ಇಸ್ರೋ 'ಗಗನಯಾನ'ಕ್ಕೆ ಸಿದ್ಧತೆ: ಮೂವರು ಗಗನಯಾತ್ರಿಗಳು ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ- ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ ವಿವರಣೆ - ಟೆಸ್ಟ್ ವೆಹಿಕಲ್ ಉಡಾವಣೆ
ಇಸ್ರೋ ತನ್ನ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯಲ್ಲಿ ಮೂವರು ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿಲೋ ಮೀಟರ್ ಎತ್ತರದ ಕಕ್ಷೆಗೆ ಸೇರಿಸಲಿದೆ.
![ಇಸ್ರೋ 'ಗಗನಯಾನ'ಕ್ಕೆ ಸಿದ್ಧತೆ: ಮೂವರು ಗಗನಯಾತ್ರಿಗಳು ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ- ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ ವಿವರಣೆ Space expert Girish Linganna spoke to ETV Bharat.](https://etvbharatimages.akamaized.net/etvbharat/prod-images/13-10-2023/1200-675-19758259-thumbnail-16x9-bgk.jpg?imwidth=3840)
![ETV Bharat Karnataka Team author img](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 13, 2023, 6:20 PM IST
|Updated : Oct 13, 2023, 7:26 PM IST
ಬೆಂಗಳೂರು: ಇಸ್ರೋದ ಐತಿಹಾಸಿಕ ಸ್ಪೇಸ್ ಮಿಷನ್ 'ಗಗನಯಾನ'ವು ಮೂವರು ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿಲೋ ಮೀಟರ್ ಎತ್ತರದಲ್ಲಿರುವ ಕಕ್ಷೆ ಸೇರಿಸಲಿದೆ ಎಂದು ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ ತಿಳಿಸಿದರು. ಚಂದ್ರಯಾನ 3 ಮತ್ತು ಆದಿತ್ಯ-ಎಲ್ 1 ಯಶಸ್ವಿಯಾದ ನಂತರದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯನ್ನು ಇಸ್ರೋ ಅಧಿಕೃತವಾಗಿ ಘೋಷಿಸಿ ತಯಾರಿ ಚುರುಕುಗೊಳಿಸಿದೆ. ಈಟಿವಿ ಭಾರತ ಜೊತೆ ಮಾತನಾಡಿದ ಗಿರೀಶ್ ಲಿಂಗಣ್ಣ, ಮೂವರು ಗಗನಯಾತ್ರಿಗಳು ಕುಳಿತುಕೊಳ್ಳಬಲ್ಲ ಬಾಹ್ಯಾಕಾಶ ಕ್ಯಾಪ್ಸೂಲ್ ತಯಾರಿಸುವುದು ಗಗನಯಾನದ ಮೊದಲ ಗುರಿ. ಈ ಕ್ಯಾಪ್ಸೂಲ್ ಅನ್ನು ಭೂಮಿಯಿಂದ 400 ಕಿಲೋ ಮೀಟರ್ ಎತ್ತರದ (ಬಹುತೇಕ 250 ಮೈಲಿ) ಕಕ್ಷೆಗೆ ಸೇರಿಸಬೇಕಿದೆ. ಅಲ್ಲಿ ಗಗನಯಾತ್ರಿಗಳು ಮೂರು ದಿನ ಕಳೆದು ಮರಳಿ ಹಿಂದೂ ಮಹಾಸಾಗರದಲ್ಲಿ ಭೂಸ್ಪರ್ಶ ನಡೆಸಲಿದ್ದಾರೆ ಎಂದು ವಿವರಿಸಿದರು.
ಗಗನಯಾನ ಯೋಜನೆಯ ರಾಕೆಟ್ ಅನ್ನು ದೇಶದ ಬೇರೆ ಬೇರೆ ಕಡೆಗಳಲ್ಲಿ ನಿರ್ಮಿಸಲಾಗುತ್ತಿದೆ. ಆದರೆ, ಬಾಹ್ಯಾಕಾಶ ನೌಕೆಯ ಪ್ರಮುಖ ಬಿಡಿಭಾಗಗಳನ್ನು ಅಹಮದಾಬಾದ್ನಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲಿ ಅಭಿವೃದ್ಧಿಪಡಿಸುವ ಮಹತ್ತರ ಉಪಕರಣಗಳಲ್ಲಿ ಗಗನಯಾತ್ರಿಗಳ ಕ್ಯಾಬಿನ್ ಹಾಗೂ ಸಂವಹನ ವ್ಯವಸ್ಥೆಗಳು ಸೇರಿವೆ. ಕ್ಯಾಬಿನ್ನಲ್ಲಿ ಮೂವರು ಗಗನಯಾತ್ರಿಗಳು ಉಳಿದುಕೊಳ್ಳಲಿದ್ದಾರೆ. ವಿವಿಧ ನಿಯತಾಂಕಗಳನ್ನು ಗಮನಿಸಲು ಸೂಕ್ತ ಬೆಳಕು ಮತ್ತು ಎರಡು ಸ್ಕ್ರೀನ್ಗಳನ್ನು ಅಳವಡಿಸಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ, ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಮಟ್ಟವನ್ನು ಅಳೆಯುವ ಸಲುವಾಗಿ ಕ್ಯಾಮರಾ ಸೆನ್ಸರ್ಗಳು ಇರಲಿವೆ. ಇದು ಯೋಜನೆಯ ಅವಧಿಯಲ್ಲಿ ಗಗನಯಾತ್ರಿಗಳ ಸುರಕ್ಷತೆಯನ್ನು ಗಮನಿಸಲಿದೆ. ಅದರೊಡನೆ, ತುರ್ತು ಸಂದರ್ಭ ಎದುರಾದರೆ, ಸುರಕ್ಷತೆಗಾಗಿ ಅಗ್ನಿ ನಿವಾರಕ ಸೇರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಯೋಜನೆಯಾದ್ಯಂತ ತಡೆರಹಿತ ಸಂವಹನಕ್ಕೆ ಇಸ್ರೋ ಎರಡು ಸಂವಹನ ಉಪಗ್ರಹಗಳನ್ನು ಗಗನಯಾನ ಯೋಜನೆಯ ಉಡಾವಣೆ ಮುನ್ನವೇ ಜಿಯೋಸ್ಟೇಷನರಿ ಕಕ್ಷೆಗೆ ಉಡಾವಣೆಗೊಳಿಸಲು ಉದ್ದೇಶಿಸಿದೆ. ಈ ಉಪಗ್ರಹಗಳು ನಿರಂತರ ಸಂಪರ್ಕವನ್ನು ಏರ್ಪಡಿಸಿ, ಗಗನಯಾನ ಮತ್ತು ಯೋಜನಾ ನಿಯಂತ್ರಣ ವ್ಯವಸ್ಥೆಗಳ ನಡುವೆ ಸಂವಹನ ಸಾಧಿಸಲಿವೆ ಎಂದರು. ಗಗನಯಾನ ಯೋಜನೆಯಾದ್ಯಂತ ಗಗನಯಾತ್ರಿಗಳಿಗೆ ಮಾಹಿತಿ ಒದಗಿಸುವ ಸಲುವಾಗಿ ಕ್ಯಾಬಿನ್ಗೆ ಅಂತರ್ಜಾಲ ವ್ಯವಸ್ಥೆ ಒದಗಿಸುವ, ಎರಡು ಟಿವಿ ಪರದೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
ಟೆಸ್ಟ್ ವೆಹಿಕಲ್ ಉಡಾವಣೆ: ಟೆಸ್ಟ್ ವೆಹಿಕಲ್ ಡಿ1 (ಟಿವಿ ಡಿ1) ಉಡಾವಣೆ ಅಕ್ಟೋಬರ್ ತಿಂಗಳ ಕೊನೆಯ ಭಾಗದಲ್ಲಿ ನೆರವೇರುವ ನಿರೀಕ್ಷೆಗಳಿದ್ದು, ಇದು ಗಗನಯಾನ ಯೋಜನೆಯ ಪೂರ್ವಭಾವಿಯಾಗಿ ಕಾರ್ಯಾಚರಿಸಲಿದೆ. ಈ ಯೋಜನೆ ಒಂದು ಕ್ರ್ಯೂ ಮಾಡ್ಯುಲ್, ಮತ್ತು ಗಗನಯಾತ್ರಿಗಳು ಪ್ರಯಾಣಿಸುವ ಕ್ಯಾಬಿನ್ ಒಳಗೊಂಡಿರಲಿದೆ. ಇದನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿದ ಬಳಿಕ, ಅಲ್ಲಿಂದ ಕ್ರ್ಯೂ ಎಸ್ಕೇಪ್ ಹಂತಗಳನ್ನು ಪರೀಕ್ಷಿಸಲಾಗುತ್ತದೆ ಎಂದು ಗಿರೀಶ್ ಲಿಂಗಣ್ಣ ಮಾಹಿತಿ ನೀಡಿದರು.
ಯೋಜನಾ ನಿರ್ದೇಶಕರ ಪ್ರಕಾರ, ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ತುರ್ತು ಸಂದರ್ಭ ಎದುರಾದರೆ, ಭೂಮಿಯಿಂದ ಅಥವಾ ಸಮುದ್ರದಿಂದ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಲು ಹಾದಿ ರೂಪಿಸಲು ನೆರವಾಗುತ್ತದೆ. ಈ ಪರೀಕ್ಷಾ ನೌಕೆ ಗಗನಯಾನ ಯೋಜನೆಯ ಆರಂಭಿಕ ಹೆಜ್ಜೆಯಾಗಿದ್ದು, ಗಗನಯಾತ್ರಿಗಳನ್ನು ಕರೆದೊಯ್ಯಲು ವಿನ್ಯಾಸಗೊಳಿಸಿರುವ ಕ್ರ್ಯೂ ಮಾಡ್ಯುಲ್ ಒಳಗೊಂಡಿದೆ ಎಂದು ಹೇಳಿದರು.
ಇದರ ಪ್ರಾಥಮಿಕ ಉದ್ದೇಶ, ಕ್ರ್ಯೂ ಎಸ್ಕೇಪ್ ವ್ಯವಸ್ಥೆ ಪರಿಶೀಲಿಸುವುದು. ಕ್ರ್ಯೂ ಎಸ್ಕೇಪ್ ವ್ಯವಸ್ಥೆ ಅನಿರೀಕ್ಷಿತ ತುರ್ತು ಪರಿಸ್ಥಿತಿಗಳಲ್ಲಿ ಗಗನಯಾತ್ರಿಗಳ ಸುರಕ್ಷತೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಲಿಂಗಣ್ಣ ಈಟಿವಿ ಭಾರತಕ್ಕೆ ತಿಳಿಸಿದರು.
ಇದನ್ನೂಓದಿ: ಚಂದ್ರನ ಅಂಗಳದಲ್ಲಿ ಸಂಶೋಧನೆ ಹೇಗೆ?: ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ಮಾಹಿತಿ