ಬೆಂಗಳೂರು: ಜೆ.ಪಿ. ನಗರದಲ್ಲಿರುವ ರುಪೀಕ್ ಫಿನ್ ಟೆಕ್ ಪ್ರೈ.ಲಿಮಿಟೆಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ, 600 ಜನ ಗುತ್ತಿಗೆ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೆಲಸದಿಂದ ವಜಾ ಮಾಡಿದೆ. ಇದರಿಂದ ಆತಂಕಗೊಂಡ ನೌಕರರು, ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಂಡರು.
ಕೊರೊನಾದಿಂದ ಜಗತ್ತೇ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂಬ ಕೇಂದ್ರ ಸರ್ಕಾರದ ಆದೇಶದ ನಡುವೆಯೂ ಈ ಕಂಪನಿ ತನ್ನ ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಕೆಲಸ ಕಳೆದುಕೊಂಡ ನೌಕರರು ಸ್ಥಳೀಯ ಶಾಸಕರು ಹಾಗೂ ಉಪಕಾರ್ಮಿಕ ಆಯುಕ್ತರಿಗೆ ಪತ್ರ ಬರೆದು ಗಮನಕ್ಕೆ ತಂದರೂ, ಕಂಪೆನಿ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಬದಲಾಗಿ ಎರಡು ತಿಂಗಳ ವೇತನ ನೀಡುವುದಾಗಿ ಹೇಳಿದ್ದು, ಇದರಿಂದಾಗಿ ಹೆಚ್ಡಿಕೆ ಅವರನ್ನು ಸಂಪರ್ಕಿಸಿ ತಮ್ಮ ಕಷ್ಟವನ್ನು ಹೇಳಿದ್ದಾರೆ.
ಕಂಪೆನಿ ಎರಡು ತಿಂಗಳ ವೇತನವನ್ನು ನೀಡಿ ಕೆಲಸದಿಂದ ವಜಾ ಮಾಡಿದರೆ, ಮತ್ತೆ ಹೊಸ ಕೆಲಸ ಹುಡುಕುವುದಾದರೂ ಹೇಗೆ ಎಂಬುದು ಅವರನ್ನು ಚಿಂತೆಗೀಡಾಗಿಸಿದೆ. ಈ ಸಂದರ್ಭದಲ್ಲಿ ನಮಗೆ ಯಾರು ಕೆಲಸ ನೀಡುತ್ತಾರೆ ಎಂದು ತಮ್ಮ ಸಂಕಷ್ಟವನ್ನು ಅವರು ಕುಮಾರಸ್ವಾಮಿಯವರ ಗಮನಕ್ಕೆ ತಂದರು.
ಇನ್ನು ಅವರ ಸಮಸ್ಯೆಗೆ ಸ್ಪಂದಿಸಿದ ಹೆಚ್ಡಿಕೆ, ನಿಮ್ಮ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಿಕೊಡುತ್ತೇನೆಂದು ಹೇಳಿದ್ದಾರೆ. ಧೈರ್ಯಕೆಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ ನಿಮ್ಮ ಕೆಲಸಗಳನ್ನು ಪುನಃ ಕೊಡಿಸಲು ಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.