ಬೆಂಗಳೂರು: ಹೆಚ್ಚಿನ ಲಾಭಾಂಶ ನೀಡುವುದಾಗಿ ಹುಸಿ ಭರವಸೆ ನೀಡಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ್ದ ಆರೋಪದಡಿ ಇಜಾಂಜ್ ಇಂಟರ್ ನ್ಯಾಷನಲ್ ಗ್ರೂಪ್ ಕಂಪನಿ ಪಾಲುದಾರರನ್ನು ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಬಂಧಿಸಿರುವ ಜಾರಿ ನಿರ್ದೇಶಾನಾಲಯ ಅಧಿಕಾರಿಗಳು ನ.19ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಚುರುಕುಗೊಳಿಸಿದ್ದಾರೆ.
ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬಹುದು. ತಮ್ಮ ಕಂಪನಿಯಲ್ಲಿ ಹೆಚ್ಚು ಹಣ ಹೂಡಿದರೆ ಅಧಿಕ ಬಡ್ಡಿ ಹಣ ನೀಡಲಾಗುವುದು ಎಂದು ಜನರಿಗೆ ಆಶ್ವಾಸನೆ ನೀಡಿ 2016 ರಿಂದ ಈವರೆಗೂ ಸುಮಾರು 250 ಕೋಟಿ ರೂಪಾಯಿ ಹಣ ಪಾವತಿಸಿಕೊಂಡಿತ್ತು. ಬಳಿಕ ಅಸಲು-ಬಡ್ಡಿ ಹಣ ನೀಡದೆ ವಂಚಿಸಿತ್ತು. ಈ ಸಂಬಂಧ ವಂಚನೆಗೊಳಗಾದ ನೂರಾರು ಮಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ತನಿಖೆ ನಡೆಸಿ ತಪ್ಪಿತಸ್ಥ ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ತನಿಖೆಯಲ್ಲಿ ನೂರಾರು ಕೋಟಿ ರೂಪಾಯಿ ಹಣ ವಹಿವಾಟು ಅಕ್ರಮ ಎಂದು ಕಂಡುಬಂದಿದ್ದರಿಂದ ಹಾಗೂ ಆರ್ಬಿಐ ಮಾರ್ಗಸೂಚಿ ಉಲ್ಲಂಘಿಸಿದ್ದರಿಂದ ಕಂಪನಿಯ ಪಾಲುದಾರ ಮಿಸ್ಬಾವುದ್ದೀನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ವಿರುದ್ಧ ಪಿಎಂಎಲ್ಎ ಕಾಯ್ದೆಯಡಿ ಬಂಧಿಸಿ ಇಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 2009ರ ಜೋಡಿ ಕೊಲೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರು ಖುಲಾಸೆ