ಬೆಂಗಳೂರು: ಸುದೀರ್ಘ ಕಾಲ ನಡೆದ ಬಜೆಟ್ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ. ಕೊರೊನಾ ಭೀತಿ ಹಿನ್ನೆಲೆ ಮೊಟಕುಗೊಂಡ ಬಜೆಟ್ ಅಧಿವೇಶನ ಒಟ್ಟು 21 ದಿನಗಳ ಕಾಲ ನಡೆಯಿತು. ಮಾರ್ಚ್ ಅಂತ್ಯದವರೆಗೆ ನಡೆಯಬೇಕಾಗಿದ್ದ ಅಧಿವೇಶನಕ್ಕೆ ಕೊರೊನಾ ಭೀತಿ ಬ್ರೇಕ್ ಹಾಕಿತು. ಎಲ್ಲಾ ಶಾಸಕರು ಕೊರೊನಾ ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ ಹಿನ್ನೆಲೆ ಸರ್ಕಾರ ಅಧಿವೇಶನವನ್ನು ಇಂದಿಗೆ ಕೊನೆಗೊಳಿಸಲು ತೀರ್ಮಾನಿಸಿತು.
21 ದಿನಗಳ ಕಾಲ ನಡೆದ ವಿಧಾನಸಭೆ ಅಧಿವೇಶನದ ಸಂಕ್ಷಿಪ್ತ ವರದಿ ಓದಿದ ಸ್ಪೀಕರ್, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ 25 ಸದಸ್ಯರು ಚರ್ಚೆ ಮಾಡಿದ್ದಾರೆ. ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ 47 ಸದಸ್ಯರು ಭಾಗಿಯಾಗಿದ್ದಾರೆ. ಒಟ್ಟು 27 ಗಂಟೆ 46 ನಿಮಿಷಗಳ ಕಾಲ ಸಂವಿಧಾನದ ಮೇಲೆ ಚರ್ಚೆ ನಡೆದಿದೆ ಎಂದು ತಿಳಿಸಿದರು.
ವಿಧಾನಮಂಡಲ 12 ಸಮಿತಿಗಳ ವರದಿಗಳ ಮಂಡನೆ ಮಾಡಲಾಯಿತು. ಇನ್ನು ಸದನದಲ್ಲಿ 26 ವಿಧೇಯಕಗಳ ಮಂಡನೆ ಮಾಡಲಾಗಿದೆ. ಈ ಪೈಕಿ 25 ವಿಧೇಯಕಗಳಿಗೆ ಅಂಗೀಕಾರ ನೀಡಲಾಗಿದೆ ಎಂದರು.
ವಿಧಾನಸಭೆ ಕಲಾಪದಲ್ಲಿ 3,612 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಲಾಗಿದ್ದು, 2,323 ಲಿಖಿತ ರೂಪದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
ಶಾಸಕರಿಗೆ ಸ್ಪೀಕರ್ ಕಿವಿ ಮಾತು:
ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್, ಇದೇ ವೇಳೆ ಶಾಸಕರಿಗೆ ಕೊರೊನಾ ಸಂಬಂಧ ಕಿವಿಮಾತು ಹೇಳಿದರು. ತಮ್ಮ ಕ್ಷೇತ್ರಗಳಿಗೆ ಹೋದ ಬಳಿಕ ಸರ್ಕಾರದ ಸೂಚನೆಗಳನ್ನು ಪಾಲಿಸೋಣ. ನಮಗೆ ನಾವೇ ಸ್ವಯಂ ನಿಯಂತ್ರಣ ಹಾಕಿಕೊಳ್ಳೋಣ. ಜನರು ಕೊರೊನಾ ಸಂಬಂಧ ಆತಂಕದಲ್ಲಿ ಇದ್ದಾರೆ. ಎಲ್ಲರೂ ಮನೆಯಲ್ಲೇ ಇರಿ ಎಂದು ಸರ್ಕಾರ ಹೇಳಿದೆ. ಅದನ್ನು ನಾವೂ ಪಾಲಿಸೋಣ ಎಂದು ಕಿವಿಮಾತು ಹೇಳಿದರು.