ಬೆಂಗಳೂರು : ವಿಜಯನಗರ ಜಿಲ್ಲೆಯ ಬಿಳಿಕಲ್ಲು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸ್ಥಾಪಿಸಿರುವ 'ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನ'ದಲ್ಲಿ(highcourt on Atal Bihari Vajapayee Zoological Park) ಮನರಂಜನೆ ಅಥವಾ ವಿನೋದ ಚಟುವಟಿಕೆಗಳಿಗೆ ಅನುಮತಿಸಬಾರದು ಎಂದು ಹೈಕೋರ್ಟ್ ಸೂಚಿಸಿದೆ.
ಉದ್ಯಾನವನ್ನು ಬಳ್ಳಾರಿಯಿಂದ ಹೊಸಪೇಟೆಗೆ ಸ್ಥಳಾಂತರಿಸುವುದನ್ನು ಹಾಗೂ ಅಗತ್ಯ ಪರವಾನಿಗೆಗಳನ್ನು ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಬಿಳಿಕಲ್ಲು ಸಂರಕ್ಷಿತ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಮಾಡುವುದನ್ನು ಆಕ್ಷೇಪಿಸಿ ಪರಿಸರ ಹೋರಾಟಗಾರ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಉದ್ಯಾನ ನಿರ್ಮಾಣಕ್ಕೆ ಅಗತ್ಯ ಪರವಾನಿಗೆಗಳನ್ನು ಪಡೆದುಕೊಳ್ಳಲಾಗಿದೆ. ಅರಣ್ಯ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಅರಣ್ಯ ಸಂರಕ್ಷಣಾ ಸಮಿತಿ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರದ ನಿಲುವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಬೆಂಬಲಿಸಿದೆ. 20 ಸಾವಿರ ಚ.ಕಿ.ಮೀ.ಗಿಂತ ಕಡಿಮೆ ವಿಸ್ತೀರ್ಣ ಇದ್ದಾಗ ಪರಿಸರ ಪರವಾನಿಗೆ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ವಿವರಿಸಿದರು.
ವಾದ ಆಲಿಸಿದ ಪೀಠ, ಈಗಾಗಲೇ ಉದ್ಯಾನ ಸ್ಥಳಾಂತರಗೊಂಡಿದೆ. ಎಲ್ಲ ಪರವಾನಿಗೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೀಗಾಗಿ, ಕೋರ್ಟ್ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ. ಆದರೆ, ಉದ್ಯಾನದಲ್ಲಿ ಮನರಂಜನೆ ಅಥವಾ ವಿನೋದದ ಚಟುವಟಿಕೆಗಳಿಗೆ ಅನುಮತಿಸಬಾರದು.
ಉದ್ಯಾನಕ್ಕೆ ಅಗತ್ಯವಿರುವ ನಿರ್ಮಾಣ ಕಾಮಗಾರಿ ಮಾತ್ರ ಕೈಗೊಳ್ಳಬೇಕು. ಅಗತ್ಯ ಕಾನೂನು ಪರವಾನಿಗೆ, ಅನುಮೋದನೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿತು.