ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದಲ್ಲಿ ಲೈಫ್ ಸೈನ್ಸ್ ಪಾರ್ಕ್ಗೆ ನಾಳೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೂಮಿ ಪೂಜೆ ನಡೆಯಲಿದ್ದು, ಸುಮಾರು 5,000 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದರು.
ವಿಧಾನಸೌಧದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 52 ಎಕರೆ ಪ್ರದೇಶದಲ್ಲಿ ಬಯೋ ಟೆಕ್ನಾಲಜಿ ಪಾರ್ಕ್ ತಲೆ ಎತ್ತಲಿದೆ. 20 ವರ್ಷಗಳಿಂದ ಈ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಐಟಿ-ಬಿಟಿ ಇಲಾಖೆಯಿಂದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರ ಮಾಡುತ್ತಿದ್ದೇವೆ ಎಂದರು.
20 ವರ್ಷಗಳ ಕನಸಿದು. ಇವತ್ತಿನ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲೂ ಈ ಯೋಜನೆ ಸಾಕಾರ ಮಾಡಲು ಸಾಕಷ್ಟು ಕಾರಣಗಳಿವೆ. ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ಬಯೋ ಪಾರ್ಕ್ಗೆ ಸಾಕಷ್ಟು ಬೇಡಿಕೆಯಿದೆ. ಈ ಪಾರ್ಕ್ನಿಂದ ಸಾಕಷ್ಟು ನಿರೀಕ್ಷೆ ಇದೆ ಎಂದರು.
ಆರ್ಥಿಕ ಏಳಿಗೆ ಮತ್ತು ಗುಣಮಟ್ಟದ ಜೀವನಕ್ಕೆ ಬಯೋ ತಂತ್ರಜ್ಞಾನ ದೊಡ್ಡ ಕೊಡುಗೆ ನೀಡಲಿದೆ. ಕೃಷಿ ಕ್ಷೇತ್ರದ ಜತೆಗೆ ಬಯೋ ಮೆಡಿಸಿನ್ ವಲಯದಲ್ಲೂ ಈ ಪಾರ್ಕ್ ದೊಡ್ಡ ಕೊಡುಗೆ ನೀಡಲಿದೆ. ಖಾಸಗಿ ಕಂಪನಿಗಳ ಜತೆ ರಾಜ್ಯ ಸರ್ಕಾರ ಮಾನ್ಯತೆ ನೀಡಿರುವ 34 ಕಂಪನಿಗಳು ಈ ಪಾರ್ಕ್ನಲ್ಲಿ ಕೆಲಸ ಮಾಡಲಿವೆ. ಅಂದಾಜು 5 ಸಾವಿರ ಕೋಟಿ ರೂ. ಇಲ್ಲಿ ಬಂಡಾಳ ಹೂಡಿಕೆ ಆಗಲಿದೆ. ಸುಮಾರು 50,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರಿಸಿದರು.
ಈ ಪಾರ್ಕ್ನಲ್ಲಿ ಪ್ರಥಮ ಹಂತದ 10 ಲಕ್ಷ ಚದರಡಿ ಪ್ರದೇಶದಲ್ಲಿ ಮೊದಲ ಕಟ್ಟಡ ನಿರ್ಮಾಣವಾಗಲಿದೆ. 2020ಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಸುಮಾರು 150 ಕಂಪನಿಗಳು ಈ ಪಾರ್ಕ್ನಲ್ಲಿ ಕಾರ್ಯಾರಂಭಿಸಲಿದೆ. ಒಟ್ಟು ಜಾಗದ ಪೈಕಿ ಶೇ 60ರಷ್ಟು ಆಫ್ ಬಯೋ ಟೆಕ್ನಾಲಜಿ ಸಂಸ್ಥೆಗೆ ಮೀಸಲಿಡಲಾಗುವುದು. ಉಳಿದ 40% ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾಗಿದೆ. ಭೂಮಿಯನ್ನು 64 ವರ್ಷ ಲೀಸ್ಗೆ ಕೊಡಲಾಗುವುದು ಎಂದು ತಿಳಿಸಿದರು.
'20 ವರ್ಷದ ಕನಸು ನನಸಾಗಿದೆ':
ಇದೇ ವೇಳೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಕಿರಣ್ ಮಜುಂದಾರ್, 20 ವರ್ಷಗಳ ಸತತ ಪ್ರಯತ್ನದ ಬಳಿಕ ಲೈಫ್ ಸೈನ್ಸ್ಪಾರ್ಕ್ ಆರಂಭಗೊಳ್ಳುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.
ಬೆಂಗಳೂರು ನಾವಿನ್ಯತೆಯಲ್ಲಿ ಈಗಲೇ ಮುಂಚೂಣಿಯಲ್ಲಿರುವ ನಗರವಾಗಿದೆ. ಈ ಪಾರ್ಕ್ ಮೂಲಕ ಬಿಟಿ ಕ್ಷೇತ್ರದಲ್ಲಿ ಹಲವು ನಾವಿನ್ಯತೆಗಳು ಹೊರ ಹೊಮ್ಮಲಿದೆ. ಆ ಮೂಲಕ ಬೆಂಗಳೂರು ಐಟಿ ಸಿಟಿ ಖ್ಯಾತಿಯ ಜೊತೆಗೆ ಬಿಟಿ ಸಿಟಿ ಎಂಬ ಹೆಗ್ಗಳಿಕೆಯನ್ನೂ ಪಡೆಯಲಿದೆ ಎಂದು ವಿವರಿಸಿದರು.