ಬೆಂಗಳೂರು: ಬದಲಾಗುವ ಕಾಲಘಟ್ಟ ಮತ್ತು ಜೀವನ ಶೈಲಿಯ ಆಧಾರಗಳಲ್ಲಿ ವಿಚ್ಛೇದಿತ ಮಹಿಳೆಗೆ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ಅವಕಾಶವಿದೆ ಎಂದು ಹೈಕೋರ್ಟ್ ತಿಳಿಸಿದೆ. ಹೆಚ್ಚುವರಿ ಜೀವನಾಂಶ ಪರಿಹಾರ ಕೊಡಿಸುವಂತೆ ಕೋರಿ ಶೈಲಜಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಪತಿಗೆ ಸಂಪಾದನೆ ಪ್ರಮಾಣ ಹೆಚ್ಚಳವಾಗಿದೆ ಎಂಬ ಕಾರಣದಿಂದ ಜೀವನಾಂಶ ಹೆಚ್ಚಳ ಮಾಡಬೇಕು ಎಂದು ಕೋರುವ ಹಕ್ಕು ಪತ್ನಿಗೆ ಬರುವುದಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಶೈಲಜಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿಯನ್ನು ಪುರಸ್ಕರಿಸಿದೆ. ಅಲ್ಲದೆ, 2016ರಲ್ಲಿ ಅರ್ಜಿದಾರರಿಗೆ ನೀಡಲಾಗಿದ್ದ 10 ಸಾವಿರ ರು.ಗಳನ್ನು 20 ಸಾವಿರ ರು.ಗಳಿಗೆ ಹೆಚ್ಚಳ ಮಾಡಿ ಎಂದು ಆದೇಶಿಸಿದೆ. ಅಲ್ಲದೆ, ಬದಲಾದ ಸನ್ನಿವೇಶದಲ್ಲಿ ಪತ್ನಿಯಾದವಳು ತನ್ನ ಜೀವನ ಶೈಲಿ ಜೀವನ ವಿಧಾನದ ಕುರಿತು ವಿವರಿಸಲೇ ಬೇಕು ಎಂದಿಲ್ಲ. ಹೀಗಾಗಿ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ವಿಶೇಷ ಹಿಂದೂ ಕಾಯಿದೆಯಡಿ ನ್ಯಾಯಾಲಯಕ್ಕೆ ಅವಕಾಶವಿದೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಶೈಲಜಾ 2010ರ ನವೆಂಬರ್ 12ರಂದು ವಿವಾಹವಾಗಿದ್ದರು. ವಿಶೇಷ ವಿವಾಹ ಕಾಯಿದೆ ಅಡಿಯಲ್ಲಿ ನೋಂದಣಿಯಾಗಿದ್ದರು. ಕೆಲ ಕೌಟುಂಬಿಕ ಗೊಂದಲಗಳಿಂದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಶೈಲಜಾ ವಿವಾಹವನ್ನು ಮರುಸ್ಥಾಪಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಪತಿ ವಿಶ್ವನಾಥ್ ಅವರು ವಿವಾಹ ರದ್ದು ಮಾಡುವಂತೆ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಈ ನಡುವೆ ಶೈಲಜಾ ಜೀವನಾಂಶ ಕೊಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಮಾಸಿಕ ಹತ್ತು ಸಾವಿರ ರು.ಗಳನ್ನು ಪಾವತಿ ಮಾಡುವುದಕ್ಕೆ 2016ರಲ್ಲಿ ಅವಕಾಶ ಮಾಡಿಕೊಟ್ಟಿತ್ತು. ಈ ನಡುವೆ ಜೀವನ ಶೈಲಿ ಬದಲಾವಣೆಯಾಗುತ್ತಿದ್ದು, ಹೆಚ್ಚುವರಿಯಾಗಿ 10 ಸಾವಿರ ಪರಿಹಾರ ಕೊಡಿಸುವಂತೆ ಕೋರಿ ಶೈಲಜಾ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ ಶೈಲಜಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಲೈಂಗಿಕ ಅಶ್ಲೀಲ ಜಾಹೀರಾತಿನಿಂದ ಅಧ್ಯಯನಕ್ಕೆ ತೊಂದರೆ: ಪರಿಹಾರ ಕೋರಿ ಸುಪ್ರೀಂಗೆ ಅರ್ಜಿ