ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದ್ದು, ಕಮೀಷನರ್ ಆಗಿ ಅವರಿಗೆ ಎದುರಾದ ಸವಾಲುಗಳು, ಅಪರಾಧ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ 'ಈಟಿವಿ ಭಾರತ'ನೊಂದಿಗೆ ಎಕ್ಸಿಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೆಲವೇ ದಿನಗಳಲ್ಲಿ ಅನಿರೀಕ್ಷಿತವಾಗಿ ಡಿಜೆ ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ತ್ವರಿತಗತಿಯಾಗಿ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ 500 ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದೆವು. ಅನ್ ಲಾಕ್ ಬಳಿಕ ನಗರದಲ್ಲಿ ಅಪರಾಧ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು ಲಾಕ್ ಡೌನ್ ತೆರವಾಗುತ್ತಿದ್ದಂತೆ ಕ್ರೈಂ ಚಟುವಟಿಕೆಗಳು ಚುರುಕುಗೊಂಡಿದ್ದು, ಇದನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.
ರೌಡಿ, ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲು ಕಠಿಣ ಕ್ರಮ..
ಕಳೆದ ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ನಿರಂತರವಾಗಿ ರೌಡಿ ಚಟುವಟಿಕೆಗಳ ಬಗ್ಗೆ ಗಮನ ಹರಿಸುವಂತೆ ಎಲ್ಲಾ ಇನ್ಸ್ಪೆಕ್ಟರ್ಗಳಿಗೆ ತಾಕೀತು ಮಾಡಿದ್ದೇನೆ. ಜೈಲಿನಲ್ಲಿ ಕುಳಿತು ಪರೋಕ್ಷವಾಗಿ ಕುಮ್ಮಕ್ಕು ನೀಡಿದ ವಿಚಾರಣಾಧೀನ ಕೈದಿಗಳ ಬೇರೆ ಜೈಲಿಗೆ ಗಡಿಪಾರು ಮಾಡುವಂತೆ ಪಟ್ಟಿ ತಯಾರಿಸಿ ಬಂಧೀಖಾನೆ ಇಲಾಖೆಗೆ ನೀಡಲಾಗಿದೆ. ನಗರದಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ, ಮನೆಗಳ್ಳತನ ಸೇರಿದಂತೆ ವಿವಿಧ ಕಳ್ಳತನದ ಕೇಸ್ಗಳಿಗೆ ಬ್ರೇಕ್ ಹಾಕಲು ಹೊಯ್ಸಳ ಪೊಲೀಸರ ಗಸ್ತು ವ್ಯವಸ್ಥೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪಂತ್ ಹಂಚಿಕೊಂಡರು.
ಗೋಲ್ಡನ್ ಅವರ್ ಯೋಜನೆ ಜಾರಿಗೆ..
ಬೆಂಗಳೂರು ನಗರದಲ್ಲಿ 10 ಸಾವಿರಕ್ಕಿಂತ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಜನರಿಂದ ಕೋಟ್ಯಂತರ ರೂ. ವಂಚಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಈ ಹಿಂದೆ ಗೃಹ ಸಚಿವರಾಗಿದ್ದ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ 'ಗೋಲ್ಡನ್ ಅವರ್' ಯೋಜನೆ ಜಾರಿಗೆ ತರಲಾಯಿತು. ಇದುವರೆಗೂ ಸೈಬರ್ ಖದೀಮರ ವಂಚಕರ ಪಾಲಾಗುತ್ತಿದ್ದ 50 ಕೋಟಿ ಹಣ ವರ್ಗಾವಣೆ ತಡೆಯಲಾಗಿದೆ.
850ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಮುಂದಿನ ದಿನಗಳಲ್ಲಿ ಪೊಲೀಸ್ ಕಂಟ್ರೋಲ್ ಸಂಖ್ಯೆ 112 ಕರೆ ಮಾಡಿದರೆ ರಾಜ್ಯದ ಎಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಗೋಲ್ಡನ್ ಅವರ್ ಯೋಜನೆ ಜಾರಿಯಾಗುವ ಬಗ್ಗೆ ಖುಷಿಯಾಗಲಿದೆ. 5 ವರ್ಷಕ್ಕಿಂತ ಒಂದೆ ಕಡೆ ಠಾಣೆಗಳಲ್ಲಿ ಬೀಡುಬಿಟ್ಟಿದ್ದ ಕಾನ್ ಸ್ಟೇಬಲ್, ಹೆಡ್ ಕಾನ್ ಸ್ಟೇಬಲ್, ಸೇರಿದಂತೆ 850 ಕ್ಕಿಂತ ಹೆಚ್ಚು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ನಗರದಲ್ಲಿ ಡ್ರಗ್ಸ್ ದಂಧೆ ಹೆಚ್ಚಳವಾಗಿದ್ದು, ದಂಧೆಕೋರರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸವಿವರ ಮಾಹಿತಿಯನ್ನು 'ಈಟಿವಿ ಭಾರತ'ನೊಂದಿಗೆ ಹಂಚಿಕೊಂಡಿದ್ದಾರೆ.