ಬೆಂಗಳೂರು : ಸುಮಾರು 8-10 ರಾಜ್ಯಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿವೆ. ಕಳೆದ 15 ದಿನಗಳಲ್ಲಿ ಕೇರಳ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಕೇಸ್ ದಾಖಲಾಗಿವೆ. ಇದರಿಂದಾಗಿ ದೇಶದಲ್ಲಿ 2ನೇ ಕೊರೊನಾ ಅಲೆ ಪ್ರಾರಂಭವಾಗಿರೋದು ಸ್ಪಷ್ಟ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಚಟುವಟಿಕೆಗಳಲ್ಲಿ ನಿರ್ಬಂಧ, ನಿಯಂತ್ರಣ ಹೇರದಿದ್ದರೆ ಅಪಾಯ ತಪ್ಪಿದ್ದಲ್ಲ. ಗುಂಪಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಬೇಕು ಎಂದು ಜನರಿಗೆ ಎಚ್ಚರಿಕೆ ನೀಡಿದರು.
45 ವರ್ಷ ದಾಟಿದವರು ಲಸಿಕೆ ಪಡೆಯಿರಿ. ಪಾಸಿಟಿವಿಟಿ ರೇಟ್ 1.6% ಇದ್ದು, ದೇಶದಲ್ಲಿ ಅತೀ ಹೆಚ್ಚು ಟೆಸ್ಟಿಂಗ್ ನಮ್ಮ ರಾಜ್ಯದಲ್ಲಾಗುತ್ತಿದೆ. 34ಲಕ್ಷಕ್ಕೂ ಹೆಚ್ಚು ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದರು.
ಬೀದರ್, ಧಾರವಾಡ ಮತ್ತು ಗದಗ್ನಲ್ಲಿ ಶೇ.100ಕ್ಕಿಂತ ಹೆಚ್ಚು ಲಸಿಕೆ ಕೊಡಲಾಗಿದೆ. ಬೆಂಗಳೂರು ನಗರ, ಬಾಗಲಕೋಟೆ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶೇ.65ಕ್ಕಿಂತ ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸಿನ್ ವಿತರಣೆಯಾಗಿದೆ ಎಂದು ಮಾಹಿತಿ ನೀಡಿದರು.
2,22,377 ಮುಂಚೂಣಿ ಕಾರ್ಮಿಕರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿತ್ತು. ಎರಡನೆಯ ಹಂತದಲ್ಲಿ ಒಟ್ಟು 3,34,110 ಜನ ಹೆಲ್ತ್ ಕೇರ್ ವರ್ಕರ್ಸ್ಗೆ ವ್ಯಾಕ್ಸಿನ್ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 16,18,150 ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗಿದೆ ಎಂದರು.