ಬೆಂಗಳೂರು: ವಿಧಾನಸೌಧದಲ್ಲಿ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲನ್ನಪ್ಪಿದ ನಂತರ ಬಿಜೆಪಿಯ ಹಲವು ಮುಖಂಡರು ಸಂಭ್ರಮಿಸಿದ್ದು, ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಪರ್ವ ಆರಂಭಗೊಳ್ಳಲಿದೆ: ಬಿಎಸ್ವೈ
ಇದು ಪ್ರಜಾಪ್ರಭುತ್ವದ ಗೆಲುವಾಗಿದೆ. 14 ತಿಂಗಳ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಬಗ್ಗೆ ಜನ ಬೇಸತ್ತಿದ್ರು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ್ವ ಆರಂಭ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲನ್ನಪ್ಪಿದ ನಂತರ ಮೊದಲ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಜನತೆಗೆ ಭರವಸೆ ವ್ಯಕ್ತಪಡಿಸುತ್ತೇನೆ. ರೈತ ಬರಗಾಲಕ್ಕೆ ಸಿಲುಕಿದ್ದಾನೆ. ರೈತರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಗಮನ ಹರಿಸುತ್ತೇನೆ ಎಂದರು.
ಬಿಜೆಪಿ ಸರ್ಕಾರ ರಚನೆಗೆ ಸೂಕ್ತ ಕಾಲ ಬಂದಿದೆ: ಶೆಟ್ಟರ್
ಪ್ರಜಾತಂತ್ರಕ್ಕೆ ಬಿಜೆಪಿಗೆ ಸಿಕ್ಕ ಜಯ. ಕಳೆದ ವರ್ಷದಿಂದ ಅತಂತ್ರ ಸರ್ಕಾರವಿತ್ತು. 2019ರ ಲೋಕಸಭಾ ಚುನಾವಣೆ ಒಂದು ಮನ್ನಣೆ ತಂದಿತ್ತು. ಜನರಿಂದ ತಿರಸ್ಕರಿಸಿದ್ದ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಕುಮಾರಸ್ವಾಮಿ ಕುರ್ಚಿಗೆ ಅಂಟಿಕೊಂಡು ಕುಳಿತಿದ್ರು. ಪ್ರಜಾಪ್ರಭುತ್ವದ ನಿರ್ಧಾರದ ಪ್ರಕಾರ ರಾಜೀನಾಮೆ ನೀಡಿದ್ದಾರೆ. ನಮ್ಮ ವರಿಷ್ಠರನ್ನ ಕರೆಸಿ, ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ನಮ್ಮ ನಾಯಕರನ್ನ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದರು.
ರಾಜ್ಯಪಾಲರು ಹೇಳಿದ ದಿನ ಬಹುಮತ ಸಾಬೀತುಪಡಿಸುತ್ತೇವೆ: ಅರವಿಂದ ಲಿಂಬಾವಳಿ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಸದನದಲ್ಲಿ ಉತ್ತಮ ಚರ್ಚೆಗಳು ನಡೆದಿವೆ. ಅನಗತ್ಯ ಚರ್ಚೆಗಳು ಕೂಡ ನಡೆದವು. ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ರಾಜ್ಯಪಾಲರು ನಮಗೆ ಅವಕಾಶ ಮಾಡಿಕೊಡುತ್ತಾರೆ. ಇಂದೋ ನಾಳೆಯೋ ಅವರು ಕರೆಯುವ ವಿಶ್ವಾಸವಿದೆ. ಸ್ಪೀಕರ್ ವರದಿ ನೀಡಿದ ಬಳಿಕ ಕರೆಯುತ್ತಾರೆ. ಆಗ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದರು.
ರಾಕ್ಷಸರ ಆಡಳಿತ ಅಂತ್ಯ: ಅಶೋಕ್
ರಾಜ್ಯದಲ್ಲಿ ರಾಕ್ಷಸರ ಆಡಳಿತ ಅಂತ್ಯವಾಗಿದೆ. ಉತ್ತಮವಾದ ಸರ್ಕಾರ, ಆಡಳಿತ ಸದ್ಯದಲ್ಲೇ ಬರಲಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
15 ದಿನಗಳ ಕಾಲ ಬಹುಮತ ಇಲ್ಲದಿದ್ದರೂ ಕುರ್ಚಿಗೆ ಅಂಟಿಕೊಂಡು ಕುಮಾರಸ್ವಾಮಿ ಕುಳಿತಿದ್ದರು. ಇಷ್ಟು ದಿನ ಗ್ರಹಣ ಹಿಡಿದಿದ್ದ ಸರ್ಕಾರ ಪತನವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಯಡಿಯೂರಪ್ಪ ಸರ್ಕಾರ ಬರಲಿದೆ ಎಂದರು.
ರಾಜ್ಯದ ಜನತೆಗೆ ಸಂತೋಷವಾಗಿದೆ: ರೇಣುಕಾಚಾರ್ಯ
ಮೈತ್ರಿ ಸರ್ಕಾರ ಸೋತಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ರಾಜ್ಯದ ಜನತೆಗೆ ತುಂಬಾ ಸಂತೋಷವಾಗಿದೆ ಎಂದು ಶಾಸಕ ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಅತೃಪ್ತ ಶಾಸಕರಿಗೆ ಅಂತಹ ತೊಂದರೆ ಆಗಲ್ಲ: ಮಾಧುಸ್ವಾಮಿ
ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುವುದು ಸನ್ನಿಹಿತವಾಗಿದ್ದು, ಹೊರಗಡೆ ಹೋದ ಶಾಸಕರಿಗೆ ಅಂತಹ ತೊಂದರೆ ಆಗಲ್ಲ ಎಂದು ಬಿಜೆಪಿ ಹಿರಿಯ ನಾಯಕ ಮಾಧುಸ್ವಾಮಿ ಹೇಳಿದ್ದಾರೆ. ಶಾಸನ ಸಭೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ಇದು ಜನತೆ ಸಂದ ಜಯ. ನಮಗೆ ಮತ ನೀಡುವಾಗ ಐದಾರು ಸ್ಥಾನ ಕಡಿಮೆ ಆದ ಕಾರಣ 14 ತಿಂಗಳು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಎಂದು ಜನ ಮನ ನೋಯಿಸಿಕೊಂಡಿದ್ದರು. ಲೋಕ ಸಮರದಲ್ಲಿ ನಮಗೆ ಆಶೀರ್ವಾದ ಮಾಡಿದ್ದರು. ಇದೀಗ ಪ್ರಜಾತಂತ್ರಕ್ಕೆ ಗೆಲುವಾಗಿದೆ ಎಂದರು.
ಅನುಕೂಲ ಸಿಂಧು ರಾಜಕಾರಣಕ್ಕೆ ತೆರೆ: ಡಿವಿಎಸ್
ಇನ್ನೇನಿದ್ದರೂ ಯಡಿಯೂರಪ್ಪನವರ ನೇತೃತ್ವದಲ್ಲಿ ನಿಷ್ಪಕ್ಷಪಾತ ಅಭಿವೃದ್ಧಿಯ ಆಡಳಿತಕ್ಕೆ ನಾಂದಿಯಾಗಲಿದೆ. ನಮ್ಮ ನಾಡಿನ ಅದೃಷ್ಟವೆಂಬಂತೆ ಕೇಂದ್ರ ಮತ್ತು ರಾಜ್ಯದಲ್ಲಿ ಏಕ ಪಕ್ಷದ ಆಡಳಿತ ಬರುತ್ತಿದೆ. ಅದೇ ನಮ್ಮ ರಾಜ್ಯದ ಬಹುಮುಖ ಏಳಿಗೆಗೆ ರಹದಾರಿಯಾಗಲಿದೆ ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
ಕೋಜಾ ಸರ್ಕಾರ ಖತಂ: ಅನಂತಕುಮಾರ್ ಹೆಗಡೆ
ಮೈತ್ರಿ ಸರ್ಕಾರ ವಿರುದ್ಧ ಟೀಕಾಸ್ತ್ರಗಳನ್ನೇ ಬಿಡುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ, ಮಂಗಳವಾರ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾದ ಹಿನ್ನೆಲೆ ಕೋಜಾ ಸರ್ಕಾರ ಖತಂ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.