ್ಳಲಿ ಸಾಕು. ಜೋಶಿ ಅವರು ಇದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ. ಈಗ ಲೋಕಸಭೆ ಚುನಾವಣೆ ಬರ್ತಿದೆ ಅದರ ಬಗ್ಗೆ ಗಮನ ಕೊಡಲಿ. ಮಾಧ್ಯಮಗಳ ಮುಂದೆ ಏನೋ ಹೇಳಿ ಹೋದರೆ ಪ್ರಯೋಜನ ಇಲ್ಲ. ಅವರ ಪಕ್ಷದಲ್ಲಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನು ಮಾಡೋಕೆ ಜೋಶಿ ಅವರಿಗೆ ಯೋಗ್ಯತೆ ಇಲ್ಲ" ಎಂದು ಟೀಕಿಸಿದರು.
ಇದನ್ನೂ ಓದಿ: ನಿಗಮ ಮಂಡಳಿ ಪರೀಕ್ಷಾ ಅಕ್ರಮದ ನೈತಿಕ ಜವಾಬ್ದಾರಿ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಅಶ್ವತ್ಥನಾರಾಯಣ್ ಆಗ್ರಹ