ಬೆಂಗಳೂರು: ಬೆಂಗಳೂರಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಒಮಿಕ್ರೋನ್ ಸೋಂಕು ಪತ್ತೆಯಾದ ವಿಷಯಕ್ಕೆ ಸಂಧಿಸಿದಂತೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಮಿಕ್ರೋನ್ ಎರಡೂ ಪ್ರಕರಣ ರಾಜ್ಯದಲ್ಲಿ ಪತ್ತೆ ಮಾಡಿದ್ದೇವೆ. ದಕ್ಷಿಣ ಆಫ್ರಿಕಾದಿಂದ ಬಂದ 66 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಆಫ್ರಿಕಾದಿಂದ ಬಂದ ಇವರಿಗೆ ಅರ್ಬನ್ PHC ಟೆಸ್ಟ್ ಮಾಡಿಸಿದಾಗ ರೋಗದ ಲಕ್ಷಣ ಇರಲಿಲ್ಲ. ನವೆಂಬರ್. 23ರಂದು ಪರೀಕ್ಷಿಸಿದಾಗ ನೆಗೆಟಿವ್ ಬಂದಿದೆ. ಅವರು ನವೆಂಬರ್ .27ರಂದು ದುಬೈಗೆ ಹೋಗಿದ್ದಾರೆ. ಅವರನ್ನು ಟ್ರೇಸ್ ಮಾಡಿದ್ದು, ಈ ವ್ಯಕ್ತಿ ಸುಮಾರು 247 ಪ್ರಾಥಮಿಕ ಸಂಪರ್ಕಗಳನ್ನು ಹೊಂದಿದ್ದಾರೆ. ಸದ್ಯ ವ್ಯಕ್ತಿ ಪರೀಕ್ಷಾ ವರದಿಯೂ ಪಾಸಿಟಿವ್ ಬಂದಿದ್ದು, ಐಸೋಲೇಟ್ ಆಗಿದ್ದಾರೆ. ಇನ್ನುಳಿದವರಿಗೆ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿದೆ ಎಂದರು.
45 ವರ್ಷದ ವ್ಯಕ್ತಿಗೆ ಟ್ರಾವೆಲ್ ಹಿಸ್ಟರಿ ಇಲ್ಲ
ಸೋಂಕು ತಗುಲಿರುವ ಎರಡನೇ ವ್ಯಕ್ತಿ 45 ವರ್ಷದ ವೈದ್ಯರಾಗಿದ್ದು, ಇವರ ಟ್ರಾವೆಲ್ ಹಿಸ್ಟರಿ ಇಲ್ಲ. ಪ್ರಾಥಮಿಕ ಹಾಗೂ ದ್ವಿತೀಯ ಟೆಸ್ಟ್ ಮಾಡಿದ್ದು, ಇವರ ಸಂಪರ್ಕದಲ್ಲಿದ್ದ ಐದು ಜನರಿಗೆ ಪಾಸಿಟಿವ್ ಬಂದಿದೆ. ವೈದ್ಯ ಮತ್ತು ಐವರನ್ನು ಐಸೋಲೇಟ್ ಮಾಡಿದ್ದೇವೆ. ಸತತವಾಗಿ ಸಂಪರ್ಕದಲ್ಲಿದ್ದೇನೆ. ಯಾರಿಗೂ ಗಂಭೀರ ಸ್ಥಿತಿ ಇಲ್ಲ. ಅನುಮಾನ ಬಂದು ಇಬ್ಬರ ಸ್ಯಾಂಪಲ್ಗಳನ್ನು ಜಿನೋಮಿಕ್ ಸೀಕ್ವೆನ್ಸ್ ಕಳಿಸಲಾಗಿತ್ತು. ಆಗ ಒಮಿಕ್ರೋನ್ ಪತ್ತೆಯಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಈ ಸಂಬಂಧ ದೆಹಲಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ವಿಮಾನ ನಿಲ್ದಾಣದಲ್ಲಿ ಟ್ರ್ಯಾಕ್, ಟ್ರೇಸ್ ಮಾಡುವಂತೆ ಸೂಚನೆ ನೀಡಿದ್ದೇನೆ. ಮಾಸ್ಕ್ ಕಡ್ಡಾಯ, ದೊಡ್ಡ ಸಭೆ, ಸಮಾರಂಭ, ಗುಂಪು ಸೇರುವುದಕ್ಕೆ ಕಡಿವಾಣ ಹಾಕಲಾಗಿದೆ ಎಂದರು.
ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಚಿವರ ಸೂಚನೆ
ಒಮಿಕ್ರೋನ್ ಸೋಂಕು ಯಾವ ರೀತಿ ಹರಡಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಈಗ ಬಂದಿರುವ ಆರು ಪ್ರಕರಣಗಳಲ್ಲಿ ಗಂಭೀರ ಸಮಸ್ಯೆ ಇಲ್ಲ. ಡೆಲ್ಟಾದಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿತ್ತು. ಆದರೆ, ಇಲ್ಲಿ ಕಂಡು ಬಂದಿಲ್ಲ. ಎಲ್ಲರೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಧ್ಯಮ ಮೂಲಕ ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಸಿಎಂ ಬೊಮ್ಮಾಯಿ ಅವರು ಕೇಂದ್ರ ಸಚಿವರ ಜೊತೆ ಮಾತನಾಡಲಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಸಭೆ ಮಾಡಲಿದ್ದಾರೆ. ಯಾರೂ ಆತಂಕ ಪಡೋದು ಬೇಡ. ಅನಗತ್ಯವಾಗಿ ಗೊಂದಲ ಬೇಡ. ಊಹಾ ಪೂಹ ಹರಡೋದು ಬೇಡ. ವ್ಯಕ್ತಿ ವೈಯಕ್ತಿಕ ವಿಚಾರ, ಹೆಸರು, ಯಾವ ಆಸ್ಪತ್ರೆ ಅಂತ ಘೋಷಣೆ ಮಾಡೋದಿಲ್ಲ. ಇಲ್ಲಿವರೆಗೂ ಗಮನಿಸಿರುವಂತೆ 11ದೇಶಗಳಲ್ಲಿ ನೋಟಿಫಿಕೇಷನ್ ಪ್ರಕಾರ ಯಾವುದೇ ಸಮಸ್ಯೆ ಇಲ್ಲ ಎಂದು ಕಂಡು ಬಂದಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಪತ್ತೆಯಾಗಿರುವ ಒಮಿಕ್ರೋನ್ ಸೋಂಕಿತರ ಬಗ್ಗೆ ಮಾಹಿತಿ ನೀಡಿದ ಗೌರವ್ ಗುಪ್ತಾ