ಬೆಂಗಳೂರು: ಹಾಪ್ ಕಾಮ್ಸ್ ಮಾದರಿಯಲ್ಲಿ ಜನತಾ ಬಜಾರ್ ಅಭಿವೃದ್ಧಿ ಪಡಿಸಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಹಾಗೂ ಬೆಲೆ ಸಿಗುವ ಕಾರ್ಯ ಮಾಡಲಿದ್ದೇವೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಬಜೆಟ್ನಲ್ಲಿ ಜನತಾ ಬಜಾರ್ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಅದನ್ನು ಬಳಸಿ ಅಭಿವೃದ್ಧಿ ಮಾಡುತ್ತೇವೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯ ಫಲಪ್ರದವಾಗಲಿದ್ದು, ರೈತರಿಗೆ ನ್ಯಾಯಯುತ ಬೆಲೆ ಸಿಗಲಿದೆ. ಅಲ್ಲದೆ ಸರ್ಕಾರಕ್ಕೂ ಉತ್ತಮ ಆದಾಯ ಸಿಗಲಿದೆ. ಈ ಮೂಲಕ ರಾಜ್ಯದ ಪ್ರಗತಿಗೆ ಕೊಡುಗೆ ಲಭಿಸಲಿದೆ ಎಂದು ವಿವರಿಸಿದರು.
ಆವರ್ತ ನಿಧಿ ಸಂಗ್ರಹ...
ಈ ವರ್ಷ ಒಟ್ಟು 3 ಸಾವಿರ ಕೋಟಿ ಆವರ್ತ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಇಂದಿನ ಉಪಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇವೆ. ಇನ್ನೆರಡು ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 400-500 ಕೋಟಿ ರೂ. ಅನುದಾನ ಸಿಗುವ ನಿರೀಕ್ಷೆ ಇದೆ. ಸಿಎಂಗೆ ಹೆಚ್ಚಿನ ಅನುದಾನ ಕೇಳಿದ್ದೇವೆ. ಒಟ್ಟಾರೆ ನಮ್ಮ ಗುರಿ ಸಾಧನೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುತ್ತೇವೆ. ಇಂದಿನ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿದ್ದು, 3 ಸಾವಿರ ಕೋಟಿ ಸಂಗ್ರಹ ಗುರಿ ಸಾಧಿಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು.
ಖರೀದಿಯಲ್ಲಿ ಸಾಧನೆ...
ಭತ್ತ ಖರೀದಿ ಚೆನ್ನಾಗಿ ಆಗಿದೆ. ಬಾಕಿ ಉಳಿಸಿಲ್ಲ. 87912 ಮೆಟ್ರಿಕ್ ಟನ್ ಭತ್ತ, 1129 ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿ ಆಗಿದೆ. ಕಳೆದ ವರ್ಷ ಎಮ್ಎಸ್ಪಿ ಆಪರೇಷನ್ ಮಾಡಿದ್ದೇವೆ. ಅದಕ್ಕಿಂತ ಮುಂಚಿತವಾಗಿ ಖರೀದಿಸಿ ಎಲ್ಲಾ ಪಾವತಿ ಬಹುತೇಕ ಮುಗಿಸಿದ್ದೇವೆ. ಎಲ್ಲಾ ಒಟ್ಟು ಸೇರಿಸಿ 1402 ಕೋಟಿ ಮೊತ್ತ ನೀಡಿದ್ದೇವೆ. 27 ಕೋಟಿ ರೈತರು ಫಲಾನುಭವಿಗಳು. ಭತ್ತದ ಬಾಕಿ 27 ಕೋಟಿ ರೂ. ಇತ್ತು. ಎಂದು ಉಪ ಸಮಿತಿ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.
900 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬರಬೇಕು. ತುಂಬಾ ಒತ್ತಡ ಹೇರಿದ್ದರಿಂದ 400-500 ಕೋಟಿ ರೂ. ಬಂದಿದೆ. ಉಳಿದ 900 ಕೋಟಿ ರೂ. ಬರಬೇಕಿದೆ. ಎಲ್ಲಿಯೂ ರೈತರಿಗೆ ಸಮಸ್ಯೆ ಆಗುವ ರೀತಿ ಪ್ರತಿಭಟನೆ ಆಗದ ರೀತಿ ಸಮರ್ಪಕವಾಗಿ ಹಂಚಿಕೆ ಮಾಡಿದ್ದೇವೆ. ರಾಜ್ಯ ಸರಕಾರದ ಯೋಜನೆಗಳಲ್ಲಿ ನಾವು ಮಧ್ಯಪ್ರವೇಶಿಸಿ ಅನುಕೂಲ ಮಾಡಿಕೊಟ್ಟಿದ್ದೇವೆ. ಪ್ರಸಕ್ತ ಬಜೆಟ್ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟಿದ್ದಾರೆ ಎಂದರು.