ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ನಗರದ ಪ್ರಸಿದ್ಧ ಇಸ್ಕಾನ್ ದೇವಾಲಯ ನಾಳೆಯಿಂದ (ಮಾ. 18) ಬರುವ ಭಕ್ತರಿಗೆ ನಿರ್ಬಂಧ ಹೇರಿದೆ. ಮುಂದಿನ ಸೂಚನೆವರೆಗೆ ಭಕ್ತರು ಇದನ್ನು ಪಾಲಿಸುವಂತೆ ಮನವಿ ಮಾಡಿದೆ.

ನಗರದ ರಾಜಾಜಿನಗರದ ಇಸ್ಕಾನ್ ದೇವಾಲಯಕ್ಕೆ ವಿದೇಶಿಗರು ಒಳಗೊಂಡಂತೆ ನೂರಾರು ಭಕ್ತರು ನಿತ್ಯ ದರ್ಶನಕ್ಕೆ ಆಗಮಿಸುತ್ತಾರೆ. ಜನರ ಸುರಕ್ಷತೆ ದೃಷ್ಟಿಯಿಂದ ಕೋವಿಡ್-19 ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಕನಕಪುರದ ವೈಕುಂಟ ಬೆಟ್ಟ ದೇವಸ್ಥಾನ ಕೂಡಾ ಮುಚ್ಚಲಾಗಿದೆ.
ಆದರೆ, ಮೊದಲೇ ಪೂಜೆಗೆ ರಶೀದಿ ಪಡೆದ ಭಕ್ತರ ಪೂಜೆ ನೆರವೇರಿಸಲು ನಿರ್ಧರಿಸಿದ್ದು, ಕಡಿಮೆ ಸಂಖ್ಯೆಯಲ್ಲಿ ಭಕ್ತರಿಗೆ ಒಳಗಡೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಶೇ. 98ರಷ್ಟು ಭಕ್ತರಿಗೆ ನಿಷೇಧವಿದೆ ಎಂದು ತಿಳಿಸಲಾಗಿದೆ.