ಬೆಂಗಳೂರು: ಗೃಹ ಸಚಿವಾಲಯದ ವೈಫಲ್ಯವೇ ನಗರದಲ್ಲಿ ಗಲಭೆ ಉಂಟಾಗಲು ಕಾರಣ. ಇದನ್ನು ಮುಚ್ಚಿಕೊಳ್ಳಲು ನಮ್ಮ ಬಿಬಿಎಂಪಿ ಸದಸ್ಯರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
![Congress party tweet](https://etvbharatimages.akamaized.net/etvbharat/prod-images/kn-bng-02-congress-tweet-script-7208077_16082020131800_1608f_1597564080_244.jpg)
ಟ್ವೀಟ್ ನಲ್ಲಿ ಹೀಗೆ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ, ಕೆ. ಜಿ ಹಳ್ಳಿ ಮತ್ತು ಡಿ. ಜೆ ಹಳ್ಳಿ ಗಲಭೆ ತಡೆಯುವಲ್ಲಿ ಗೃಹ ಸಚಿವಾಲಯ ವಿಫಲವಾಗಿದೆ. ತಮ್ಮ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ನ ಬಿಬಿಎಂಪಿ ಸದಸ್ಯರಿಗೆ ನೋಟಿಸ್ ನೀಡಿ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಅದನ್ನು ಸಹಿಸಿ ಸುಮ್ಮನೆ ಕೂರುವುದಿಲ್ಲ. ಇಡೀ ಘಟನೆ ಬಿಜೆಪಿಯ ಷಡ್ಯಂತ್ರದ ಫಲ. ಜನಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದ ರಾಜ್ಯ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳನ್ನು ಟೀಕಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
![Congress party tweet](https://etvbharatimages.akamaized.net/etvbharat/prod-images/kn-bng-02-congress-tweet-script-7208077_16082020131800_1608f_1597564080_865.jpg)
ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ನೀಡಲು ವಿಫಲರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ.
![Congress party tweet](https://etvbharatimages.akamaized.net/etvbharat/prod-images/kn-bng-02-congress-tweet-script-7208077_16082020131800_1608f_1597564080_320.jpg)
ಭಾಷಣ ಶೂರರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ನಾಯಕರು ಕಣ್ಣಿದ್ದೂ ಕುರುಡರಾಗಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಕ್ಷರಶಃ ನಿರಾಸಕ್ತಿ ತೋರುತ್ತಿದ್ದಾರೆ. ಇನ್ನು ಕೋಮು ಹಿಂಸೆ ಪ್ರಚೋದನೆಯಲ್ಲಿ ಮಾತ್ರ ಅತಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರಿಂದ ಯಾವುದೇ ಕಾರಣಕ್ಕೂ ಸಹ ಜನಪರ ಆಡಳಿತ ಸಾಧ್ಯವಿಲ್ಲ ಎಂದು ಪಕ್ಷ ಹೇಳಿದೆ.
![Congress party tweet](https://etvbharatimages.akamaized.net/etvbharat/prod-images/kn-bng-02-congress-tweet-script-7208077_16082020131800_1608f_1597564080_541.jpg)
ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಮೂವರು ನಿವೃತ್ತ ಗೃಹ ಸಚಿವರ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸುತ್ತಿರುವ ಕೈ ನಾಯಕರು ಪರ್ಯಾಯವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸರ್ಕಾರ ಕಣ್ಮುಚ್ಚಿ ಕೂತಿದೆ. ಕೊರೊನಾ ಸೋಂಕಿತರ ಮನೆ ಕಂಟೈನ್ಮೆಂಟ್ ಮಾಡುವಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಬೆಂಗಳೂರಿನಲ್ಲಿ 34,000 ಕಂಟೈನ್ಮೆಂಟ್ ವಲಯ ನಿರ್ಮಿಸಲಾಗಿದ್ದು, ಪ್ರತಿ ವಲಯಕ್ಕೆ ದಿನಕ್ಕೆ 70,000 ರೂ. ಬಾಡಿಗೆ ನಿಗದಿಪಡಿಸಿ 14 ದಿನಗಳಿಗೆ 8 ಲಕ್ಷ ರೂ. ವರೆಗೆ ಬಿಲ್ ಮಾಡಲಾಗುತ್ತಿದೆ. ಪಾಲಿಕೆಯ ಈ ಹಗಲು ದರೋಡೆಗೆ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.