ಬೆಂಗಳೂರು : ವಂಚಕ ಯುವರಾಜ್ನ ವಿಚಾರಣೆ ತೀವ್ರಗೊಳಿಸಿದಷ್ಟು ಒಂದೊಂದೇ ಸ್ಫೋಟಕ ವಿಚಾರಗಳು ಹೊರ ಬರುತ್ತಿವೆ. ಪ್ರಭಾವಿ ಸಚಿವರನ್ನು ತೋರಿಸಿ ಕಲರ್- ಕಲರ್ ಕಾಗೆ ಹಾರಿಸುತ್ತಿದ್ದ ಯುವರಾಜ್, ಸಚಿವರ ಹೆಸರಿನ ಲೆಟರ್ ಹೆಡ್ಗಳನ್ನು ಫೋರ್ಜರಿ ಮಾಡುತ್ತಿದ್ದನೆಂಬ ಅನುಮಾನ ಸದ್ಯ ಸಿಸಿಬಿಯನ್ನು ಕಾಡುತ್ತಿದೆ.
ಸಿಸಿಬಿಯಿಂದ ಬಂಧಿತನಾಗಿರುವ ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯನ್ನ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಡಿಸೆಂಬರ್ 16 ರಂದು ನಾಗರಭಾವಿಯ ಯುವರಾಜ್ ನಿವಾಸದ ಮೇಲೆ ಸಿಸಿಬಿ ಎಸಿಪಿ ನಾಗರಾಜ್ ನೇತೃತ್ವದ ತಂಡ ದಾಳಿ ಮಾಡಿತ್ತು. ದಾಳಿ ವೇಳೆ ಯುವರಾಜ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು, ಚಿನ್ನಾಭರಣ ಪತ್ತೆಯಾಗಿತ್ತು.
ಯುವರಾಜ್ ಮೊಬೈಲ್ನ ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ. ಯುವರಾಜ್ ಮೊಬೈಲ್ನಲ್ಲಿ ಪ್ರಭಾವಿ ರಾಜಕಾರಣಿಗಳು ಸೇರಿದಂತೆ ರಾಜ್ಯದ ಕೆಲ ಸಚಿವರ ಮೊಬೈಲ್ ನಂಬರ್ಗಳು ಹಾಗೂ ಆತನ ಮೊಬೈಲ್ ಗ್ಯಾಲರಿಯಲ್ಲಿ ನೂರಕ್ಕೂ ಹೆಚ್ಚು ಮಾಡೆಲ್ಗಳ ಫೋಟೋಗಳು ಪತ್ತೆಯಾಗಿದ್ವು.
ವಂಚನೆ ಕೇಸ್ನಲ್ಲಿ ಸಿಸಿಬಿಯಿಂದ ಯುವರಾಜ್ ಅರೆಸ್ಟ್ ಆಗ್ತಿದ್ದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಸಿಸಿಬಿಯಲ್ಲಿ ಹಲವು ವಂಚನೆ ಕೇಸ್ಗಳು ರಿಜಿಸ್ಟರ್ ಆಗಿದ್ವು. ಯುವರಾಜ್ ಮೊಬೈಲ್ ಪರಿಶೀಲಿಸಿದಾಗ ಸಚಿವರಾದ ವಿ.ಸೋಮಣ್ಣ, ಲಕ್ಷ್ಮಣ ಸವದಿ, ಸಿ ಪಿ ಯೋಗೇಶ್ವರ್ ಜೊತೆಗಿನ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ವು. ಸದ್ಯ ಯುವರಾಜ್ ಮನೆಯಲ್ಲಿ ಸಚಿವರ ಹೆಸರಿನ ಲೆಟರ್ ಹೆಡ್ಗಳು ಪತ್ತೆಯಾಗಿವೆ ಎಂಬ ಸ್ಫೋಟಕ ವಿಚಾರ ಹೊರ ಬಿದ್ದಿದೆ.
ಯುವರಾಜ್ ಮಿನಿಸ್ಟರ್ಗಳಿಂದ ಶಿಫಾರಸು ಮಾಡಿಸ್ತೀನಿ. ನಿಮ್ಮ ಕೆಲಸಗಳನ್ನು ಮಾಡಿಸಿ ಕೊಡುತ್ತೇನೆ ಎಂದು ಹಲವರಿಂದ ಹಣ ಪೀಕಿದ್ದಾನೆ. ಯುವರಾಜ್ನನ್ನ ಸಂಪರ್ಕ ಮಾಡಿದವರಿಗೆ ಮಿನಿಸ್ಟರ್ಗಳ ಜೊತೆಗಿನ ಫೋಟೋಗಳನ್ನ ತೋರಿಸಿ ಸಚಿವರುಗಳಿಗೆ ತುಂಬಾ ಆಪ್ತನಂತೆ ಬಿಂಬಿಸಿಕೊಳುತ್ತಿದ್ದ. ಸದ್ಯ ಯುವರಾಜ್ ಮನೆಯಲ್ಲಿ ಸಿಕ್ಕಿರುವ ಲೆಟರ್ ಹೆಡ್ಗಳ ಬಗ್ಗೆ ಯುವರಾಜ್ ಸಿಸಿಬಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.
ಕಳೆದ ಬಾರಿ ಯುವರಾಜ್ ಜೊತೆ ಸಚಿವರ ಫೋಟೋ ಲೀಕ್ ಆದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಸಿಸಿಬಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಸಂಬಂಧಪಟ್ಟ ಸಚಿವರಿಗೆ ಮೌಖಿಕವಾಗಿ ಸಿಸಿಬಿ ಅಧಿಕಾರಿಗಳು ಯುವರಾಜ್ ವಂಚನೆ ಬಗ್ಗೆ ಮಾಹಿತಿ ನೀಡಿದ್ದರು.
ಲೆಟರ್ ಹೆಡ್ ವಿಚಾರವಾಗಿ ಯುವರಾಜ್ನನ್ನ ವಶಕ್ಕೆ ಪಡೆದ ದಿನದಿಂದಲೂ ಅಧಿಕಾರಿಗಳು ಪ್ರಶ್ನೆ ಮಾಡ್ತಿದ್ದಾರೆ. ಆದರೆ, ಯುವರಾಜ್ ಈ ಬಗ್ಗೆ ಪೊಲೀಸರಿಗೆ ಯಾವ ಮಾಹಿತಿ ನೀಡ್ತಿಲ್ಲ. ಹೀಗಾಗಿ ಸಚಿವರ ಕಚೇರಿಗೆ ಯುವರಾಜ್ ಮನೆಯಲ್ಲಿ ಸೀಜ್ ಮಾಡಿರುವ ಲೆಟರ್ ಹೆಡ್ ಪ್ರತಿ ನೀಡಿ ಪರಿಶೀಲಿಸಿ ತಿಳಿಸಲು ತನಿಖಾಧಿಕಾರಿಗಳು ಮನವಿ ಮಾಡಲಿದ್ದಾರೆ.
ಯುವರಾಜ್ ಸಚಿವರ ಹೆಸರಿನ ಅಸಲಿ ಲೆಟರ್ ಹೆಡ್ ಬಳಸ್ತಿದ್ನಾ ಅಥವಾ ಸಚಿವರ ಲೆಟರ್ ಹೆಡ್ನ ನಕಲು ಮಾಡಿ ಹಣ ಮಾಡ್ತಿದ್ನಾ ಅನ್ನೋದು ಮುಂದಿನ ವಿಚಾರಣೆಯಿಂದ ಹೊರ ಬರಬೇಕಿದೆ.
ಇದನ್ನೂ ಓದಿ : ಅಡ್ಡಾದಿಡ್ಡಿ ಟ್ರ್ಯಾಕ್ಟರ್ ಓಡಿಸಿದ ಪ್ರತಿಭಟನಾಕಾರ.. ಪ್ರಾಣ ಉಳಿಸಿಕೊಳ್ಳಲು ಕಂಗೆಟ್ಟು ಓಡಾಡಿದ ಪೊಲೀಸ್!