ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಇಡೀ ರಾಜ್ಯ ಸ್ತಬ್ಧವಾಗಿದೆ. ಈ ಲಾಕ್ಡೌನ್ನಿಂದ ಕೃಷಿಕರಿಗೆ, ರೈತರಿಗೆ, ಅವರು ಬೆಳೆದ ಬೆಳೆಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಆದರೂ ಅನ್ನದಾತ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೇಡಿಕೆಯಿಲ್ಲ. ಕಾರ್ಮಿಕರ ಕೊರತೆ, ಸಾರಿಗೆ ಸಮಸ್ಯೆಯಿಂದ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ.
ಎಂಎಸ್ಪಿಗಿಂತಲೂ ಕಡಿಮೆ ಬೆಲೆಗೆ ಮಾರಾಟ:
ಕೊರೊನಾ ಲಾಕ್ಡೌನ್ ಹಿನ್ನೆಲೆ ರಾಜ್ಯದ ಪ್ರಮುಖ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ರೈತರು ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಅಂಕಿ, ಅಂಶದ ಪ್ರಕಾರ ರಾಜ್ಯದ ವಿವಿಧ ಮಾರುಕಟ್ಟೆ ಕೇಂದ್ರಗಳಲ್ಲಿ ರೈತರು ತಾವು ಬೆಳೆಯುವ ಉತ್ಪನ್ನಗಳನ್ನು ಅಗ್ಗದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಎಂಎಸ್ಪಿ ಬೆಲೆಗಿಂತ ಸುಮಾರು ಶೇಕಡಾ 15ರಿಂದ 40ರಷ್ಟು ಕಡಿಮೆ ಬೆಲೆಗೆ ವಿವಿಧ ಪ್ರಮುಖ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಏಪ್ರಿಲ್1ರಿಂದ ಏಪ್ರಿಲ್ 11ರ ಅವಧಿಯಲ್ಲಿ ಯಾವ ಉತ್ಪನ್ನಗಳನ್ನು ಎಂಎಸ್ ಪಿಗಿಂತ ಎಷ್ಟು ಕಡಿಮೆ ಬೆಲೆಯಲ್ಲಿ ರೈತರು ಮಾರಾಟ ಮಾಡಿದ್ದಾರೆ ಎಂಬ ವಿವರ ಇಲ್ಲಿದೆ.
ತೊಗರಿ ಬೇಳೆ:
ತೊಗರಿಯ ಎಂಎಸ್ಪಿ ಬೆಲೆ ಕ್ವಿಂಟಾಲ್ಗೆ 5800 ರೂಪಾಯಿ ಇದ್ದರೂ ಕೂಡಾ ಅಥಣಿಯ 4 ಸಾವಿರ ರೂಪಾಯಿ ಮಾರಾಟ ಮಾಡಲಾಗುತ್ತಿದೆ. ಬೀದರ್ ಮಾರುಕಟ್ಟೆಯಲ್ಲಿ 5,256 ರೂಪಾಯಿ, ಬಿಜಾಪುರದಲ್ಲಿ 4,900 ರೂಪಾಯಿ, ಚಿತ್ರದುರ್ಗ 3,010 ರೂಪಾಯಿ, ಕಲಬುರಗಿಯಲ್ಲಿ 5,232 ರೂಪಾಯಿ, ರಾಯಚೂರಿನಲ್ಲಿ 5,200 ರೂಪಾಯಿಗೆ ತೊಗರಿ ಬೇಳೆಯನ್ನು ಮಾರಲಾಗುತ್ತಿದೆ.
ಹೆಸರುಬೇಳೆ:
ಹೆಸರು ಬೇಳೆಯ ಎಂಎಸ್ಪಿ ಬೆಲೆ ಕ್ವಿಂಟಾಲ್ಗೆ 7,050 ರೂಪಾಯಿಯಷ್ಟಿದೆ. ಆದರೆ ಕೆಲವು ಮಾರುಕಟ್ಟೆಗಳಲ್ಲಿ ಎಂಎಸ್ಪಿ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಬಾಲ್ಕಿಯಲ್ಲಿ ಒಂದು ಕ್ವಿಂಟಾಲ್ ಅನ್ನು 6,500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಾವೇರಿಯಲ್ಲಿ 6,500 ರೂಪಾಯಿ, ಹಾಗೂ ರೋಣದಲ್ಲಿ 5,695 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಕಡಲೆ ಬೇಳೆ:
ಕಡಲೆ ಬೇಳೆಯ ಎಂಎಸ್ಪಿ ಬೆಲೆ ಕ್ವಿಂಟಾಲ್ಗೆ 4,620 ರೂಪಾಯಿಯಷ್ಟಿದೆ. ಆದರೂ ಔರಾದ್ನಲ್ಲಿ 4,051 ರೂಪಾಯಿಗೆ, ಬಾಗಲಕೋಟೆಯಲ್ಲಿ 3,909 ರೂಪಾಯಿಗೆ, ಬೀದರ್ನಲ್ಲಿ 3,920 ರೂಪಾಯಿಗೆ, ಬಿಜಾಪುರದಲ್ಲಿ 3,800 ರೂಪಾಯಿಗೆ, ಚಿತ್ರದುರ್ಗದಲ್ಲಿ 3,974 ರೂಪಾಯಿಗೆ, ಧಾರವಾಡದಲ್ಲಿ 4,065 ರೂಪಾಯಿಗೆ, ಕಲಬುರಗಿಯಲ್ಲಿ 3,884 ರೂಪಾಯಿಗೆ, ರಾಯಚೂರಿನಲ್ಲಿ 3050 ರೂಪಾಯಿಗೆ ಕಡಲೆ ಬೇಳೆಯನ್ನು ಮಾರಲಾಗುತ್ತಿದೆ.
ಭತ್ತ:
ರಾಜ್ಯದಲ್ಲಿ ಲಾಕ್ಡೌನ್ ಹಿನ್ನೆಲೆ ಭತ್ತದ ಬೆಲೆಯೂ ಕುಸಿತ ಕಂಡಿದೆ. ಸದ್ಯಕ್ಕೆ ಭತ್ತದ ಎಂಎಸ್ಪಿ ಬೆಲೆ ಕ್ವಿಂಟಾಲ್ಗೆ 1,815 ರೂಪಾಯಿಯಷ್ಟಿದೆ. ಅರಕಲಗೂಡಿನಲ್ಲಿ 1,500 ರೂಪಾಯಿಗೆ, ಧಾರವಾಡದಲ್ಲಿ 1,700 ರೂಪಾಯಿಗೆ, ಗಂಗಾವತಿಯಲ್ಲಿ 1,493 ರೂಪಾಯಿಗೆ ಹಾಗೂ ಮಂಡ್ಯದಲ್ಲಿ 1,650 ರೂಪಾಯಿಗೆ ಭತ್ತವನ್ನು ಮಾರುವಂತಾಗಿದೆ.
ಗೋಧಿ:
ಗೋಧಿಯನ್ನು ರಾಜ್ಯದ ವಿವಿಧ ಎಪಿಎಂಸಿಗಳಲ್ಲಿ ಎಂಎಸ್ಪಿ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಗೋಧಿಯ ಎಂಎಸ್ಪಿ ಬೆಲೆ ಕ್ವಿಂಟಾಲ್ಗೆ 1,840 ರಷ್ಟಿದೆ. ಗೋಕರ್ಣದಲ್ಲಿ 1,300 ರೂಪಾಯಿಗೆ, ಸವದತ್ತಿಯಲ್ಲಿ 1,500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಮೆಕ್ಕೆಜೋಳ:
ರಾಜ್ಯದಲ್ಲಿ ಮೆಕ್ಕೆಜೋಳವನ್ನು ಎಂಎಸ್ಪಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಮೆಕ್ಕೆಜೋಳದ ಎಂಎಸ್ಪಿ ಬೆಲೆ ಕ್ವಿಂಟಾಲ್ಗೆ 1,760 ರೂಪಾಯಿಯಿದೆ. ಆದರೂ ಅರಸೀಕೆರೆಯಲ್ಲಿ 1,400 ರೂಪಾಯಿಗೆ, ಬಾದಾಮಿಯಲ್ಲಿ 1323 ರೂಪಾಯಿಗೆ, ಬಾಗಲಕೋಟೆಯಲ್ಲಿ 1,179 ರೂಪಾಯಿಗೆ, ಬಿಜಾಪುರದಲ್ಲಿ 1,500 ರೂಪಾಯಿಗೆ, ಚಿಕ್ಕಮಗಳೂರಿನಲ್ಲಿ 1,600 ರೂಪಾಯಿಗೆ, ಚಿತ್ರದುರ್ಗ 1,522 ರೂಪಾಯಿಗೆ, ದಾವಣಗೆರೆಯಲ್ಲಿ 1,400 ರೂಪಾಯಿಗೆ, ಧಾರವಾಡದಲ್ಲಿ 1,300 ರೂಪಾಯಿಗೆ ಮೆಕ್ಕೆಜೋಳವನ್ನು ಮಾರಲಾಗುತ್ತಿದೆ.
ರಾಗಿ:
ರಾಜ್ಯದಲ್ಲಿ ಲಾಕ್ಡೌನ್ ಎಫೆಕ್ಟ್ ರಾಗಿ ಬೆಲೆ ಮೇಲೂ ಬಿದ್ದಿದೆ. ರಾಗಿಯ ಎಂಎಸ್ಪಿ ಬೆಲೆ ಕ್ವಿಂಟಾಲ್ಗೆ 3,150 ರೂಪಾಯಿಯಿದ್ದು, ವಿವಿಧ ಎಪಿಎಂಸಿಗಳಲ್ಲಿ ಎಂಎಸ್ಪಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅರಕಲಗೂಡಿನಲ್ಲಿ 2,000 ರೂಪಾಯಿಗೆ, ಬಂಗಾರಪೇಟೆಯಲ್ಲಿ 2,650 ರೂಪಾಯಿಗೆ, ದಾವಣಗೆರೆಯಲ್ಲಿ 2,200 ರೂಪಾಯಿಗೆ, ಹಾವೇರಿಯಲ್ಲಿ 2,500 ರೂಪಾಯಿಗೆ, ಮೈಸೂರಿನಲ್ಲಿ 2,346 ರೂಪಾಯಿಗೆ, ಶಿವಮೊಗ್ಗದಲ್ಲಿ 2,950 ರೂಪಾಯಿಗೆ ರಾಗಿಯನ್ನು ಮಾರಾಟ ಮಾಡಲಾಗುತ್ತಿದೆ.