ಬೆಂಗಳೂರು : ವಿವೇಕಾನಂದರ ಬಗೆಗಿನ ತಿಳುವಳಿಕೆ ಪ್ರಬಂಧಕ್ಕೆ ಮಾತ್ರ ಸೀಮಿತವಾಗದೇ, ಆತ್ಮನಿರ್ಭರ ಭಾರತದಡಿ ಸ್ವದೇಶಿ ಹಾಗೂ ಸ್ವಯಂ ಕೆಲಸಕ್ಕೆ ಮುಂದಾಗಬೇಕು. ಭಾರತೀಯ ಜೀವನ ಪದ್ಧತಿ, ಸ್ವಾವಲಂಬಿ ಭಾರತದ ಬಗ್ಗೆ ನೀಡಿದ ಪ್ರೇರಣೆಯಂತೆ ಯುವಜನತೆ ಸಾಗಬೇಕು.
ದೇಶಕ್ಕೆ ನಾವು ಏನನ್ನು ಕೊಡಬೇಕು ಎಂಬ ಚಿಂತನೆ ನಮ್ಮಲ್ಲಿ ಹುಟ್ಟಿದರೆ ನಮ್ಮ ಯೋಚನಾಲಹರಿ ಬದಲಾಗುತ್ತದೆ. ವಿವೇಕಾನಂದರ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಖಂಡಿತವಾಗಿ ಸಿಗಲಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ದಿ ಮಿಥಿಕ್ ಸೊಸೈಟಿಯಲ್ಲಿ ಸಮರ್ಥ ಭಾರತದ ಸಹಯೋಗದಲ್ಲಿ ಏರ್ಪಡಿಸಿದ್ದ 'ಉತ್ತಮನಾಗು ಉಪಕಾರಿಯಾಗು' ಅಭಿಯಾನದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೆಲ ಯುವಕರು ಉಗ್ರ ಚಟುವಟಿಕೆ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇಂತಹ ಕೆಟ್ಟ ಕೆಲಸಕ್ಕೆ ಮುಖಮಾಡದೇ ಒಳ್ಳೆಯ ಕೆಲಸ ಮಾಡಲು ಪ್ರಾರಂಭ ಮಾಡಲು ಯೋಚಿಸಬೇಕು. ಮೊದಲು ತಾನು ಉತ್ತಮನಾಗಿ ನಂತರ ಉಪಕಾರಿಯಾಗಬೇಕು ಎಂಬ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇನ್ನು, ಈ ವೇಳೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ಸ್ವಾಮಿ ವಿವೇಕಾನಂದರು ಧರ್ಮ ಪ್ರಚಾರ ಹಾಗೂ ಜನರಿಗೆ ಜಾಗೃತಿ ಮೂಡಿಸಿದಲ್ಲದೆ, ದೇಶಾದ್ಯಂತ ಎರಡು ವರ್ಷ ಕಾಲ ಸಂಚರಿಸಿ ದೇಶದ ಎಲ್ಲ ರಾಜರನ್ನು ಒಗ್ಗೂಡಿಸಿ ಬ್ರಿಟಿಷರನ್ನು ದೇಶದಿಂದ ಓಡಿಸಲು ನರೇಂದ್ರ ಮಂಡಲ ರಚಿಸಲು ಪ್ರಯತ್ನಿಸಿದ್ದರು ಎಂದರು.
ವಿವೇಕಾನಂದರು ದೇಶಾದ್ಯಂತ ಸಂಚರಿಸಿ ಆರ್ಥಿಕ, ಸಾಮಾಜಿಕ ಸ್ಥಿತಿ ತಿಳಿದರು. ರಾಜರು ಸೇರಿ ಸಾಮಾನ್ಯರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ಅರಿತು ಜನರಿಗೆ ಜಾಗೃತಿ ಮೂಡಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ರಾಜರುಗಳನ್ನು ಒಟ್ಟು ಸೇರಿಸುವ ಕೆಲಸ ಮಾಡಿದರು ಎಂದು ತಿಳಿಸಿದರು.
ಅಷ್ಟೇ ಅಲ್ಲ, ವಿವೇಕಾನಂದರ ಮಾರ್ಗದಲ್ಲಿಯೇ ನಡೆದ ಸರ್ ಎಂ. ವಿಶ್ವೇಶ್ವರಯ್ಯ ಭಾರತದ ಇಂಜಿನಿಯರಿಂಗ್ ಕ್ಷೇತ್ರವನ್ನು ವಿಶ್ವಕ್ಕೆ ಪರಿಚಯಿಸಿದರು ಎಂದರು.